Poem

ವರ್ತಮಾನ ಪುರಾತನ 

ಪುರಾತನ ಕಲೆಯಿದು ಕೌದಿ ಹೊಲೆವ ಮಾಟ ಪುರುಸೊತ್ತಿನ ಆಟ

ಸಣ್ಣ ದೊಡ್ಡ ತರಾವರಿ ತುಕಡಿಗಳ ರಾಶಿ ಅಡಗಿಸಿಕೊಂಡ ಗಂಟು

ಬಿಚ್ಚಿ ನೋಡಿದರೆ ಏನೆಲ್ಲ ಉಂಟು ಎಲ್ಲದರ ಜೊತೆಗೂ ನೆನಪಿನ ನಂಟು

ಮುದಿಸೀರೆ ಮದವಳಿದ ಧೋತರ ಜೊತೆಯಾಗಿ ಅಡಿಯ ಪದರಾಗಿ

ಹರೆಯದ ಸೀರೆಯದು ಮೇಲ್ಪದರು ನಡುವೆ ಸಿಕ್ಕಿಕೊಂಡವೆಲ್ಲ ಹರುಕು

ಮುರುಕು ಮುಲುಕುವ ಕಾಣದ ಕಾಣಬಾರದ ಮೆದುವಾದ ಹತ್ತಿ ಬಟ್ಟೆ

ಪುಟ್ಟ ಲಂಗದ ತುಕುಡಿ ಪುಗ್ಗಾ ಪೋಲಕದ ತುಂಡುಗಳು ಕೌದಿಯಲಿ ಅಲ್ಲಲ್ಲಿ

ಹಾರ್ಯಾರಿ ಹೂವಾಗಿ ಚಿಟ್ಟ್ಯಾಗಿ ಕಲರ್‍ಫುಲ್ಲಾಗಿ ಕುಳಿತ ಚೆಂದದ ಭಂಗಿ

ಪೋರನ ಅಂಗಿ ಚೊಣ್ಣ ಚಲ್ಲಣಗಳು ಇದೀಗ ಆನೆ ಒಂಟೆಗಳ ಮೆರವಣಿಗೆಯ ಸಾಲು

ಲಂಗ ಪೋಲಕಗಳೇ ಹೂ ಚಿಟ್ಟೆಗಳ್ಯಾಕೆ ಅಂಗಿ ಚೊಣ್ಣಗಳೇಕಿಲ್ಲ

ಹಾಗಂತ ನೀವು ಕೇಳುವ ಹಾಗಿಲ್ಲ ಹೂ ಚಿಟ್ಟೆಗಳ

ನಾಜೂಕು ಆನೆ ಒಂಟೆಗಳಿಗಿಲ್ಲ ಎಂದರೆ ಸಾಕಲ್ಲ!

