Poem

ಅಮೃತ ಕನ್ನಡ

ದ್ವಿಸಾವಿರ ಚರಿತ್ರೆಯ ಅಮೃತ ನರನಾಡಿ ಕನ್ನಡ
ಗೋದಾವರಿಯಿಂದ ಕಾವೇರಿ ಕರಿ ಚಿನ್ನ ಭೂಮಿ ಕನ್ನಡ
ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ಮೈಸೂರು
ರಾಜ, ವಿರಾಜರು ಆಳಿ ಬೆಳಸಿದ ದೀರ ಕನ್ನಡ
ಬನವಾಸಿ, ಹಳೇಬೀಡು, ಪಟ್ಟದಕಲ್ಲು, ಹಂಪಿ
ಲಕ್ಕುಂಡಿ, ಮಹಿಷ ಮಂಡಲ ಶಿಲ್ಪಕಲೆಯ ಹೆತ್ತುರು ಕನ್ನಡ

ಮದ್ವರ, ಶಂಕರ, ರಮಾನುಜ, ಶರೀಫರ ವೇದಾಂತ ಕನ್ನಡ
ಪಂಪ, ರನ್ನ, ಪೊನ್ನ, ಜನ್ನ, ಕುಮಾರ, ಕನಕ ಕವಿ ಕನ್ನಡ
ಅಲ್ಲಮ, ಬಸವ, ಅಕ್ಕ, ಅಂಬಿಗ ಶರಣ ವಚನ ಕನ್ನಡ
ಪುಲಿಕೇಶಿ, ನೃಪತುಂಗ, ವಿಷ್ಣು, ಕೃಷ್ಣ ದೇವರಾಯ ಅರಸ ಕನ್ನಡ
ಕಾವೇರಿ, ತುಂಗಾ, ಕೃಷ್ಣ, ಕಪೀಲ, ಶರಾವತಿ ಅಮೃತ ನದಿ ಕನ್ನಡ
ಸೈಹಾದ್ರಿ ಗಿರಿವನ ಜಲಪಾತಗಳ ಜೀವಿ ಜನ್ಮ ಕನ್ನಡ

ಶ್ರೀಗಂಧ ಅರಮನೆ ಉದ್ಯಾನವನ ತಂತ್ರಜ್ಞಾನ ಕನ್ನಡ
ಅಷ್ಟ ಜ್ಞಾನ ಪೀಠ ಸಾಹಿತ್ಯ ಆರು ಕುಲಕೋಟಿ ಕನ್ನಡ
ಗಾರುಡಿ, ಗೊರವ, ವೀರಗಾಸೆ, ಲಾವಣಿ ಜನಪದ ಕಂಪು ಕನ್ನಡ
ಅಮೃತ ನುಡಿ ನಡೆ ಬರಹ ಶಾಸ್ತ್ರಿಯ ಸ್ಥಾನಮಾನ ಕನ್ನಡ
ಸೃಜನಶೀಲ, ಕರುಣೆ, ದಾನ, ಸ್ವಾಭಿಮಾನದ ನಮ್ಮ ಕನ್ನಡ
ಮರೆಯದಿರಿ ಅಮೃತ ಪುತ್ರರೆ ಚಿರ ಚೇತನ ಕನ್ನಡ

- ಶರೀಫ ಗಂಗಪ್ಪ ಚಿಗಳ್ಳಿ( ಸಾಹಿತಿ)

ಶರೀಫ ಗಂಗಪ್ಪ ಚಿಗಳ್ಳಿ

ಹುಬ್ಬಳ್ಳಿಯ ಬೆಳಗಲಿ ಮೂಲದವರಾದ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ, 30-07-1985ರಂದು ಗಂಗಪ್ಪ-ಗದಿಗೇವ್ವ ದಂಪತಿಯ ಮಗನಾಗಿ ಜನಿಸಿದರು. ಧಾರವಾಡ ಜಿಲ್ಲೆಯ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ಕುಬಿಹಾಳದ ಶ್ರೀ ಜಗ್ಗದಗುರು ಉಜ್ಜಯನಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದ ಕೆ.ಎಸ್.ಎಸ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಇಡಿ ಸ್ನಾತಕೋತ್ತರ ಶಿಕ್ಷಣ ಗಳಿಸಿದರು. ಸದ್ಯ ಬೆಳಗಲಿಯ ಗ್ರಾಮ ಪಂಚಾಯತ್ ಕ್ಲಾರ್ಕ್ ವೃತ್ತಿಯಲ್ಲಿರುವ ಇವರು, ಸಮಾಜ ಸೇವೆ, ಸಾಹಿತ್ಯ, ಸಂಶೋಧನೆ, ಓದಿನ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ 500 ಹೆಚ್ಚು ಲೇಖನೆ, 100 ಕೂ ಹೆಚ್ಚು ಕವನ, ಕಥೆ, ಇತ್ಯಾದಿ ಬರಹ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ತೃತೀಯ ಬಹುಮಾನ, ಕರುನಾಡ ಹಣತೆ ಸಾಹಿತ್ಯ ಸೇವಾ ರತ್ನ ರಾಜ್ಯ ಪ್ರಶಸ್ತಿ,ಅನೇಕ ಜಿಲ್ಲಾ, ತಾಲೂಕು ಮಟ್ಟದ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನ ಲಭಿಸಿವೆ. ಸಾಹಿತ್ಯ ಕೃಷಿ:- ವಿಚಾರ ದೀಪ್ತಿ ಪುಸ್ತಕ ( 2021)

More About Author