Poem

ಮುಖವಾಡದಾಕೆ

 

ಒಂದು ದಿನ ಗುಲಾಬಿಕೊಳ್ಳಲು
ಅಂಗಡಿಯೊಂದರ ಮುಂದೆ ನಿಂತೆ
ಗುಲಾಬಿ ಕೊಟ್ಟ ಅದರ ಮಾಲೀಕೆ
ಪುರಾತನ ನನ್ನ ಗೆಳತಿ
ಎಂಬುದನ್ನು ಅರಿತು ಪುಳಕಗೊಂಡೆ
ಆಕಸ್ಮಿಕವಾಗಿ ಸಿಕ್ಕ ಆಕೆ, ಹಳೆ ಪ್ರೇಮದ ಕೆದಕಿಗೆ ಅವಕಾಶಿಸದೆ
ಅದೇ ಗತ್ತಿನಲ್ಲಿ ಬೀಳ್ಕೊಟ್ಟಳು.

ಮತ್ತೊಂದು ದಿನ ಅದೆ ರಸ್ತೆಯ
ಅದೇ ತಿರುವಿನ ಮಾಲೀಕೆ
ಈಗ ಮುಖವಾಡದ ಅಂಗಡಿ ಇಟ್ಟಿದ್ದಳು.
ಕೊಳ್ಳಲು ನನಗೆ ಕಾರಣವಿರಲಿಲ್ಲ
ಆದರೂ ಹೋಗಿ
ಹನುಮಂತನ ಮುಖ ಊದಿರುವ
ಎರಡು ಮೂತಿ ಕೊಂಡೆ
ಮೀಸೆ ಬಲಿತ ನಾ..
ಅದನ್ನು ಲೆಕ್ಕಿಸದೆ ಮಕ್ಕಳಂತೆ ಮುಖಕ್ಕೆ ತೊಟ್ಟರೂ
ಒಂಚೂರು ಗೆರೆ ಕೊಂಕಿಸದ ಆಕೆ
ಚಿಲ್ಲರೆ ಕೊಟ್ಟು ಕಳುಹಿಸಿದಳು

 

 

 

 

 

 

 

 

 

 

 

 

 

 

 

 

ಮಾರನೆ ದಿನ ಆಕೆ
ಖಾಯಂ ಗಿರಾಕಿಯಾಗಿದ್ದ ನನ್ನನ್ನೇ
ಬೋಣಿಗೆಗೆಂದು ಕಾದಿದ್ದಳು.
ಈಗ ಆಕೆ ರಸಗೊಬ್ಬರದ ಅಂಗಡಿ ಇಟ್ಟಿದ್ದಳು.
ಕೃಷಿಕನಲ್ಲದ ನನಗೆ ಅವಶ್ಯಕತೆ ಇಲ್ಲವೆಂಬುದ ತಿಳಿದೂ..
ಎಳ್ಳಷ್ಟು ಅನುಕಂಪಿಸದೆ
ಕೀಟ ನಾಶಕ ಮಾರಿ ಕಳುಹಿಸಿದಳು‌

ಈಗ ಗೆಳೆಯರು ಕೇಳುತ್ತಿದ್ದಾರೆ
ಗುಲಾಬಿ, ಮುಖವಾಡ, ಕೀಟನಾಶಕ ಯಾವುದಿರಲಿ ಎಂದು.
ಅವರಿಗೆ ತಿಳಿದಿರಲಿಕ್ಕಿಲ್ಲ
ಅವಳೆದೆಯ ಗುಲಾಬಿಯೇ
ಇನ್ನು ನನ್ನನ್ನ ಗಿರಾಕಿಯಾಗಿಯೇ ಉಳಿಸಿದೆ ಎಂದು

ಗುರುಪ್ರಸಾದ್‌ ಕಂಟಲಗೆರೆ

ತಮ್ಮ ಅನುಭವಗಳನ್ನು ಗಟ್ಟಿಯಾಗಿ ಕಥೆಗಳ ಮೂಲಕ ದನಿಸಿದವರು ಗುರುಪ್ರಸಾದ್‌ ಕಂಟಲಗೆರೆ. ಮೂಲತಃ ತುಮಕೂರಿನ ಕಂಟಲಗೆರೆಯವರು. ವೃತ್ತಿಯಲ್ಲಿ ಶಿಕ್ಷಕರು. ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ಪ್ರೇಮವನ್ನು ಸಮಾನವಾಗಿ ನಿರ್ವಹಿಸುತ್ತಿರುವವರು. ತಮ್ಮ ಸಂವೇದನೆಗಳನ್ನು ಅಚ್ಚರಿ ಎನ್ನುವಂತೆ ಅಚ್ಚಿಳಿಸುವ ಯುವ ಬರೆಹಗಾರ. ಪ್ರಜಾವಾಣಿ, ವಿಜಯಕರ್ನಾಟಕ ಕತಾ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನ ಪಡೆದಿದ್ದಾರೆ. 2017 ನೇ ಸಾಲಿನ ‘ಅನನ್ಯ ಪ್ರಶಸ್ತಿ’ ಅವರ ’ಗೋವಿನ ಜಾಡು’ ಕತಾ ಸಂಕಲನಕ್ಕೆ ಲಭಿಸಿದೆ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಅವರ ಮತ್ತೊಂದು ಕೃತಿ.

More About Author