ಹಚ್ಚಹಸರಿನ ಹಚ್ಚಡದ ಎಂಟೂ ದಿಕ್ಕಿಗೂ ಪ್ರತಿಫಲನ ತ್ರಿಕೋನ

ಹುಡುಗಿಯರ ಪುಗಡಿಯಾಟ ಹುಡುಗರ ಪಗಡೆಯಾಟ ನಡುನಡುವೆ

ದಾರದ ಸಾಲು ಎಳೆಗಳು ಅವು ನಮ್ಮೆದುರಿನ ಲಕ್ಷ್ಮಣ ರೇಖೆಗಳು

ಜೋಕೆ, ದಾಟುವ ಭರದಲ್ಲಿ ಉಗುರ ಸೀಳಿ ಗೆ ಸಿಲುಕಿ ದಾರ

ನರ ನಾಡಿಗಳಿಗೆ ವ್ಯಾಪಿಸೀತು ನೋವ ಧಾರ ಬದುಕಿಡೀ

ಅದರ ನೆನಪಿನ ಕೊರಗಿನ ಮರುಗಿನ ರಾಗ ಏಕತಾರ

ಗೆರೆ ದಾಟುವ ಆಟಕ್ಕೆ ಕುಂಟಾಬಿಲ್ಲೆಯೆಂದು ಹೆಸರು

ಕನಸ ಬಿಲ್ಲೆಯ ಕಣ್ಣಿಗೊತ್ತಿ ಮುತ್ತಿಕ್ಕಿ ಗೆರೆಗೆ ತಾಗದಂತೆ

ಹುಸಿ ಹೋಗದಂತೆ ಚಿಮ್ಮಿ ಎಸೆದರೆ ಬೇಕಾದ ಚೌಕದಲ್ಲಿ ಅದು ಸೆರೆ

ಜೊತೆಗಿದ್ದುದು ದೂರವಾಗಿ ಒಂಟಿ ಕಾಲಿನ ಸರ್ಕಸ್ಸು ಗುರಿ ಸೇರಲು

ಗೆರೆ ದಾಟುತ್ತಲೇ ಅಳಿಯದಂತೆ ನೋಡಿಕೊಳ್ಳುವ ಬಿಸಿನೆಸ್ಸು

ಮನೋವ್ಯಾಪಾರವದು ಬಲು ಗೌಪ್ಯ ಲೋಕಕೆ ಲಾಭ ನಷ್ಟಗಳಷ್ಟೆ ಸತ್ಯ

ಕೆಂಪು ಹಸಿರು ಬಾವುಟದ ಏರು ಯೌವ್ವನ ತೇರು ಕೇಂದ್ರ ಬಿಂದು

ಸುತ್ತಲೂ ಜೋಡಿ ಇಜ್ಜೋಡಿಗಳ ಮೇಳ ಬಯಲಾಟದ ಕುಣಿತ

ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಧಿಥೈ ಧಿಮಿ ತಕಿಟ ಥೈ

ತಾಳ ಹಿಡಿದ ಕೈಗೆ ಬೆರಳುಗಳು ನೂರಾರು ಅಬ್ಬರದ ಜೋರು

ಸಂಪ್ರದಾಯದ ಬೇರು ಸುತ್ತುತ್ತ ಬದುವ ಬಿತ್ತುತ್ತ ಬೆಳೆಯುತಿದೆ ವೃತ್ತ

ಅಲ್ಲಲ್ಲಿ ಅಲ್ಲಲ್ಲಿ ಎದೆಯ ಹಂಬಲದ ದಿಗಿಣಕೆ ತಾಳೆಯಾಗದ ತಾಳ

ಕುಣಿತದ ಬಿರುಸಿಗೆ ಸಿಂಗಾರಗಳೆಲ್ಲ ಕಳಚಿ ಮನಸು ಬಿಳಚಿ ಎದ್ದೂಬಿದ್ದೂ

ಹೆಕ್ಕಿ ಆಯ್ದು ಮತ್ತೆ ಮತ್ತೆ ಸಿಂಗಾರಗೊಂಡು ಕಾಲನ ಹಿಡಿದಿಡುವ ಹಂಬಲ

ಕುಣಿವ ಕಾಲ್ಗಳಿಗೂ ದಣಿವ ಕಾಲ್ಗಳಿಗೂ ಆಸರೆ ಒಂದೇ ನೆಲ ಜಲ

ಕವುಚಿ ಮಲಗಿದ ಜೀವಕೆ ನೆನಪುಗಳ ರಾಶಿ ಕಣ್ಣ ರೆಪ್ಪೆಯಡಿ ಹಾಕಿ

ಕೌದಿ ನೇಯುತಿದೆ ನಿದ್ದೆ ನಲಿವಿನ ಜೊತೆಗೆ ನೋವೂ ಕುತ್ತಿ

ಚಿತ್ತಾರವಾದುದ ಕಂಡು ಮನಸೆಲ್ಲ ಒದ್ದೆಮುದ್ದೆ

ಕಲಾಕೃತಿ : ಬಸವರಾಜ್‌ ಮುಸಾವಳಗಿ

ಜಯಲಕ್ಷ್ಮಿ ಪಾಟೀಲ್

ಜಯಲಕ್ಷ್ಮಿ ಪಾಟೀಲ್ ಅವರು ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿಯಾಗಿಯೂ ಕಾರ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮಿ ಗುಲ್ಬರ್ಗಾ ಜಿಲ್ಲೆ ಯಾದಗಿರಿಯಲ್ಲಿ 968 ಜೂನ್‌ 08ರಂದು ಜನಿಸಿದರು. ತಂದೆ ರಾಜಶೇಖರ ಅವರಾದಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, ಸರೋಜಿನಿ ಅವರಾದಿ. ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು. 

ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ಬದುಕು, ಅಲ್ಲಿನ ಸಂಸ್ಕೃತಿಯನ್ನು ಚಿತ್ರಿಸುವ ಅವರ ಕಾದಂಬರಿ ‘ಮುಕ್ಕು ಚಿಕ್ಕಿಯ ಕಾಳು’ 2018ರಲ್ಲಿ ಪ್ರಕಟವಾಯಿತು. ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ 'ಬೇಬಿ'ಯನ್ನು ಕನ್ನಡಕ್ಕೆ ಅನುವಾದಿಸಿದ್ದು 2018ರಲ್ಲಿ ಪ್ರಕಟಗೊಂಡಿದೆ. 

'ಈ ಹೊತ್ತಿಗೆ' ಸಂಸ್ಥೆಯು ಕನ್ನಡ ಸಾಹಿತ್ಯ ಕೃತಿಗಳ ಚರ್ಚೆಯ ಮಾಸಿಕ ವೇದಿಕೆ. ಇದರ ಸಂಸ್ಥಾಪಕಿ ಇವರು. 'ಈ ಹೊತ್ತಿಗೆ' ಕಾರ್ಯಕ್ರಮದಲ್ಲಿ ಆ ತಿಂಗಳ ಆಯ್ದ ಪುಸ್ತಕವನ್ನು ಓದಿದವರಷ್ಟೇ ಚರ್ಚೆಯಲ್ಲಿ ಭಾಗವಹಿಸುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಹಾಗೂ ಈ ಮೂಲಕ ಅವರು ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಓದುವ ಅಭಿರುಚಿಯನ್ನು ಬೆಳೆಸುವ ಕೈಂಕರ್ಯ ಮಾಡುತ್ತಿದ್ದಾರೆ.

'ಜನದನಿ' (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡ್ತಿರೊ ಸಂಸ್ಥೆ)ಯ ಸಂಸ್ಥಾಪಕಿಯೂ ಹೌದು. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ  ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೇಳಬೇಕೆನಿಸುತ್ತಿದೆ' ಮತ್ತು 'ಅಭಿನಯ' ಇವರ ಬ್ಲಾಗ್ ಗಳು. 

ಕೇರಳ ರಾಜ್ಯ ಅಕಾಡೆಮಿ ಮತ್ತು ಪಂಪ (People for performing Arts & more) ಸಂಸ್ಥೆಯ ಸಂಯುಕ್ತ ಆಯೋಜನೆಯಲ್ಲಿ ಕೇರಳದ ಚೆಂಗನೂರಿನಲ್ಲಿ ನಡೆದ 'SIWI-2014'(South India Writers Ensemble) ಸಂಸ್ಥೆಗಳ ಆಮಂತ್ರಣದ ಮೇರೆಗೆ, 2014 ಜುಲೈ 24 ರಂದು ಮತ್ತು SIWE 2017ರ SIWE ಸಮ್ಮೇಳನದಲ್ಲಿ ಕವಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 

ಇವರ ಸಾಧನೆಗೆ ರಂಗಭೂಮಿಯಲ್ಲಿ, 'ಮಾಟುಂಗಾ ಕರ್ನಾಟಕ ಸಂಘ ಮುಂಬಯಿ, ಆಯೋಜಿಸಿದ್ದ 'ಅಖಿಲ ಭಾರತೀಯ ಕುವೆಂಪು ನಾಟಕ ಸ್ಪರ್ಧೆ'ಯಲ್ಲಿ ನಾ ಕೊಂದ ಹುಡುಗ ನಾಟಕದಲ್ಲಿನ ಅಭಿನಯಕ್ಕಾಗಿ, ಪ್ರತಿಷ್ಠಿತ ಭಾರತಿ ಕೊಡ್ಲೇಕರ್ ಪ್ರಶಸ್ತಿ, ಒಸರ್ ತುಳು ನಾಟಕಕ್ಕೆ ‘ಅಭಿನಯ ಶಾರದೆ ಪ್ರಶಸ್ತಿ', ಸಾಹಿತ್ಯ ಕ್ಷೇತ್ರದಲ್ಲಿ ಇವರ 'ಹಕ್ಕಿ' ಕವನಕ್ಕೆ 'ಮುಂಬಯಿ ಬೆಳಕು ಕನ್ನಡ ಬಳಗ'ದ ಡೊಂಬಿವಲಿ ಸಂಸ್ಥೆಯಿಂದ 'ಡಾ.ದ.ರಾ.ಬೇಂದ್ರೆ ಪ್ರಶಸ್ತಿ' ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಅವರಿಗೆ ಸಂದಿವೆ.

More About Author