Poem

ಅತೃಪ್ತ ಬೇರು

ಅವಳ ಕವನದಲ್ಲೆಲ್ಲಾ ಅವನೇ
ಇತ್ತೀಚಿಗೆ..ಹಿಂದೆ..ಮುಂದೆಯೂ..
ನಡೆದ ಮುರ್ಕಿಯಲ್ಲೆಲ್ಲ
ಎದ್ದ ಮಾತು
ಕೆಲವಂತೂ ನೇರಾನೇರ
ಹಿತೈಷಿಗಳು ಅವರು
ಮುಖವಾಡವಿಲ್ಲದವರಂತೆ

ಅವರೇ ಹೇಳಿದ್ದು.

ಏನಾದರೂ ಇದ್ದರೆ ಹೇಳು
ಸಹಾಯ ಮಾಡುವೆ
ಅದೇ
ಅವನ ಬಗ್ಗೆ
ಕವಿತೆಯಲ್ಲಿ ಕಂಡವನು
ಒಳ್ಳೆಯವನೋ...ಕೆಟ್ಟವನೊ..
ನಿನಗೆ ಹೊಂದುವನೋ
ಮೋಸವಾಗಬಾರದಲ್ಲ ನಿನಗೆ
ಯಾರೋ..ಏನೋ..

ನಾನೋ...!?

ಅವಳು ಥಂಡು
ಖಾತ್ರಿ ಇಲ್ಲ ಬಿಡು ಕಲಿ
ಯುಗ ಇದು
ತಲೆ ತಗ್ಗಿಸಿಯೆ ಹೆಜ್ಜೆ ಮೇಲೆ ಹೆಜ್ಜೆ
ಇಟ್ಟವಳು ಈಗ ಅವನು
ಹರಿದಾಡಿದ್ದದ್ದೆಲ್ಲ ಇಂಚಿಂಚೆ
ತೆಗೆದಿರಿಸುವಳು ಪಾಪಿ
ಮುಂಡೆ ಮಹಾಕಾಲ ಇದು

ಕೊರೋನಾ

ಅರೆ, ಹೊಸತು ಏನು ಬರೆದಿರಿ
ಅವನು ಆರಾಮಾ..?
ಅದೆ.. ಅವನು..
ಕವಿತೆಯಲ್ಲಿ ಅಡಗಿದವನು
ಸುಂದರನಂತೆ ..ನೆನಪಾದನೇ..
ಚೆಲುವ
ನಾರಾಯಣ ಸ್ವಾಮಿ

ಅವಳು ನಗುತ್ತಾಳೆ
ಪ್ರಶ್ನೆಗೆಲ್ಲ ಉತ್ತರ
ಇದೆ ಅಂತಲ್ಲ ಬಿಡಿ.
ಬಾಯಿಪಾಠವೂ ಮಾಡಲು ಕಷ್ಟ.

ಮತ್ತೆ ನಗುತ್ತಾಳೆ ಎದ್ದು ಬರೆಯುತ್ತಾಳೆ.
ಅವರು ಎಳೆದಷ್ಟು ಇವಳು ಬೆಳೆಯುತ್ತಾಳೆ
ಬೆಳೆದಷ್ಟು ಅವನು ಕೈ ಉಜ್ಜಿಕೊಳ್ಳುತ್ತಾನೆ

ಅಂದಹಾಗೆ
ಮೂಲೆಮನೆ ಏಕಾದಶಿ
ಒಬ್ಬೊಬ್ಬನೇ ಉದುರುತ್ತಾನಂತೆ

ನಡೆದ ಮುರ್ಕಿಯಲ್ಲೆಲ್ಲ
ಈಗಷ್ಟೇ ಮತ್ತೊಂದು ಮಾತು ಎದ್ದು
ಅವನದೇ ಚಿಂತೆ
ಅಂತೆ ಇವನಿಗೆ

ಮತ್ತೇನಿಲ್ಲ ಬಿಡಿ

ಅವಳ ಕವನಕ್ಕೀಗ ಒಂದೇ ಸಾಲು
ಅವನು ಅತೃಪ್ತ ಬೇರು.

 

ಅಕ್ಷತಾ ಕೃಷ್ಣಮೂರ್ತಿ

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕ.ಸಾ.ಪದಿಂದ 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಅವರ ಪ್ರಕಟಿತ ಕೃತಿಗಳು ‘ಹನ್ನೆರಡು ದಡೆ ಬೆಲ್ಲ’(ಕವನ ಸಂಕಲನ-2013), ‘ಹಾಲಕ್ಕಿ ಒಕ್ಕಲಿಗರು(ಜನಾಂಗೀಯ ಬರಹ-2013), ‘ಮಧುರ ಚೆನ್ನ(ವ್ಯಕ್ತಿ ಪರಿಚಯ-2014), ‘ಕೋಳ್ಗಂಬ (ಕವನ ಸಂಕಲನ-2016)’

More About Author