Poem

ನಿದಿರೆಯ ಬರ

ಕಣ್ಣುಮುಚ್ಚಿದರೆ
ಭೂತ, ವರ್ತಮಾನ, ಭವಿಷತ್ತುಗಳ ಕಲಸುಮೇಲೋರಗ
ಕಪ್ಪು ಬಿಳಿಪಿನ ನಡುವೆ ಕೆಲವು ಬಣ್ಣಗಳು
ಅಪ್ಪಲು ಹಾತೊರೆಯುವ ಹಲವು ಮಣ್ಣುಗಳು

ಕಣ್ಣಿನಾಳದಲೆಲ್ಲೋ, ಕತ್ತಲಲಿ ಮಿನುಗುವ ನಕತ್ರಬಿಂದು
ಸೂಕ್ಷ್ಮಪ್ರದೇಶದಲಿ ಅಳುವ ಮಗುವಂತೆ
ಆಲೋಚನದಲೆಗಳು ಎದ್ದೆದ್ದು ಕುಣಿವಂತೆ ಮುಗಿಲು ಮುಟ್ಟಲು
ಮನದಾಳದಲಿ ಮಿಸುಕುವ ಹುಳಗಳು
ಮುಂದೇನೆಂಬ ಭಯಗಳು

ಸುತ್ತಲೂ ಇರುವುದು ನನ್ನ ತರಹದವರೇ, ಮನುಷ್ಯರು
ಭಯವಾಗುವುದಿಲ್ಲ ಪ್ರಾಣಿ -ಪಕ್ಷಿಗಳಿಂದ
ನನ್ನ ರೂಪದವರಿಂದಲೇ ಆಘಾತವಾಗುವುದು-
ವಿಪರ್ವ್ಯಾಸವಲ್ಲವೇ?

ಇರಬಹುದು, ಕತ್ತಲಲಿ ಕರಗಿದವರು
ಮನೆಯಲ್ಲೇ ಮಣ್ಣಾದವರು
ಕೊನೆಯಲ್ಲೇ ಉಸಿರಡಗಿದವರು
ಆಕಾಶಕ್ಕೇರಿ ಉರುಳಿದವರು
ಮನ ಆವರಿಸಿಕೊಂಡವರು

ಸುಳಿದಾಡುತ್ತವೆ ಕನಸುಗಳು, ನೆರಳುಗಳಂತೆ
ರಾತ್ರಿ ಮಂದಬೆಳಕಿನಲಿ
ಪಕ್ಕನೆ ಕಣ್ತೆರೆದರೆ, ಮಾಯವಾಗುತ್ತವೆ
ಒಳಗೊಂದು ರೂಪ, ಹೊರಗೊಂದು ರೂಪದಲಿ
ಕಾಡುತ್ತವೆ

ಸುಗುಮವಾಗುವದೇ ದಾರಿ
ಹೊರಳುವುದೇ ಕನಸು ನನಸಹಾದಿಗೆ
ಎದ್ದೆದ್ದು ಕುಣಿಯುವ ಭಾವಗಳ ಭಾರಕ್ಕೆ
ಮುಗಿವುದೆಂದು
ನಿದಿರೆಯ ಬರ?

-ಎಂ.ವಿ ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author