Poem

ಸಾಲಂಕೃತ ಗುಲಾಮಿ

ಗಂಡುಕೊಂಡು ಕೂಡಿ ಬಳಸಿದ
ಸಾಲಂಕೃತ ಗುಲಾಮಿ
ಭಾಷೆಗೆ ಹುಲುಯುಗುರು ಕೋರೆಹಲ್ಲು
ಅದೃಶ್ಯದ ನಂಜು
ಮರುಭೂಮಿಯ ಧಗೆ ಅಗ್ನಿಯ ಹೊಗೆ
ಬಿಟ್ಟಿದಂತೆ ಅವರ ನೆರಳು
ತುಸು ಬದಲಾದರೂ
ಇಲಿ ಹಿಡಿಯುವ ಬೆಕ್ಕಿನ ಠಕ್ಕು
ಕಾಂಚಾಣದ ಹೆಜ್ಜೆಯ ಹಣೆಗೆತ್ತಿಕೊಂಡ
ಶೀಲದೆತ್ತರ ಸ್ವಲ್ಪವೂ ಕುಗ್ಗದಂತೆ
ಆಳುವ ಭೋಗಿಸುವ ಸಾವಿರದ ಸೊಕ್ಕು

ಭಾಷೆಯ ವೀರ್‍ಯದಿಂದಲೆ
ಆತ ಪಡೆದದ್ದು ಗರ್ಭದ ಸಂಯೋಗ
ಆನಂದದ ಶೃಂಗಸುಖ
ಈಯುವ ಬೇನೆಯ ಅದೇ ಜಾಡೆಲ್ಲೇ
ಚರಿತ್ರೆ ಧರ್ಮ ಶಾಸ್ತ್ರ ತತ್ವ ತರ್ಕ
ರಾಜಕೀಯ ಸಾಹಿತ್ಯ ವಿಜ್ಞಾನದ ಹೆರಿಗೆ
ಹೀಗಾಗಿಯೇ ಗಂಡು
ಸಹಜ ಪ್ರಸವದ ಸೂಲಿಗ

ಭೂತವವನು ಬಗೆದು ನೋಡುವ
ಮೋಡಿಯ ಮೋಹದ ಹಾಸಿನ
ಬೀಸಿನ ತೆರೆದೆದೆಯ ತೋಳಿನ
ಭಾಷೆಯ ಆರೈಕೆಯೊಂದಿಗೆ ದಷ್ಟ
ಪುಷ್ಪ ವರ್ಣ ವರ್ಗದ ಲಿಂಗ
ಸಂಕರಗೊಂಡ ಮನ್ವಂತರ ಕೊಟ್ಟ
ಹಾಗೆ ಮಾಡಿ ಒಂದಕ್ಕೆರಡು ವಸೂಲಿ
ರಕ್ತ ಬೀಜಾಸುರನ ಶುದ್ಧ ತಳಿ
ಶತಮಾನಗಳ ನಮ್ರತೆಯ ಲಾಂಛನ
ಜನಾಂಗ ಜಾತಿ ನಾನು ಎನ್ನುವ ಹಮ್ಮು

ಹೆಣ್ಣಿಗಾದರೂ ಭಾಷೆಯ ಮೂಳ ಸೆರೆ
ನಾಲಗೆ ಹೃದಯದ ಇಚ್ಚೆ
ಬಿಟ್ಟು ಹೋಗದೆ ನೆಟ್ಟ ದೃಷ್ಟಿಯಲಿ
ಮೀರುವುದಿದ್ದರೆ ಹೆಣ್ಣೆಂಬ
ಕಾಯವನೆ ಮೀರುವ ಮನಸಿನ ತವಕ
ಬಚ್ಚಿಟ್ಟ ಬಿಡುಗಡೆಯ ಆತ್ಮದ ಗೆಯ್ಕೆ

ಕಾಲನ ಕಾಲ್ಕುರಿಯ ಪದಾತಿ ಪ್ರಸಾದಲ್ಲಿ
ಸಮಾನತೆಯೆಂಬುದೆ ನಂಬುಗೆಯ ನುಡಿಗಟ್ಟು
ಅದೆಷ್ಟೊ ಸಂವತ್ಸರಗಳ ಸಂಸಾರದ ಸತ್ವ
ಜೀವಭಾವದ ಭವದ ಪಯಣಕ್ಕೆ
ಜೊತೆ ನೀನುಂಟಿ ಎಂಬ
ಶರಣಾಗತಿಯ ಸತ್ಯದ ಹುಡುಕಾಟ

ನಾಯಿಯ ಅಗೆಯುವ ಕೆಲಸ
ಅವ್ವನೆಂದರೆ ಅವ್ವ
ಮಗಳೆಂದರೆ ಮಗಳು
ಮಡದಿಯೆಂದರೆ ಮಡದಿ
ಕಟ್ಟಿಕೊಂಡವಳು ಇಟ್ಟುಕೊಂಡವಳು
ಗೆಣೆಗಾರ್ತಿ ಸೂಳೆ ಜೋಗತಿ
ಭಾಷೆಯ ಹಾಸಿನ ಉದ್ದಕ್ಕೂ
ಚಾಚಿದ ಜನ್ಮಜನ್ಮದ ಭಂಗಿ

ಛಲಹೂಡಿ ತಡಕಾಡಿದರೆ
ಹೂತಿಟ್ಟ ಬೀಜವೇ ಮೊಳೆವಂತೆ
ಗಂಡು ಹೆತ್ತ ಭಾಷೆಯ ಒಳಗೆ
ಪಿಂಡದ ಕಾಳ ಹೆಕ್ಕುವ
ಕಾಗೆಗಳ ಬರ್‍ರೆಂಬ ಹಾರುವ ಸದ್ದು.

- ಕವಿತಾ ರೈ

ಕವಿತಾ ರೈ

ಮಹಿಳಾ ಲೇಖಕಿ ಕವಿತಾ ರೈ ಅವರು ಮೂಲತಃ ಮಡಿಕೇರಿಯವರು. ತಾಯಿ ಬಿ.ಎಲ್.ರಾಧಾ, ತಂದೆ ಬಿ.ಎಸ್.ರಂಗನಾಥ ರೈ. ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಾಹಿತ್ಯದೆಡೆಗಿನ ಒಲವು ಬಾಲ್ಯದಿಂದಲೂ ಅಪಾರವಾಗಿತ್ತು.  

ಕನ್ನಡ ಸಾಹಿತ್ಯದಲ್ಲಿ ಇವರ ಕೊಡುಗೆಗೆ ದಿ.ವಿ.ಎಮ್. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಒಲಿದುಬಂದಿದೆ. ಇವರು ಬರೆದಿರುವ ಕೃತಿಗಳೆಂದರೆ ಹಕ್ಕಿ ಹರಿವ ನೀರು, ನೀರ ತೇರು (ಕವನ ಸಂಕಲನ) , ಮಹಿಳೆ ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ (ವೈಚಾರಿಕ) ಮುಂತಾದವು.

More About Author