Poem

ನೆರಿಕೆ 

ಕೊಯ್ದು ಲೆಕ್ಕಿಯ ಸಿವುಡು ತಂದು
ಹಸಿರು ಆರುವ ಮುನ್ನ
ಮಲ್ಲಿಗೆಯಂತೆ ಜೋಡಿಸಿ ಹೆಣೆದು
ತ್ರಿಭುಜಾಕಾರದಲಿ ಬಂಧಿಸಿ
ತಲೆ ಮೈ ಸುತ್ತೆಲ್ಲಾ ಹೊನ್ನರಿಕೆ
ಹುಲ್ಲು, ಬಿಳಿಜೋಳದ ದಂಟು
ಪುಣ್ಯಕ್ಕೊದಗಿದರೆ ಅರ್ಧ ತೆಂಗಿನ ಗರಿ
ಎಲ್ಲವೂ ಹದವಾಗಿ ಕಲೆತು
ಕಲಿತು
ಬಾಗಿ ನಿಂತರೆ
ಅವ್ವನ ಬದುಕ ಜಗುಲಿಯೊಂದು ಮೂಡಿದಂತೆ.


ನೆಲಕೆ ಸಗಣಿಯ ಸಾರಿ
ನೆರಿಕೆಯ ಮೈಗೆ ಈ ಸುಗಂಧವನೆ ಬೀರಿ
ಒಳಗಿಂದ
ಹೊರಗಿಂದ
ಸುತ್ತ ಜಲದ ತಿಳಿವಿನಿಂದ
ನೆರಿಕೆಯ ಮಾತು ನೆರಿಕೆಯಲ್ಲೇ ಕೂಡಿ
ಹಬ್ಬಗಳ ಹೂಡಿ
ದೇವರ ಎಡೆ ಮಕ್ಕಳ ಮಡಿಲು ಸೇರಿ
ಬೆಳೆದು ನಿಂತವು ಫಲ
ಅವ್ವನ ಬಾಳತಪಸ್ಸಿನ ನೆಲ.

ಮುಳ್ಳಿಲ್ಲದ
ನಂಜಿಲ್ಲದ
ಅವ್ವನ ಆ ನೆರಿಕೆ ಈಗ
ಒಂದು ಕನಸು
ಚಿಮಣಿಯ ದೀಪ ಕುಡಿದ ಆ ಕನಸಿನ ಮಗ
ನಾನಾದುದೇ ಒಂದು ಸೊಗಸು.


ಚಿಮಣಿ ಎಂದರೆ ಅವ್ವ
ಅವ್ವನೆಂದರೆ ಚಿಮಣಿ


ಮೊನ್ನೆ ನನ್ನವಳು ತನ್ನ ಸೀರೆಯ ನಿರಿಗೆ ತೀಡುವಾಗ
ಅವ್ವನ ನೆರಿಕೆ ನೆನಪಾಯ್ತು
ಚಿಮಣೀ…!
ನನ್ನವಳು ಮುಡಿಸುವ ನಿತ್ಯದ
ದೇವರ ದೀಪವೇ ಎಂದೆನ್ನಿಸಿತು

ಚಿತ್ರ: ಎಸ್‌. ವಿ. ಹೂಗಾರ್‌

* ನೆರಿಕೆ - ಲೆಕ್ಕಿಯ ನೆರಿಕೆ ಮನೆ: ಬಯಲು ಸೀಮೆಯಲ್ಲಿ ಗುಂಪು ಗುಂಪಾಗಿ ಬೆಳೆಯುವ ಲೆಕ್ಕಿ ಗಿಡವನ್ನು ಕೋಯ್ದು ತಂದು, ತ್ರಿಭುಜಾಕಾರದಲ್ಲಿ ಜೋಡಿಸಿ ಬಟ್ಟೆ ನೇಯ್ದಂತೆ ಹುರಿಯಿಂದ ಬಿಗಿದು ಅದಕ್ಕೆ ಸೆಗಣಿ, ಕೆಮ್ಮಣ್ಣು, ಬಿಳಿ ಸುಣ್ಣವನ್ನು ಬಳಿದರೆ ಲೆಕ್ಕಿಯ ನೆರಿಕೆ ಮನೆ ಸಿದ್ಧ. ಹಳ್ಳಿಗಳಲ್ಲಿ ಸ್ನಾನದ ಬಚ್ಚಲುಗೆ ‘ಲೆಕ್ಕಿಯ ನೆರಿಕೆ’ಯನ್ನೂ ಹಲವರು ಈಗಲೂ ಕಟ್ಟಿರುತ್ತಾರೆ*

ನಿಂಗಪ್ಪ ಮುದೇನೂರು

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 1970 ಜೂನ್‌ 01ರಂದು ಜನನ. ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿ ಕಾರ್ಯನಿರ್ವಹಣೆ. 

ಮಗುವಿನ ಧ್ಯಾನದಲ್ಲಿ, ಮಣ್ಣಿನ ಕವಿತೆ, ಕಡಲ ಕವಿತೆ, ನನ್ನ ಗಾಂಧಿ’ ಅವರ ಪ್ರಮುಖ ಕವನ ಸಂಕಲನಗಳು. ಜೀ.ಶಂ.ಪ ರವರ 'ಜನಪದ ಖಂಡಕಾವ್ಯಗಳು’, ಕುವೆಂಪು ಅವರ 'ಶೂದ್ರ ತಪಸ್ವಿ', ಜಾಗತೀಕರಣ ಮತ್ತು ಗಾಂಧಿ, ಸಂಸ್ಕೃತಿ ದರ್ಶನ, ಅಕ್ಷರ ಮತ್ತು ಅರಿವು ಅವರ ವಿಮರ್ಶಾ ಕೃತಿಗಳು. ‘ಬುರ್ರಕಥಾ ಈರಮ್ಮ: ಅಲೆಮಾರಿಯ ಆತ್ಮಕಥನ’ -  ದರೋಜಿ ಈರಮ್ಮ ಅವರ ಆತ್ಮಕಥನವನ್ನು ನಿರೂಪಿಸಿದ್ದಾರೆ.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿಯೂ ಕೃಷಿ ಸಾಧಿಸಿರುವ ಅವರು ‘ಸೊಂಡೂರು ಕುಮಾರಸ್ವಾಮಿ’, ‘ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು’ ಅವರ ಸಂಶೋಧನಾ ಕೃತಿಗಳು. ‘ಬಿಚ್ಚುಗತ್ತಿಯ ಎದೆಯಲ್ಲಿ’ ಅವರ ನಾಟಕ ಕೃತಿ. ‘ಕಾಡಿನ ಕೊಳಲಿಗೆ ನಾಡಿನ ಸ್ವರ’ , ಜನಪದ ಕಥೆ ಮತ್ತು ಗೀತೆಗಳು-ಗುಲಬರ್ಗಾ.ವಿ.ವಿ ಪಠ್ಯ, ಬುರ್ರಕಥಾ ಈರಮ್ಮ:ಜೀವನ ಚರಿತ್ರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ)ಯಡಿಯಲ್ಲಿ ಗು.ವಿ.ವಿ ಪದವಿಗೆ ಪಠ್ಯ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. 

More About Author