Poem

ವಲಸೆ ಬಂದ ಹಕ್ಕಿಗಳ ಹಾಡು

ಒಂದು ಚೂರು ರೊಟ್ಟಿಗಾಗಿ
ಊರ ಮರವ ತೊರೆದು
ವಲಸೆ ಬಂದ ಹಕ್ಕಿಗಳಿಗೆ
ಇಂದು ಮರಳಿ ಗೂಡು ಸೇರುವ ದಾರಿ ಕಾಣಿಸುತಿಲ್ಲ
ಹಿಡಿ ಕಾಳು ಕಡಿ ನಂಬಿ ಬಂದ ಪಕ್ಷಿಗಳಿಂದು
ನಡುಬೀದಿಯ ಬಯಲಲ್ಲಿ ಬಂಧಿಯಾಗಿವೆ

ರೆಕ್ಕೆಯ ಮೇಲೆ ಮರಿಗಳ ಹೊತ್ತು ಹಾರಿ ಹೊರಡೋಣವೆಂದರೆ
ಗಡಿಗಡಿಗಳ ತುಂಬಾ ಗೋಡೆಗಳೆದ್ದಿವೆ

ನೆಲಮನೆಯಿಂದ ಮುಗಿಲೆತ್ತರದ ಮಹಡಿಗಳ
ರಟ್ಟೆಯಿಂದಲೇ ಕಟ್ಟಿದ ಹಕ್ಕಿಗಳನು
ಕಾನೂನು ಮುರಿದರೆಂದು ಕೈಕಾಲು ಮುರಿದು
ಹಡೆಮುರಿಗೆ ಕಟ್ಟಿ ರಸ್ತೆಗೆ ಎಸೆಯಲಾಗಿದೆ
ಸಂವಿಧಾನದ ಅನುಷ್ಠಾನವೆಂದರೆ ಈಗೀಗ ಹೀಗೆಯೇ

ಬೊಗಸೆ ಕಾಳು ತಿಂದು ಬಂದ ಬಾಹುಬಲದಿಂದ
ಟನ್ನುಗಟ್ಟಲೆ ಸುಟ್ಟ ಇಟ್ಟಂಗಿಗಳ
ಹೊತ್ತು ಹಾರಿ
ಗಗನ ಚುಂಬಿ ಕಟ್ಟಡಗಳ ಕಟ್ಟಿದ ಹಕ್ಕಿಗಳನು
ಇಂದು ನಗರ ಪಂಜರದಾಚೆ
ಹಾರಲು ಬಿಡುತಿಲ್ಲ
ಟನ್ನುಗಟ್ಟಲೆ ಇಲಿ ಹೆಗ್ಗಣ ತಿಂದ
ಮುಗ್ಗಸು ಅಕ್ಕಿಗಳ ಮೂಟೆ ಮುಂದಿಟ್ಟು
ಎಷ್ಟು ಬೇಕಾದರೂ ತಿನ್ನಿ ನಗರಕ್ಕೆ ಜೈ ಎನ್ನಿ
ಎಂದವರ ಉಪಕಾರ
ಹೇಗೆ ತೀರಿಸುವುದು ತಿಳಿಯುತಿಲ್ಲ


ಹಿಂದಕ್ಕೋ ಮುಂದಕ್ಕೋ ಪಯಣ ಜಾರಿಯಲ್ಲಿದೆ
ಹಾದಿಯುದ್ದಕೂ ಬಿದ್ದಿರುವ
ಹಸಿವಿನ ಬೀಜಗಳ ಒಂದೊಂದಾಗಿ ಆಯ್ದು
ಮರಿಗಳಿಗೆ ತುತ್ತು ಮಾಡಿ ತಿನ್ನಿಸುವ ತಾಯಿ ಹಕ್ಕಿಗಳು
ಹರಿದ ಆಕಾಶದಲ್ಲಿ
ಚೂರು ಚೂರಾದ ಚಂದಿರನ ತೋರಿಸಿ
ಕಣ್ಣೀರು ಕರಗಿಸುವ ಲಾಲಿಹಾಡು ಹುಡುಕುತ್ತಿವೆ
ಸುತ್ತಮುತ್ತಲೂ ಬಂದೂಕು ಲಾಟಿ ಬಿಲ್ಲುಗಳು
ಒಟ್ಟಿಗೆ ಸೇರಿ ಬೇಟೆಯಾಡಲು ಮಾತನಾಡಿಕೊಳ್ಳುತ್ತಿವೆ
ಮತ್ತೆ ಹೇಳುತ್ತಿವೆ
ಕಾನೂನು ನಿಮ್ಮನ್ನು ರಕ್ಷಿಸುತ್ತದೆ

