Poem

ಮೂರನೇ ಕನಸು 

ನನ್ನೆಡೆಗೇ ಬರುತ್ತಿರುವ
ಚೆಲುವ ಚೆನ್ನಿಗರಾಯ

ಆರಡಿ ಬಯಲ ದಾಟಿ
ಏಳಡಿ ಕಡಲ ಸೀಳಿ
ಎಂಟನೇ ಅಡಿ ಸೀದಾ
ನನ್ನೆದೆಯ ಮೇಲೆಯೆ!

ಎಷ್ಟು ದಿನವಾಯ್ತು
ಮಳೆಯಿಲ್ಲ ನೆಲಕೆ
ಮುತ್ತಿಲ್ಲ ತುಟಿಗೆ
ಗಾಯಗೊಂಡ ನೆಲ
ಒಣಗಿದ ತುಟಿ
ಅವನ ಕಣ್ಣೊಳು ಹೊಕ್ಕ ನನಗೆ
ತಣ್ಣನೆ ಕತ್ತಲ ದರ್ಶನ

ಯಾಕೆ ಬರುತ್ತಿರುವನು ಈಕಡೆ
ಯಾರು ತೋರಿದರು ಈ ದಾರಿ
ಏನಿರಬೇಕು ಅವನ ಹೆಸರು
ಯಾರಿಟ್ಟರು ಆ ಹೆಸರು

ಮೂರಡಿ ನೆಲವ ಹಾಸಿ
ನಾಲ್ಕಡಿ ದೂರದಿ ನಿಂದು
ಐದಡಿ ನೆರಳ ಮೇಲೆ ನೆರಳು
ಅವನೊಳಹೊಕ್ಕ ನನಗೆ
ಯಾವ ಹೆಸರು
ಯಾವ ದೆಸೆ

ಗಾಯಗೊಂಡ ನನಗೆ ಅವನಿಗೆ
ಈ ರಾತ್ರಿಗೆ
ತೊಗಲಿನಾಸರೆ
ಕತ್ತಲಿನಾಸರೆ
ಬಿಟ್ಟರೆ

ಹಾದುಬಂದ ಬಯಲು
ದಾಟಿಬಂದ ಕಡಲು
ಹಾಸಿ ಮಲಗಿದ ನೆಲ
ಪಾರಾಗಬೇಕಿದೆ ನಾನು ನನ್ನಿಂದ
ಅವನು ಅವನಿಂದ
ಇಬ್ಬರೂ ಈ ಕನಸಿನಿಂದ

ಭುವನಾ ಹಿರೇಮಠ

ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ  ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. 

More About Author