Poem

ನದಿಗಳಿಗೂ ನೆನಪಿದೆ

ದಟ್ಟ ಕಾನನದ ನಡುವೆ
ಪುಟ್ಟ ಬುಗ್ಗೆಯಾಗಿ
ಹಾದಿಯುದ್ದಕ್ಕೂ ಸಾಗುವ
ನದಿಗಳಿಗೂ ನೆನಪಿದೆ
ನಾಗರೀಕತೆಗಳ ಯಾನ

ಹಸಿರ ಬನಿ ಉಕ್ಕಿ
ಊರೂರು ಬೆಳೆದು
ಕಾಡೆಲ್ಲಾ ನಾಡಾಗಿ
ನಾಡೇ ಜನರ ಬೀಡಾದ ಕತೆ
ನದಿಗಳಿಗೂ ನೆನಪಿದೆ

ಪುಟ್ಟ ಹಳ್ಳ ಸಣ್ಣ ಝರಿ
ಪುಟ್ಟ ತೊರೆಗಳೊಂದಾಗಿ
ಭೋರ್ಗರೆವ ನದಿ ಕಡಲ ಸೇರುವಾಗ
ಹರಿದು ಬಂದ ಹಾದಿಯನು

ಮರೆಯುವುದಿಲ್ಲ.
ನದಿಗಳಿಗೂ ನೆನಪಿದೆ
ನಾಗರೀಕತೆಯ ವಿಕಾಸ

ಬೆಟ್ಟ ಗುಡ್ಡಗಳ ಏರು ತಗ್ಗು
ಜಿಗಿಯುವ ಜಲಪಾತ
ತಣ್ಣಗೆ ಹರಿವ ನಿನಾದ
ಬಿರುಸಾದ ಓಟ
ಕೊಚ್ಚಿಕೊಂಡು ಹೋಗುವ ಪ್ರವಾಹ
ಸಿಗಲಾರದ ಆಳ
ದಣಿವಿಗೆ ನಿರಾಳ
ನದಿಗಳಿಗೆ ಎಲ್ಲವೆಲ್ಲವೂ ನೆನಪಿದೆ

ಭರವಸೆಗೆ ಮೊಗೆ ಮೊಗೆವ ನೀತಿ
ಕೋಪಕ್ಕೆ ಒಂದು ರೀತಿ
ಒಲುಮೆಗೆ ಮೈ ತುಂಬಾ ದವಸ ಧಾನ್ಯ
ಹರಿ ಹರಿದೂ
ಕಾಡು ನಾಡನ್ನ ದಾಟಿ
ಕಡೆಗೆ ಶರಧಿಯ
ಸೇರಿ ಸನ್ಯಾಸಿಯಾದಂತೆ
ಪ್ರೀತಿಗೆ ಬೊಗಸೆ ನೀರು
ನೀರ ಮೈ ಧರಿಸಿದ ನೀರೇ
ನಾನೂ ನಿನ್ನಂತೆ ನೀರಾಗಬೇಕು.

- ಶಾಂತಾ ಜಯಾನಂದ್

ಶಾಂತಾ ಜಯಾನಂದ್

ಕವಯತ್ರಿ ಶಾಂತಾ ಜಯಾನಂದ್ ಅವರು ಮೂಲತಃ ಚಿಕ್ಕಮಗಳೂರು . ಜಿಲ್ಲೆಯ ತರೀಕೆರೆಯವರು. ಶಿವಮೊಗ್ಗದಲ್ಲಿಯೇ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರೈಸಿದರು. ಬಾಲ್ಯದಿಂದಲೇ ಸಾಹಿತ್ಯ, ಕ್ರೀಡೆ, ನಾಟಕ ಮತ್ತು ಗಾಯನದಲ್ಲಿ ಆಸಕ್ತಿ. ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದ ಶಾಂತಾ ಜಯಾನಂದ್ ಅವರು ಸಾಹಿತ್ಯಿಕ ಚರ್ಚೆ, ಸಂಗೀತ, ಕಾವ್ಯರಚನೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸಮಾಜಶಾಸ್ತ್ರ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವೀಧರರು. ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪದವಿ ಪೂರೈಸಿದ್ದಾರೆ. ದೂರದರ್ಶನದ ಚಂದನವಾಹಿನಿಯಲ್ಲಿ ನಿರೂಪಕಿಯಾಗಿ ಹಾಗೂ  ಡಾಕ್ಯುಮೆಂಟರಿ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಂ.ಎಸ್ ರಾಮಯ್ಯ ಕಾನೂನು ಮತ್ತು ಮ್ಯಾನೇಜ್ ಮೆಂಟ್ ಕಾಲೇಜು ಹಾಗೂ ಇಂಡಿಯನ್ ಅಕಾಡೆಮಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದಾರೆ. 

ಕೃತಿಗಳು: ಹುದುಗಿಟ್ಟ ಭಾವಗಳ ಮತ್ತೆ ನುಡಿಸಿ (ಕವನ ಸಂಕಲನ)

More About Author