Poem

ದಾಟು

ಜಗದ ಮಣ್ಣಿನ ಮೌನದ ಕಣ್ಣು
ತೆರದ ರೆಪ್ಪೆ, ಹಣ್ಣಾದ ಹುಣ್ಣು
ಕಂಬನಿ ಕೊಳದಿ ಅಜ್ಞಾತ ನೋವು
ಮೋಜಲಿ ಈಜುವ ಮೀನು ಥೇಟು
ನಕ್ಷತ್ರ ಬಿದ್ದ ಬನದ ದಾರಿಯ
ಬೇಲಿ ಹೂವಿನ ಸುಗಂಧ ಗೀತೆ
ಬಯಲಾದ ಬರಡು ಹೃದಯದಿ
ಮತ್ತೆ ಚಿಗುರಿದ ಒಲವ ಗರಿಕೆ
ಸುಖದ ಬೆನ್ನ ಹಿಂದೆ ದುಃಖ ಸಹಜ
ಹಗಲು ಇರುಳಾಗಿ ಕಾಲಚಕ್ರದ ಹೊರಳು
ಕಡಲ ತಟದ ಕಣಕಣ ಮರಳಾಗುವ
ಬದುಕ ಕ್ಷಣಗಳ ಹೊಳಹು
ಕಂಡರು ಒಂದಾಗಿ ಬಾನು ಭೂಮಿ
ದಿಗಂತದ ದಿರಿಸಿನ ಸೃಷ್ಟಿಗೆ
ಬೇರೆ ಬೇರೆ ಕಾಣು ಅರಿವಿನ ದೃಷ್ಟಿಗೆ

ಒಳಗೊಂದು ಹೊರಗೊಂದು
ಧರ್ಮಗಳ ಅಮಲಿನ ಲೋಕದ ಗಮ್ಮತ್ತು
ಹಸಿವು ದಾರಿದ್ರ್ಯಗಳ ಕೊನೆಗೊಳ್ಳದ ಹುಕುಮತ್ತು
ಉರಿವ ಪಂಜಿನ ಮೋಹಕ್ಕೆ
ಬಲಿಯಾಗುವ ಪತಂಗವಾಗಿ
ರೆಕ್ಕೆ ಬಿಚ್ಚುವ ಹಕ್ಕಿ ಮನಸ್ಸು
ಬಯಲಲ್ಲಿ ಹಾರಿದರೂ ಬಯಲಾಗದ
ಅಲಯದ ಬಂಧಿ
ಮುಪ್ಪಿಲ್ಲದ ಕನಸುಗಳ
ಫಲ ನೀಡದ ಬರಿಯ ಬಿತ್ತನೆ
ದಾಟಬೇಕು ನಾನು ಎಂಬ ಹೊಸ್ತಿಲನ್ನು ನೀನು
ಒಳಗಿಂದ ಹೊರಗೆ, ಹೊರಗಿನಿಂದ ಒಳಗೆ
ಇರುವಿಕೆಯೇ ಸಲ್ಲದಂತೆ
ಇದ್ದೂ ಇಲ್ಲದಂತೆ

ನಡೆದಷ್ಟು ದೂರ ನಿನ್ನ ಸಂಗ ನೀನು
ನಿನಗೇ ಅರ್ಥವಾಗುವ ಘಳಿಗೆ
ಇರುವುದೆಲ್ಲವ ಅಳಿದು
ಶೂನ್ಯವಾಗಿ ಪ್ರಜ್ವಲಿಸುವೆ...

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

ಚೊಚ್ಚಲ ಕೃತಿ: ‘ಏಕಾಂಗಿಯ ಕನವರಿಕೆಗಳು’- ಕವನ ಸಂಕಲನ. ಈ ಸಂಕಲನಕ್ಕೆ 2020 ರಲ್ಲಿ ಪ್ರಸ್ತುತ ಕೃತಿಗೆ, ಕರುನಾಡ ಕವಿ ಹಣತೆ ಬಳಗ(ರಿ)ದ ವಾರ್ಷಿಕ ಸಮ್ಮೇಳನದಲ್ಲಿ ವಿಮರ್ಶಕರರಿಂದ ಆಯ್ಕೆಯಾಗಿ ಉತ್ತಮ ಕೃತಿಯೆಂದು ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.

ಇತರೆ ಪುರಸ್ಕಾರಗಳು:2020ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಆಯೋಜಿಸಲಾಗಿದ್ದ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗುರುಕುಲ ಕಲಾ ಕುಸುಮ ಪ್ರಶಸ್ತಿ, ಮೈಸೂರಿನ ಫಿನಿಕ್ಸ್ ಬುಕ್ ಹೌಸ್ ನ ವತಿಯಿಂದ ಏರ್ಪಡಿಸಲಾದ, ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯಲ್ಲಿ, ತಮ್ಮ ಖಾಲಿ ಜೋಳಿಗೆ ಎಂಬ ಕಥೆಗಾಗಿ, ಫಿನಿಕ್ಸ್ ಪುರಸ್ಕಾರ ಕ್ಕೆ ಭಾಜನರಾಗಿದ್ದಾರೆ. ತಮ್ಮ ಚೊಚ್ಚಲ ಕವನ ಸಂಕಲವಾದ ಏಕಾಂಗಿಯ ಕನವರಿಕೆಗಳು ಕೃತಿಗೆ 2021 ರ ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುಕುಲ ಕಲಾ ಪ್ರತಿಷ್ಠಾನದವತಿಯಿಂದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗುರುಕುಲ ಶಿರೋಮಣಿ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.2021 ರ ಕನ್ನಡ ಸಾಹಿತ್ಯ ಪರಿಚಾರಿಕೆ ಹಾಗೂ ಸೇವೆಯನ್ನು ಗಮನಿಸಿ, ಕನ್ನಡ ನಗರ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಕನ್ನಡ ಸೇವಾ ರತ್ನ ಪುರಸ್ಕಾರ ಪಡೆದಿದ್ದಾರೆ. ಈ ತನಕ ತತ್ವಜ್ಞಾನ ಎಂಬ ಅಪ್ರಕಟಿತ ತಾತ್ವಿಕ ಚಿಂತನೆಯ ಕವನ ಸಂಕಲನದ ಹಸ್ತಪ್ರತಿಗೆ 2021 ನೇ ಸಾಲಿನ, ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

More About Author