Poem

ಯಾರಾದರೂ ಹೇಳಿ ಅವರಿಗೆ

ಯಾರಾದರೂ ಹೇಳಿ ಅವರಿಗೆ
ಹಸಿರು- ಕೇಸರಿ ಬಣ್ಣಗಳ ಎರಚಾಟದಲ್ಲಿ
ಮೈಮರೆತ ಮಹಾನ್ ದೊರೆಗಳಿಗೆ
ಅವರ ಸಿಂಹಾಸನದ ಮೆತ್ತೆ
ಈಗ ಮೆತ್ತಗಿಲ್ಲವೆಂದು

ಹೇಳಲೇಬೇಕಿದೆ ಅವರಿಗೆ
ಪತಾಕೆಗಳ ನೆಪದಲ್ಲಿ
ಪಾತಕ ನಡೆಸುವ ಪಾಪಿಗಳಿಗೆ
'ಧರ್ಮದ' ಬದುಕು
ಸಾವಿನಲ್ಲಿಲ್ಲವೆಂದು

ತಿಳಿಸಿಕೊಟ್ಟರೆ ಒಳ್ಳೆಯದು ಅವರಿಗೆ
ಬರಿಯ ಹುಸಿಮಾತಿನಲ್ಲಿ
ಬಿಸಿನೆತ್ತರನ್ನು ಹರಿಸಹೊರಟವರಿಗೆ
ಹರಿದ ರಕ್ತದ ಕಾಲುವೆ
ಅವರನ್ನೇ ಆಪೋಶನ ತೆಗೆದುಕೊಳ್ಳಲಿದೆಯೆಂದು

ಹೇಳುವುದಕ್ಕೆ ಬಾಕಿ ಇದೆ ಅವರಿಗೆ
ಧರ್ಮಗ್ರಂಥಗಳ ಪುಟಗಳನ್ನು
ಲಂಗುಲಗಾಮಿಲ್ಲದ ನಾಲಗೆಯ
ಎಂಜಲಿನಲ್ಲಿ ತಿದ್ದಹೊರಟವರಿಗೆ
ನೀವಿಲ್ಲದೆಯೂ ಧರ್ಮ ಉಳಿಯುತ್ತದೆಂದು

-ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author