Poem

‌ನಮ್ಮೊಳಗೂ ಒಂದು ಟ್ರಿಗ್ಗರ್ ಇದೆ

ಕತೆಗಾರ್ತಿ ಸುನಂದಾ ಕಡಮೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ತಮ್ಮ ಬರಹಗಳಲ್ಲಿ ನೋಟ ಚೆಲ್ಲುವ ಸುನಂದಾ ಅವರು ಸೀಳುದಾರಿ (ಕವನ ಸಂಕಲನ), ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು (ಕಥಾ ಸಂಕಲನ) ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು ಅವರ ‘‌ನಮ್ಮೊಳಗೂ ಒಂದು ಟ್ರಿಗ್ಗರ್ ಇದೆ’ ಕವಿತೆ ಇಲ್ಲಿದೆ.

ಅಂಗಳದ ತುಂಬ ಹರವಿ ಕೂತಿದ್ದಾನೆ ಅಪ್ಪ
ಭತ್ತದ ಕಾಳು
ಮೇಲೆ ಹಸಿರ ಮರದಲ್ಲಿ ಚಿಂವ್ಚಿವ್
ಕೂಗುತ್ತಿರುವ ಹಕ್ಕಿ

ಇಂಗ್ಲೀಷಿನ Y ಆಕಾರದ ಮರದ ತುಂಡಿಗೆ
ಬಿಗಿ ಕಟ್ಟಿದ ರಬ್ಬರ್
ಪುಟ್ಟ ಬೆಳಗಲ್ಲು ಇಟ್ಟು ಚಿಟ್ಟನೆ ಹೊಡೆಯಬೇಕಿತ್ತು
ಚಿಲಿಪಿಲಿ ದಿಕ್ಕಿಗೆ
ಬಿಲ್ಲು ಕಲ್ಲು ಎರಡೂ
ನಮ್ಮದೇ ಆಗಿದ್ದಾಗ
ಹಕ್ಕಿಪಕ್ಕಿಯ ಹೊಟ್ಟೆಯ ಹೊಣೆ ಯಾವ ಲೋಕದ್ದು?
ನೆಲದ ಮಣ್ಣಲ್ಲೇ ಬೆಳೆದ ಕಾಳಲ್ಲಿ
ನಮ್ಮ ಪಾಲೆಷ್ಟು? ಹಕ್ಕಿಯ ಪಾಲೆಷ್ಟು?

ಹಸಿವಿಲ್ಲದ ಹೆಗಲ ಕೋವಿಯಲ್ಲಿ
ಕಸುವಿಲ್ಲದ ಧರ್ಮದ ನಳಿಗೆ
ಬಲವಿರುವ ಮುಷ್ಠಿ ದಕ್ಕಿಸಿಕೊಳ್ಳುತ್ತದೆ

ನಮ್ಮೊಳಗೂ ಒಂದು ಟ್ರಿಗ್ಗರ್ ಇದೆ
ಬೆರಳು ಎಷ್ಟು ವೇಗ ಅಮುಕುತ್ತದೋ
ಅಷ್ಟು ದೂರ ಹಕ್ಕಿಯ ಗುಂಡಿಗೆ ಸೀಳುತ್ತದೆ ಗೋಲಿ

ಸ್ವಚ್ಛಂದ ಗರಿಗೆದರಿ ಹಾರುವ ರೆಕ್ಕೆಗಳಿಗೆ ಕಡಿವಾಣ ಹಾಕಿ
ರೆಕ್ಕೆ ಕಿತ್ತು ಉಲ್ಟಾ ಹಚ್ಚಿ ತಮಾಷೆ ನೋಡುತ್ತಿದೆ
ತುಚ್ಛ ಮನಸ್ಸು ಉಲ್ಟಾ ಹಾರುವಾಗ ಸೆರೆ ಹಿಡಿಯುತ್ತದೆ
ಇಡೀ ದೇಹವನ್ನು ಸ್ಪೋಟಿಸಿ ಛಿದ್ರಗೊಳಿಸುತ್ತದೆ

ತಡಪಡಿಸಿ ನೆಲಕ್ಕೆ ಬೀಳುವ ಜೀವದ ತೂಕ
ಯಾವ ತಕ್ಕಡಿಯಲ್ಲಿಟ್ಟು ತೂಗುವುದು?

ಅಲ್ಲಿ ಗೂಡಲ್ಲಿ ಗುಟುಕಿಗೆ ಕಾಯ್ವ ಮರಿಗಳು
ಕಾಳಿಗಾಗಿ ಕಾದೂ ಕಾಯ್ದೂ ಮರಗಟ್ಟುವ ಕಾಳಜಿಯಿಂದ ಮನೆಯೊಳಗಿರುವ ಅಪ್ಪ
ಕಾಯ್ವ ನೋಟ ಹೇಗಿರಬೇಕೆಂದು
ಕಲಿಸುತ್ತಿದ್ದ -
'ಹೆದರಿ ಓಡಿಸಲಷ್ಟೇ ಬಳಸಬೇಕು
ಚಿಟಬಿಲ್ಲ ಹರಳು
ಹಕ್ಕಿಯ ಗುರಿಗಲ್ಲ'

ಹಕ್ಕಿ ಹಾರಿ ಕ್ಷಿತಿಜದ ವಿಸ್ತಾರ ಅಳೆಯುತ್ತಿತ್ತು
ಚುಂಚಲ್ಲೇ ಹೆಕ್ಕಿದ ಭತ್ತ ಸಿಪ್ಪೆಯಾಗಿ ನೆಲ ಸೇರುತ್ತಿತ್ತು.

ಚಿತ್ರ: ಲೀಲಾ ಅಪ್ಪಾಜಿ

ಸುನಂದಾ ಕಡಮೆ

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕಲೇಸಂ ಸುಧಾಮ ದತ್ತಿನಿಧಿಯ 'ತ್ರಿವೇಣಿ' ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ದೊರೆತಿದೆ. 

 

 

More About Author