
ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲ,
ಬಹುಶಃ ನನ್ನದೆಯ ವಿಳಾಸ ಮರೆತಿರಬಹುದು.
ನನ್ನೂರಿಗೆ ಒಂದಿಷ್ಟು ಬಿಸಿಲಾದರೂ ಕಳಿಸಿ ಕೊಡು,
ಚಳಿಗಾಲದ ನಿನ್ನ ನೆನಪಿಗೆ ಬಿಸಿಯಾದರೂ ತಾಕಲಿ
ಹೂ ಬಿಟ್ಟ ಮಳೆ ಹನಿಗೆ ನಿನ್ನ ಘಮಲಿನ ತೇವವಾದರೂ ಸೋಕಲಿ!
ಸುಟ್ಟು ಕರಕಲಾದ ವಿರಹದ ಅಂಗಾಲಿಗೆ ಒಂದು ಮುತ್ತಾದರೂ ಕೊಡಬೇಕಿತ್ತು.
ಕಂದೀಲು ಕಟ್ಟಿಕೊಂಡು ಓಡಾಡುವ ಬೆಳಕಿಗೂ ಬೇಸರವಾಗುತ್ತಿದೆ, ನಿನ್ನ ಕಣ್ಣೊಳಗಿನ ಕತ್ತಲೆಯ ಸುರಿದು ಬಿಡು.
ಬೆಳದಿಂಗಳ ಹೆರುವ ಚಂದ್ರನಿಗೂ ವಿರಾಮವಿರಲಿ
ನಕ್ಷತ್ರಗಳ ನಗರಕ್ಕೆ ರಜೆ ಸಿಗಲಿ!
ಆಕಾಶದ ಅಂಚಿನಲ್ಲಿ ಮಿಂಚೊಂದು ಮೀನು ಹಿಡಿಯುವಾಗ,
ಗಾಳಕ್ಕೆ ಸಿಕ್ಕ ನಿನ್ನ ನಗು ಕಡಲ ಮುತ್ತಿಗೆ ಇರಿವ ಚೂರಿಯಾಗಿದೆಯಂತೆ.
ಪಾಪ ಆ ಮುತ್ತಿಗೂ ಬದುಕಲು ಅವಕಾಶ ಕೊಡು,
ಕಾರ್ಮೋಡದ ಮಿಂಚಿನೆದೆಗೂ ಒಂದಿಷ್ಟು ಬೆಳಕನಿಡು!
ಕಾಡಹಾದಿಯಲ್ಲಿ ಬಿತ್ತಿದ ನವಿಲ ಹೆಜ್ಜೆಗಳೊಡನೆ ಸ್ಪರ್ಧೆಗಿಳಿಯಬೇಡ
ಪಾಪ ಬಡಪಾಯಿ ನವಿಲು ಒಮ್ಮೆಯಾದರೂ ವಿಶ್ವಸುಂದರಿಯ ಕಿರೀಟ ತೊಡಲಿ!
ನೀ ತೊಟ್ಟು ಬಿಟ್ಟ ಕಿರೀಟಗಳೆಲ್ಲ ವಿಶ್ವದಾಖಲೆಯಲ್ಲಿ ದಾಂಧಲೆ ಮಾಡುತ್ತಿವೆ.
ನಿನ್ನ ಮುಂಗುರುಳಿನ ಮೌನವನ್ನು ಬರೆದಿಡಲು ಅನುಮತಿ ಕೊಡು,
ನಿನ್ನ ಹೊಗಳುವ ಕವಿಯೊಬ್ಬನ ಕವಿತ್ವಕ್ಕೂ ಜೀವ ಬರಲಿ!
- ಚಾಂದ್ ಪಾಷ ಎನ್ ಎಸ್
ಚಾಂದ್ ಪಾಷ ಎನ್. ಎಸ್.
ಚಾಂದ್ ಪಾಷ ಎನ್.ಎಸ್. (ಕವಿಚಂದ್ರ) ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಮೇ ತಿಂಗಳ 1994ರಲ್ಲಿ ಜನಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
'ಒದ್ದೆಗಣ್ಣಿನ ದೀಪ' ಕವನ ಸಂಕಲನ 2023ರಲ್ಲಿ ಪ್ರಕಟವಾಗಿದೆ. 'ಧೂಳಿಡಿದ ನಕ್ಷತ್ರ' (ನಾಟಕ) 'ಚಿತ್ರ ಚಿಗುರುವ ಹೊತ್ತು' (ಕವನ ಸಂಕಲನ) 2020ರಲ್ಲಿ ಪ್ರಕಟವಾಗಿದೆ.
ಇಟಲಿಯ ಪಿಯಾಸೆಂಜಾದಲ್ಲಿರುವ "ಪಿಕ್ಕೋಲೊ ಮ್ಯೂಸಿಯೊ ಡೆಲ್ಲಾ ಪೊಸಿಯ" ದಲ್ಲಿ ಕವಿತೆಯೊಂದು ಪ್ರದರ್ಶನವಾಗಿದೆ. ಶ್ರೀಲಂಕಾದಲ್ಲಿ ನಡೆದ ತೀರ್ಥ ಫರ್ಫಾಮೆನ್ಸ್ ಫ್ಲಾಟ್ ಫಾಮ್ 2019, ಬೆಂಗಳೂರು ಲಿಟರೇಚರ್ ಫೆಸ್ಟಿವಲ್ 2017, ಲಾಂಗ್ವೇಜ್ ಫೆಸ್ಟಿವಲ್, SIWE ಪೊಯೆಟ್ರಿ ಫೆಸ್ಟಿವಲ್ ಕೇರಳ 2018, 2019, ಲಿಟರೇಚರ್ ಫೆಸ್ಟಿವಲ್ ಹೈದರಾಬಾದ್ 2020, ಇತರ ಪ್ರಮುಖ ಕಾವ್ಯ ಗೋಷ್ಠಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ.
"2024ನೇ ಸಾಲಿನ ಕರ್ನಾಟಕ ಸಂಘ ಶಿವಮೊಗ್ಗ ನೀಡುವ "ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ", "2024 ನೇ ಸಾಲಿನ ಸಿ.ಪಿ.ಕೆ. ಕಾವ್ಯ ಪ್ರಶಸ್ತಿ" , 2023ನೇ ಸಾಲಿನ 'ಈ ಹೊತ್ತಿಗೆ ಕಾವ್ಯ ಪ್ರಶಸ್ತಿ', "ಬಸವ ಪುರಸ್ಕಾರ" 2020ರ ಸಾಲಿನ "ಚಿ. ಶ್ರೀನಿವಾಸರಾಜು ಕಾವ್ಯ ಪ್ರಶಸ್ತಿ", "ಅವ್ವ ಪ್ರಶಸ್ತಿ", “ಕುವೆಂಪು ಯುವ ಕವಿ ಪ್ರಶಸ್ತಿ” ." ಕಾವ್ಯ ಮನೆ ಕಾವ್ಯಪುರಸ್ಕಾರ" , ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
2022 ನೇ ಸಾಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಎ. ಎರಡನೇ ಸೆಮಿಸ್ಟರ್ ಗೆ ಒಂದು ಕವಿತೆ ಪಠ್ಯವಾಗಿದೆ. ಇವರ ಕವಿತೆಗಳು ಸ್ಪ್ಯಾನಿಷ್, ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದವಾಗಿವೆ.
More About Author