Poem

ಸ್ವಚ್ಛ ಭಾರತ ನಮ್ಮ ಗುರಿ

ಸ್ವಚ್ಛ ಭಾರತ ನಮ್ಮ ಗುರಿ
ಶುದ್ಧ ಪರಿಸರ ನಮಗೆ ಗರಿ..

ಒಬ್ಬರಿಗೊಂದು ಗಿಡವಿರಲಿ
ಗಿಡವನು ಪೋಷಿಪ ಮನವಿರಲಿ
ಮರಗಳ ರಕ್ಷಿಪ ಬಲವಿರಲಿ
ಹಸಿರೇ ಉಸಿರೆಂಬರಿವಿರಲಿ

ಮರದಲಿ ಜೀವದ ಉಸಿರು ಇದೆ
ಹಸಿರಲಿ ಜೀವದ ಹೆಸರೆ ಇದೆ
ಗೋವಿಗೆ ಹಸುರಲಿ ಒಲವೆ ಇದೆ
ಗೋವಿಗು ಹಸುರಿಗು ಬಂಧವಿದೆ

ಭಾರತ ಬುವಿಯಿದು ಹಸಿರಸಿರಿ
ಸ್ವರಾಜ್ಯವೆಮ್ಮದು ಜಲದಸಿರಿ
ಸ್ವಚ್ಛ ನೆಲಜಲ ಉಸಿರೆ ಗುರಿ
ರಕ್ಷಿತ ಪರಿಸರ ನಾಡ ಗುರಿ

ಧರ್ಮದ ಮಣ್ಣಿನ ನೀರಿನ ರಕ್ಷೆ
ಉಸಿರಿನ ಹಸಿರಿನ ಭಾಷೆಯ ರಕ್ಷೆ
ನಾಡಿನಜನತೆಯ ಜೀವನ ರಕ್ಷೆ
ಕಂದರ ನಡೆಗಿದೊ ಶಾಲೆಯೆ ರಕ್ಷೆ

- ಮಧುರಕಾನನ ಗಣಪತಿ ಭಟ್ಟ

ಮಧುರಕಾನನ ಗಣಪತಿ ಭಟ್ಟ

ಮಧುರಕಾನನ ಗಣಪತಿ ಭಟ್ಟ ಅವರು ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆ ಮೂಲದವರು. ಭೂಗರ್ಭ ಶಾಸ್ತ್ರದ ಬಿ ಎಸ್ ಸಿ ಪದವೀಧರರಾಗಿರುವ ಇವರು ಅಂತರ್ಜಲ ಸಂಶೋಧಕ ನಾಗಿ 35 ವರ್ಷಗಳ ಅನುಭವ ಹೊಂದಿದ್ದಾರೆ. ಕಾಲೇಜು ವಿದ್ಯಾರ್ಥಿಹಂತದಲ್ಲೇ ವಾಹಿನಿ ಕಲಾಸಂಘ ಸ್ಥಾಪನೆ ಮಾಡಿ ,2010ರಿಂದ ರಾಜ್ಯಮಟ್ಟ್ಟದ ಸಂಸ್ಥೆಯಾಗಿ ಕಟ್ಟಿದವರು. ಹಲವಾರು ಗಾಯನ ತರಭೇತಿ ಶಿಬಿರಗಳು, ಭಾವಗಾಯನ ಭಾವನರ್ತನ ಗೋಷ್ಠಿಗಳ ಆಯೋಜನೆ, ಕವಿಗೋಷ್ಠಿ ಕಥಾಗೋಷ್ಠಿ, ವಿಮರ್ಶಾಗೋಷ್ಠಿಗಳ ಆಯೋಜನೆಚಮಾಡಿದ್ದಾರೆ.

ಕೃತಿಗಳು::ಮಧುರವಾಹಿನಿ (ಕವನ ಸಂಕಲನ)
ಗಾನಮಧುರಂ (ಧ್ವನಿಮುದ್ರಣ 2017)

ಸಂಪಾದಿತ ಕೃತಿ - ವಾಹಿನಿ(1982) ಸವಿಜೇನು(2019)

More About Author