ನಮ್ಮುದ್ಧಾರಕೆ
ಜನ್ಮವೆತ್ತಿ ಬಂದ ಅವತಾರ ಪುರುಷರು ನೀವು
ನಿಮ್ಮ ನೆತ್ತಿಯನೆಂದೂ ಕುಕ್ಕುವುದಿಲ್ಲ ನಾವು
ಕೊಕ್ಕು ಮಾತ್ರ ಮುರಿಯಬೇಡಿ
ಹಾರುವುದನೆ ಮರೆತಿವೆ ರೆಕ್ಕೆ
ಬೆಂಕಿ ಹಚ್ಚಬೇಡಿ
ಇನ್ನುಮುಂದೆ
ನಿಮ್ಮ ಘನಚರಿತೆಯ ಹಾಡುಕಟ್ಟಿ ಹಾಡಲಾರೆವು ನಾವು
ಕುತ್ತಿಗೆಗೆ ಕುಣಿಕೆ ಹಾಕಬೇಡಿ
ಒಂದು ಹಿಡಿ ಕಾಳಿಗಾಗಿ
ವಲಸೆ ಬಂದ ಹಕ್ಕಿಗಳು ನಾವು
ಒಂದೇ ಒಂದು ಸಾರಿ ಊರ ಮಾರಿ
ನೋಡಿ ಬರುತ್ತೇವೆ ದಯಮಾಡಿ ಕರುಣೆ ತೋರಿ

ಇಲ್ಲವೇ
ನೀವೇ ಕಟ್ಟಿದ ಅರಗಿನ ಪಂಜರದೊಳಗೆ
ನಾವೇ ಒಟ್ಟಿಗೆ ಹೋಗುತ್ತೇವೆ
ತಡಮಾಡದೆ ಸುಟ್ಟುಬಿಡಿ

ದಯವಿಟ್ಟು ಗಮನಿಸಿ :
ಮಾನವ ಹಕ್ಕುಗಳ ಕಾನೂನು ವಲಸೆ ಬಂದ ಹಕ್ಕಿಗಳಿಗೆ
ಅನ್ವಯಿಸುವುದಿಲ್ಲ.

ಆಡಿಯೋ
ವಿಡಿಯೋ

ವೀರಣ್ಣ ಮಡಿವಾಳರ

ವೀರಣ್ಣ ಮಡಿವಾಳ ಅವರು ಸೆಪ್ಟೆಂಬರ್ 01, 1983ರಂದು ಜನಿಸಿದರು. ಕಲಿವಾಳ, ಕಲಕೇರಿ, ಸಿರಿಗೆರೆ, ಮುಂಡರಗಿ, ಕೊಪ್ಪಳ ಮತ್ತು ಗುಲ್ಬರ್ಗದಲ್ಲಿ ವಿದ್ಯಾಭ್ಯಾಸ. 2007 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಪ್ಲಾಟ್ ನಲ್ಲಿ ಸೇವೆ ಆರಂಭ. ಸದ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾವಡ್ಯಾನವಾಡಿಯಲ್ಲಿ ವೃತ್ತಿ. ಗುಲ್ಬರ್ಗಾದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2010ರಲ್ಲಿ 'ನೆಲದ ಕರುಣೆಯ ದನಿ' ಕವನ ಸಂಕಲನ ಮತ್ತು ಆಡಿಯೋ ಬುಕ್ ಪ್ರಕಟವಾಗಿದೆ. ಚಿತ್ರ ಮತ್ತು ಫೊಟೋಗ್ರಫಿಯಲ್ಲೂ ಕವಿತೆಯನ್ನೇ ಹುಡುಕುತ್ತಿರುವ ವೀರಣ್ಣ 2013 ರಲ್ಲಿ ಗುಲ್ಬರ್ಗದಲ್ಲಿ ಸಾಂಗ್ಸ್ ಆಫ್ ಸೈಲೆನ್ಸ್ ಎಂಬ ಛಾಯಾಚಿತ್ರ ಪ್ರದರ್ಶನ ನಡೆಸಿದ್ದಾರೆ. 

ಕನ್ನಡದ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ , ಬೇಂದ್ರೆ ಗ್ರಂಥ ಬಹುಮಾನ, ಇಂಚಲ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಅರಳು ಪ್ರಶಸ್ತಿ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮತ್ತು ಕಾವ್ಯಸ್ಪರ್ಧೆಗಳಿಂದ ಪುರಸ್ಕೃತರಾಗಿರುವ ವೀರಣ್ಣರ ಕವಿತೆ ಇತರ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಪಠ್ಯದಲ್ಲಿ ಸೇರಿವೆ. 

More About Author