Poem

ಬೆಳಗಲಿ ವೀರರ ಹಣತೆಗಳು

ಕತ್ತಲಲ್ಲಿ ಕರಗದಿರಲಿ
ಮೌನದಲಿ ನರಳದಿರಲಿ
ಬರೆಯ ನಡುವೆ ಕಮರದಿರಲಿ
ಅಭಿಮಾನದ ಹೊಳೆ

ಬಿಳಿಯರು ಬಿಳಿಚಿದಂತೆ
ಕರಿಯರು ನೆರಳಿನಂತೆ
ಕುದುರೆಲದ್ದಿ ಬಳಿದ ಗುಲಾಮರಂತೆ
ತುತ್ತು ಕೂಳಿಗೂ ಅಂಗಲಾಚಿದಂತೆ

ನಮ್ಮ ನಾವ್ ಮಾರಿಕೊಂಡು
ಮಾನವೀಯತೆಯ ತೂರಿಕೊಂಡು
ಎಂಜಲಾಸೆಗೆ ಒತ್ತೆಯಿಟ್ಟು
ಬದುಕ ಕಟ್ಟಿದರು ನಮ್ಮವರಂದು

ನಮ್ಮ ನೆಲ ಜಲ ಕಣ್ಣೆದುರ ಕರಗಿಸಿ
ಅಧಿಕಾರಕೆ ನಮ್ಮವರೆ ನೆಲಕಚ್ಚಿ
ಹಾಡುಹಗಲೇ ದೋಚಿದರೂ
ಸಂಕೋಲೆಗಳ ಕಪಿ ಮುಷ್ಟಿಯಲ್ಲಿ

ದೇಶ ಪ್ರೇಮದ ಕಿಡಿಯು ಹೊತ್ತಿತು
ಸ್ವಾಭಿಮಾನದ ಕನಸು ಚಿಗುರಿತು
ಬಲಿದಾನದ ಯಾಗ ನಡಿಯಿತು
ಭಾರತಾಂಬೆಯ ಹೃದಯವರಳಿತು

ಇನ್ನೂರು ವರುಷಗಳ ನರಕದ ಒಡಲು
ನಮ್ಮವರೆದೆಗೂಡು ಸ್ವಾರ್ಥದ ಕಡಲು
ಮೆಟ್ಟಿ ನಿಲ್ಲಲು ಎಂಟೆದೆಯು ಸಾಕು
ಬಿಳಿಯರೋಡಿಸಲು ಗಂಡೆದೆಯು ಬೇಕು.

ಅಹಿಂಸೆ/ಹಿಂಸೆ ನಾಣ್ಯದ ಮುಖಗಳು
ಹೋರಾಟದ ಬಯಲಿಗೆಲ್ಲವೂ ಸತ್ಯಗಳು
ಬಿಡಿಸಲಾಗದ ನೆತ್ತರು/ನೇಣುಗಳು
ಬೆಳಗಲಿ ವೀರರ ಹಣತೆಗಳು

ಇನ್ನಾದರೂ ಭರತ ಮಾತೆ ನಗುತಿರಲಿ
ರಾಜ್ಯದ ಗಡಿಗಳು ಒಂದುಗೂಡಲಿ
ಅಖಂಡ ಭಾರತ ಛಿದ್ರವಾಗದಿರಲಿ
ದೇಶದೈಕ್ಯತೆಯು ಚಿರಯುವಾಗಲಿ

- ಶಿವಲೀಲಾ ಹುಣಸಗಿ

ವಿಡಿಯೋ
ವಿಡಿಯೋ

ಶಿವಲೀಲಾ ಹುಣಸಗಿ

ಕವಯತ್ರಿ ಶಿವಲೀಲಾ ಹುಣಸಗಿ ಅವರು ಎಂ.ಎ, ಬಿ.ಎಡ್ ಪದವೀಧರರು. ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಗ್ರಾನಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದ್ದಾರೆ. ಕಥೆ,ಕವನ,ಲಹರಿ,ಲೇಖನ, ಟಂಕಾ, ಹಾಯ್ಕುಗಳು, ರುಬಾಯಿ,ಗಝಲ್, ಪುಸ್ತಕ ವಿಮರ್ಶೆ, ಅಂಕಣ ರಹಗಳು, ಹಾಡುವುದು, ಓದುವುದು, ಚಿತ್ರಬಿಡಿಸುವುದು, ಉಪನ್ಯಾಸ, ನೃತ್ಯ, ರೇಡಿಯೋದಲ್ಲಿ ಸ್ವರಚಿತ ಕವನ ವಾಚನ, ಹಿರಿಯ ಸಾಹಿತಿ-ಕಲಾವಿದರ ಸಂದರ್ಶನ ನಡೆಸುವುದು, ಶಾಲಾ ಮಕ್ಕಳಿಗೆ ಅನುಕೂಲವಾಗುವ ಕಿರು ನಾಟಕಗಳು, ರೂಪಕಗಳು. ನಿರೂಪಣೆ.ಇತ್ಯಾದಿ ಇವರ ಹವ್ಯಾಸಗಳು. ಬೆಂಗಳೂರು, ಕಾರವಾರ, ಧಾರವಾಡ ಕೇಂದ್ರದಿಂದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.  ಮಕ್ಕಳಿಗೆ ವಿಶೇಷವಾಗಿ ಬಾಂಧವ್ಯದ ಮೆರಗು ಅಂಕಣ ಪ್ರಕಟಗೊಳ್ಳುತ್ತಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆಸುವ ರಾಜ್ಯ  ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ಮೂರು ವಿಶ್ವವಿದ್ಯಾಲಯದ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

ಕೃತಿಗಳು:  ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ (ಕವನ ಸಂಕಲನಗಳು), ಗೋರಿಯ ಸುತ್ತ ಸಪ್ತಪದಿ ತುಳಿದಾಗ (ಕಥಾ ಸಂಕಲನಗಳು), ಬೊಗಸೆಯೊಳಗಿನ ಆಕಾಶ (ಅಂಕಣ ಬರಹಗಳ ಸಂಗ್ರಹ ಕೃತಿ)

ಪ್ರಶಸ್ತಿ-ಪುರಸ್ಕಾರಗಳು:  ಅನುಪಮಾ ಸೇವಾ ಪುರಸ್ಕಾರ,  ಅಲ್ಲಮ ರಾಜ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ  ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ, ಕನ್ನಡ ರತ್ನ ರಾಜ್ಯ ಪ್ರಶಸ್ತಿ, ಯುಗದರ್ಶಿನಿ ರಾಜ್ಯ ಪ್ರಶಸ್ತಿ ಲಭಿಸಿವೆ. .

 

More About Author