Poem

ನೀನು ಮಗಳಾಗಿರುತ್ತಿದ್ದರೆ....

ನೀನು ಮಗಳಾಗಿರುತ್ತಿದ್ದರೆ
ಅಮ್ಮ ಹಿತವಾದ ಹೂಮುಡಿಸಿ
ಆನಂದಪಡುತ್ತಿದ್ದಳು

ಕಾಲಗೆಜ್ಜೆ,ಬಳೆ, ಕಿವಿಯ ಅಂದದ
ಓಲೆ
ಮೂಗುಬಟ್ಟು
ಕಾಡಿಗಿಟ್ಟ ಕುಡಿಹುಬ್ಬು
ನಿನ್ನದೇ ಲಿಪ್ಟಿಕ್ಕು
ಮೈನೆರೆತ ಮಗಳೆಂದು ನಿವಾಳಿಸುತ್ತಿದ್ದಳು

ನೀನು ಹೆಣ್ಣುಮಗಳಾಗಿದ್ದರೆ
ನಿನ್ನುದ್ದದ ಸೀರೆಯುಡಿಸಿ
ಹಬ್ಬಕ್ಕೆಲ್ಲ ಮನೆಯ ಸಿಂಗರಿಸಿ
ಹೊಸ ಹಾಲು ಉಕ್ಕಿಸಿ ಸಂಭ್ರಮಿಸುತ್ತಿದ್ದಳು.

ನೀನೋ ಗಂಡುಮಗುವಾದೆ
ಆದರೂ ಅಮ್ಮನಿಗೆ ನೆರವಾದೆ
ಅವಳ ಅಡುಗೆಮನೆಯ ಕಾಯಕದಲ್ಲಿ ನಿನ್ನದೂ
ಒಂದು ಪಾಲು
ಮಗನಲ್ಲಿ ಮಗಳನ್ನು ಕಂಡ ಅಮ್ಮನೆದೆಯ
ಅಕ್ಕರೆಯ ಸವಿಹಾಲು.

-ನಿಂಗಪ್ಪ ಮುದೇನೂರು

ನಿಂಗಪ್ಪ ಮುದೇನೂರು

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 1970 ಜೂನ್‌ 01ರಂದು ಜನನ. ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿ ಕಾರ್ಯನಿರ್ವಹಣೆ. 

ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’ -  ದರೋಜಿ ಈರಮ್ಮ ಅವರ ಆತ್ಮಕಥನವನ್ನು ನಿರೂಪಿಸಿದ್ದಾರೆ.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕೃಷಿ ಸಾಧಿಸಿರುವ ಅವರು ‘ಸೊಂಡೂರು ಕುಮಾರಸ್ವಾಮಿ’, ‘ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು’ ಅವರ ಸಂಶೋಧನಾ ಕೃತಿಗಳು. ‘ಬಿಚ್ಚುಗತ್ತಿಯ ಎದೆಯಲ್ಲಿ’ ಅವರ ನಾಟಕ ಕೃತಿ. ‘ಕಾಡಿನ ಕೊಳಲಿಗೆ ನಾಡಿನ ಸ್ವರ’ , ಜನಪದ ಕಥೆ ಮತ್ತು ಗೀತೆಗಳು-ಗುಲಬರ್ಗಾ.ವಿ.ವಿ ಪಠ್ಯ, ಬುರ್ರಕಥಾ ಈರಮ್ಮ:ಜೀವನ ಚರಿತ್ರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ)ಯಡಿಯಲ್ಲಿ ಗು.ವಿ.ವಿ ಪದವಿಗೆ ಪಠ್ಯ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. 

More About Author