Poem

ಮಾಗಿದ ಬೆಳಗಿನ ನಡಿಗೆ 

 

ದುರಿತ ಕಾಲದಲ್ಲೊಂದು ಮಾಗಿದ
ಬೆಳಕಿನ ನಡಿಗೆ.....

ನೆಲಕೆ ನಸುಬೆಳಕಿಳಿಯುವ ಹೊತ್ತಿನಲ್ಲಿ
ಕಾವಳ ಕವುಚಿಬಿದ್ದ ಒಡಲೊಳಗೆ
ಕಾವಲಿಲ್ಲದೆ ಹರಯವೊಲಿದ ಕನ್ನೆಯ
ಕಾಲುಗಳು ಟಪಟಪನೆ ಸದ್ದುಗುಟ್ಟುತ್ತ
ಹರಯವನೇ ಹುರಿಗೊಳಿಸಿ
ಬದುಕಿನೊಂದು ದಾರಿ ತೆರೆಯುತ್ತಾ
ನಸುಬೆವರ ಮೊಗಕೆ ಚಿಟ್ಟೆಯಂತೆ
ಮುತ್ತಿಟ್ಟ ಗರಿಗೆದರಿದ ಕೂದಲ
ಸೆಳೆಗಳ ತೂಗುತ್ತಾ
ಮುಂದೆ ಮುಂದೆ

ನೋಡಿ ನೋಡಿ ನೋಡದೆ
ನಡೆದರೂ ಆ ಚಿಟ್ಟೆಗಳೆಲ್ಲ
ಕರುಳೊಳಗಿಳಿದು ಪತರಗುಟ್ಟುತ್ತ
ಎನ್ನೊಳು ಎಗ್ಗಿಲ್ಲದೆ
ಮೊಟ್ಟೆಯಿಟ್ಟವು
ಈ ಚಿಟ್ಟೆಗಳು ಮತ್ಯಾರದೋ
ಹೊಟ್ಟೆಯೊಳಗೆ ಗೇಣಿಟ್ಟರೇ....
ದೇವರೇ....,
ಆ ಹುಡುಗಿಯ
ಕಥೆ?

ನಮ್ಮ ಹರಯದಲ್ಲೆಂದೂ ಇಣುಕದ ಶಂಕೆ
ರಕ್ತವೇರಿಳಿಯುವ ಹೊತ್ತಿನಲ್ಲಿ
ಉಸಿರೆಳೆದು ಬಿಟ್ಟರೂ ತಣಿಯದೆ,
ಮುಂಜಾನೆಯ ನಡಿಗೆ
ಒತ್ತಡಕ್ಕೆ ಸಿಲುಕಿ ಮನದೊಳಗೆ
ಚಿತ್ರ ಬರೆಯಿತು
ಮುಂದೆ..... ಮುಂದೆ

ಇಂದು ಹೆಣ್ಣುಗಳನ್ನು ಅಟ್ಟಾಡುತ್ತಿರುವ
ಮಂದೆಯ ಮಂದಿ
ಹುಡುಗಿಯ ಹಾರುವ ಕೂದಲಿಗೆ ಕಟ್ಟು
ಬಿಗಿದಂತೆ,
ಕೀಚಕನ ಸಂತಾನ ಸುತ್ತನೆರೆದು
ಎಳೆತಂದಂತೆ
ಬಾಯೊತ್ತಿ ಹಿಡಿದು ಗಹಗಹಿಸಿ ನಕ್ಕ ಕುರುಸಂತಾನವನು....
ಭೀಮ ತೊಡೆತಟ್ಟಿ ಕೊಂದು
ಅಟ್ಟಹಾಸಗೈದಂತೆ
ಅಂತೆ ಕಂತೆಗಳು
ಎಚ್ಚೆತ್ತ ಸೂರ್ಯನ ಕಣ್ಣಲ್ಲಿ
ಕತ್ತಲು ಬಯಲಾದಾಗ
ಓಡುವ ಆ ಹುಡುಗಿಯೂ
ಕಣ್ಮರೆ
ಮನ ಮಿಡಿದ ಚಿತ್ರವೂ .....

"ಬೆಳಗಿನ ನಡಿಗೆ ಅರಾಮದಾಯಕ "
ಅಕ್ಕಪಕ್ಕದವರ ಮಾತು
ಕಿವಿಯಲ್ಲಿ....
ಛಾಯಾಚಿತ್ರ : ಎಂ. ಆರ್‌. ಭಗವತಿ

ಹೆಚ್.ಆರ್. ಸುಜಾತಾ

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಕವನ ಸಂಕಲನ. ಪ್ರಸ್ತುತ ಕೆಂಡಸಂಪಿಗೆ ಡಾಟ್ ಕಾಮ್ ನಲ್ಲಿ ‘ಸುಜಾತಾ ತಿರುಗಾಟದ ಕಥನ’. ಅಂಕಣ ಬರಹದಲ್ಲಿ ನಿರತರಾಗಿದ್ದಾರೆ. ಕೃಷಿಸಂತ ಎಲ್.ನಾರಾಯಣರೆಡ್ಡಿ ಅವರ ಬದುಕಿನ ಕುರಿತ ಸಾಕ್ಷ್ಯಚಿತ್ರದ ನಿರ್ದೇಶಕರೂ ಆಗಿರುವ ಸುಜಾತಾ ಅವರ ಚೊಚ್ಚಲ ಕೃತಿಗೆ ಸಾಹಿತ್ಯ ಅಕಾಡೆಮಿಯ ದತ್ತಿನಿಧಿ ಬಹುಮಾನ ಲಭಿಸಿದೆ. 

More About Author