ಮಾತು ಹುಟ್ಟುವ ತನಕ ಬಿಗಿದಿಡು ಬಸಿರನು, ಲೋಕ ಹುಟ್ಟದ ಹಾಗೆ !
ತೊಟ್ಟು ಕಳಚುವ ಆಟದಲಿ ಬೆರಳುಗಳೇ ಸವೆಯಲಿ,
ಬೀದಿಗೊಂದು ಗೋಪುರ ನಗ್ನವಾಗಲಿ.
ಸಂತೈಸಲು ಸಾವಿರ ಕಾರಣಗಳಿವೆ
ಸುಡುಗಣ್ಣಿನ ಹಬೆಗೆ ನೋಟಗಳು ನೋಯದಿರಲಿ
ನೂರು ಹೆಜ್ಜೆಗಳ ಗುಡ್ಡೆಯಲ್ಲಿ ಕರಗಿದ ಗುರುತಿಗೆ ಹೊಸ ವಿಳಾಸ ಬರೆದು ಬಿಡು
ಅಕ್ಷರಗಳು ಸಾಯದ ಹಾಗೆ!
ಉಪ್ಪಿನ ಹೊದಿಕೆಯ ಕಡಲು ಮೌನವಾಗಿ ಮಲಗಲಿ,
ಜಗಲಿಯ ದೀಪ ನಂದದ ಹಾಗೆ ನೀರುಣಿಸು
ನಮ್ಮಿಬ್ಬರ ತಬ್ಬಿದ ಕತ್ತಲೆಯ ಸುತ್ತ ಸುಕ್ಕು ಬಂದಿರಬಹುದು,
ವಿದಾಯಕ್ಕೆ ಮೊರೆ ಹೋಗದಿರು.
ಹೊಸ ಪರಿಚಯದ ಉಸಿರು ಬೇಗನೇ ಸಾಯಬಹುದು
ಹಳೆತನು ಕಾಪಾಡು ಹಳಸದ ಹಾಗೆ!
ಪ್ರತಿ ನೆನಪಿಗೊಂದು ಪದ್ಯವ ಬರೆದು, ಅಳಿಸಿದ್ದನ್ನೆ ಬರೆಯುವ ಹಮಾಲಿ ಕವಿತ್ವಕೆ
ಖಾಯಂ ನಗುವಿನ ಓದುಗಿ ನೀನು!
ಬಿದ್ದ ಮಳೆಗೆ ಬಿಸಿಲ ಮೈ ಒಣಗಲಿ,
ನಮ್ಮ ನೆರಳಲ್ಲೂ ನೇತಾಡುವ ನೋವಿಗೆ ಮುಲಾಮು ಬಳಿಯುತ್ತಲೇ ಇರು,
ಇಂದಲ್ಲ ನಾಳೆ ಮಾಯಾ ಬಹುದು
ಹೆಜ್ಜೆ ಅಳಿಸುವ ದಾರಿಯ ಹಾಗೆ !
ಆಡಿಯೋ
ವಿಡಿಯೋ
ಚಾಂದ್ ಪಾಷ ಎನ್. ಎಸ್.
ಚಾಂದ್ ಪಾಷ ಎನ್.ಎಸ್.(ಕವಿಚಂದ್ರ) ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ಮೇ ತಿಂಗಳ 1994ರಲ್ಲಿ ಜನಿಸಿದರು. ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.
'ಒದ್ದೆಗಣ್ಣಿನ ದೀಪ' ಕವನ ಸಂಕಲನ 2023ರಲ್ಲಿ ಪ್ರಕಟವಾಗಿದೆ. 'ಧೂಳಿಡಿದ ನಕ್ಷತ್ರ' (ನಾಟಕ) 'ಚಿತ್ರ ಚಿಗುರುವ ಹೊತ್ತು' (ಕವನ ಸಂಕಲನ) 2020ರಲ್ಲಿ ಪ್ರಕಟವಾಗಿದೆ.
ಇಟಲಿಯ ಪಿಯಾಸೆಂಜಾದಲ್ಲಿರುವ "ಪಿಕ್ಕೋಲೊ ಮ್ಯೂಸಿಯೊ ಡೆಲ್ಲಾ ಪೊಸಿಯ" ದಲ್ಲಿ ಕವಿತೆಯೊಂದು ಪ್ರದರ್ಶನವಾಗಿದೆ. ಶ್ರೀಲಂಕಾದಲ್ಲಿ ನಡೆದ ತೀರ್ಥ ಫರ್ಫಾಮೆನ್ಸ್ ಫ್ಲಾಟ್ ಫಾಮ್ 2019, ಬೆಂಗಳೂರು ಲಿಟರೇಚರ್ ಫೆಸ್ಟಿವಲ್ 2017, ಲಾಂಗ್ವೇಜ್ ಫೆಸ್ಟಿವಲ್, SIWE ಪೊಯೆಟ್ರಿ ಫೆಸ್ಟಿವಲ್ ಕೇರಳ 2018, 2019, ಲಿಟರೇಚರ್ ಫೆಸ್ಟಿವಲ್ ಹೈದರಾಬಾದ್ 2020, ಇತರ ಪ್ರಮುಖ ಕಾವ್ಯ ಗೋಷ್ಠಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ.
"2024ನೇ ಸಾಲಿನ ಕರ್ನಾಟಕ ಸಂಘ ಶಿವಮೊಗ್ಗ ನೀಡುವ "ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ", "2024 ನೇ ಸಾಲಿನ ಸಿ.ಪಿ.ಕೆ. ಕಾವ್ಯ ಪ್ರಶಸ್ತಿ" , 2023ನೇ ಸಾಲಿನ 'ಈ ಹೊತ್ತಿಗೆ ಕಾವ್ಯ ಪ್ರಶಸ್ತಿ', "ಬಸವ ಪುರಸ್ಕಾರ" 2020ರ ಸಾಲಿನ "ಚಿ. ಶ್ರೀನಿವಾಸರಾಜು ಕಾವ್ಯ ಪ್ರಶಸ್ತಿ", "ಅವ್ವ ಪ್ರಶಸ್ತಿ", “ಕುವೆಂಪು ಯುವ ಕವಿ ಪ್ರಶಸ್ತಿ” ." ಕಾವ್ಯ ಮನೆ ಕಾವ್ಯಪುರಸ್ಕಾರ" , ