Poem

ಅವಳು ನೀವಲ್ಲ ಬಿಡಿ

ಕಿಟಕಿಯಿರದ ಬಾಗಿಲ ಮುಚ್ಚಿದ
ಕತ್ತಲ ಕೋಣೆಯಲ್ಲಿ
ಅವಳು ನೋವು ಹೆರುತ್ತಿದ್ದಾಳೆ
ಶಿರದಿಂದ ಪಾದದಡಿಯವರೆಗೂ
ಸೀಳಿ ಸೀಳಿ ಮುಕ್ಕಿದ್ದು
ಹೊಕ್ಕುಳ ಗೀರಿದ್ದು
ಎದೆ ಬೆನ್ನು ಬಾಚ್ಚಿದ್ದು ಕಚಿದ್ದು
ಇದನ್ನು ಅಲ್ಲಿ ಚೀರುತ್ತಿದ್ದಾಳೆ

ಅವಳ ಹೂ ಉದುರಿತು
ಬಳೆ ಒಡೆಯಿತು
ವಸ್ತ್ರ ಕೆಂಪಾಗಿ
ಬಿದ್ದ ನೆಲದಲ್ಲಿ ಉಸಿರುಗಟ್ಟಿದಾಗ
ದೇವರು ಗುಡಿ ದಾಟಲಿಲ್ಲ
ತುಂಬಿದ ಹರೆಯದ ಮೇಲೆ ಕುಣಿದವರು
ದ್ರೌಪದಿಯ ಕಾಲದಿಂದ ಹೊರತಾಗಿಲ್ಲ

ಗುರುತುಗಳಿಗೆ ಅಂಗೈ ಮುಚ್ಚಿಕೊಂಡು
ಪಕ್ಕದ ಬೀದಿ ದಾಟುವಾಗ ನೀವು ದಿಟ್ಟಿಸಿದ್ದು
ಬಾಗಿಲ ಹೊರಗೆ ಇಣುಕಿ ಬೆಟ್ಟು ತೋರಿಸಿದ್ದು
ಇದೇ ಗೋಡೆಯೊಳಗೆ ಬಿಕ್ಕುತ್ತಿದ್ದಾಳೆ

ಅವಳ ಮನಸ್ಸು
ಮುಳ್ಳಿನ ಬೇಲಿ ಹೊದ್ದ ಹಾಸಿಗೆಯಂತೆ
ನಲುಗುತ್ತಿದೆ
ಹೊರ ಗಾಯದ ಮೈಗೆ ಹೊಲಿಗೆ ಬೀಳುತ್ತಿದೆ
ಬಿಸಿ ಕಂಡ ಸೆರಗಲ್ಲಿ ಕಟ್ಟಿ ಕೊಂಡಂತೆ
ಕನಸನ್ನು ಹೊತ್ತಿದ್ದಾಳೆ
ಅದು ಬರೀ
ಕರಕಲು ಕರಕಲು ಈಗ

ಕೇಕೆ ಹಾಕಿದವರು ಹುಟ್ಟುತ್ತಲೇ ಇದ್ದಾರೆ
ಸಂಧಿ ಗುಂದಿಯಲ್ಲಿ ಎಳೆಯುತ್ತಲೇ ಇದ್ದಾರೆ
ಬಾಯಿಬಿಡದ ಒಳ್ಳೆಯವರು ನಾವು
ಎಲ್ಲಾ ಮರೆಯುತ್ತಿದ್ದೇವೆ.

- ಎಂ.ಜಿ.ತಿಲೋತ್ತಮೆ ಭಟ್ಕಳ

ಎಂ.ಜಿ. ತಿಲೋತ್ತಮೆ

ಕವಿ ಎಂ.ಜಿ. ತಿಲೋತ್ತಮೆ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಪದವಿ ವಿಧ್ಯಾಭ್ಯಾಸವನ್ನು ಭಟ್ಕಳದಲ್ಲಿ ಪೂರೈಸಿದರು. ಸದ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರಿನ ವಿದ್ಯಾರ್ಥಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು. 2013ರಲ್ಲಿ ‘ನಾ ಅಬಲೆಯಲ್ಲ’, 2020ರಲ್ಲಿ `ನೀಲಿ ಬಯಲು’ ಕವನ ಸಂಕಲನಗಳು ಪ್ರಕಟಗೊಂಡಿವೆ. ಅವರಿಗೆ ಯುವ ಬರಹಗಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

More About Author