Poem

ಓ ನನ್ನ ಚೇತನ

ಮೂರುಕಾಸಿನ ಜೋಪಾನಕ್ಕೆ
ಆರುಕಾಸು ಖರ್ಚು ಮಾಡಿ ಕಟ್ಟಿದ ಮನೆ
ಹಾವಾಗಿ ಸುತ್ತಿಕೊಳ್ಳುವ ಸಂಬಂಧಗಳು
ಕೋಪದ ದಳ್ಳುರಿ
ಅಸಹಾಯಕತೆಯ ಮಿಡುಕು
ಅಷ್ಟಿಷ್ಟು ನಗೆ ಆವಿ ಹೊಗೆ

ಹೊಳೆಯುವ ಚಂದ್ರ-ರಸ್ತೆಯಲ್ಲಿ ಬಿದ್ದರೂ
ಯಾರೂ ಕದ್ದೊಯ್ಯದ ಚಿನ್ನದ ಪದಕ
ಹದಿನಾರರ ಹುಡುಗಿಯ ಕೆನ್ನೆಗೆಂಪಿನಂತೆ
ಅರಳಿದ ದಾಸವಾಳ
ನೂರು ಹಾಡಿನ ನೆನಪು ತರುವ ತಂಗಾಳಿ
ಗುರಿಯ ಆತಂಕವಿದೆ ಮೋಡ
ಬೆಳಕಿನ ಗಗನ ವಿಸ್ತಾರ
ತನ್ನದೆಂಬ ಗತ್ತಿನ ಹಕ್ಕಿ
ಮನೆಯ ಹೊರಗೆ ರಾಶಿ ರಾಶಿ ನಕ್ಷತ್ರ
ನೋಡುವ ಆಸೆ
ಅಡುಗೆಮನೆ, ಊಟದ ಮನೆ
ಹಾಲು, ವರಾಂಡ, ಹೊಸ್ತಿಲುಗಳು
ಬರುವುದೆಂದರೆಏಳು ಕಡಲು ಏಳು ಬೆಟ್ಟ ಏಳು ಕೋಟೆ

ಕಳೆದುಬಿಡುವುದೆ ಬದುಕು-ಓದುವ ಮೊದಲೇ
ಗಾಳಿಗೆ ಮಗುಚಿದ ಪುಟದ ಹಾಗೆ

- ಕೆ.ಆರ್. ಸಂಧ್ಯಾರೆಡ್ಡಿ

ವಿಡಿಯೋ
ವಿಡಿಯೋ

ಕೆ. ಆರ್‌. ಸಂಧ್ಯಾರೆಡ್ಡಿ

ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್  22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್‌ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. 

ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್‌ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು.  ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ಬೇಟೆ, ಗ್ರಾಮೀಣ ಉಡುಗೆ ತೊಡುಗೆ, ಗ್ರಾಮೀಣ ವೃತ್ತಿಗಳು, ಜಾನಪದ ಸಮಾಚಾರ. ಕವನ ಸಂಕಲನ : ಮೂವತ್ತೈದರ ಹೊಸ್ತಿಲು, ಇದು ಇನ್ನೊಂದು ಲೋಕ, ಈ ಪ್ರೀತಿಯೊಳಗೆ, ಬೇರೊಂದು ದನಿ (ಅನುವಾದಿತ ಕವಿತೆಗಳು) ಇತ್ಯಾದಿ ಇವರ ಪ್ರಮುಖ ಕೃತಿಗಳಾಗಿವೆ. 

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಇವರ ಕೊಡುಗೆಗೆ  ಕಸಾಪ ದತ್ತಿ ಬಹುಮಾನ, ಕರ್ನಾಟಕ ಜನಪದ ಅಕಾಡೆಮಿಯಿಂದ ಜಾನಪದ ತಜ್ಞೆ ಪ್ರಶಸ್ತಿ, ಜಾನಪದ ಲೋಕದ ಜಾನಪದ ತಜ್ಞೆ ಪ್ರಶಸ್ತಿ, ಬಿ.ಎಸ್. ಚಂದ್ರಕಲಾ ಪ್ರತಿಷ್ಠಾನದ ಲಿಪಿಪಾಜೆ ಪಥಸಿ, ಮಿಥಿಕ್ ಸೊಸೈಟಿಯಿಂದ ಅತ್ಯುತ್ತಮ ಸಂಶೋಧಕಿ ಗೌರವ, ಆರ್ಯಭಟ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿಗಳು ಒಲಿದು ಬಂದಿವೆ. 

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿವಿಧ ಪಠ್ಯಕ್ರಮ ಮಂಡಳಿಗಳ ಅಧ್ಯಕ್ಷೆ ಮತ್ತು ಸದಸ್ಯೆ, ಆಕಾಶವಾಣಿ ಜಾನಪದ ಹಾಡುಗಾರರ ಆಯ್ಕೆ ಸಮಿತಿ ಸದಸ್ಯೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಯೋಜನೆ ಮುಂತಾದ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 

 

More About Author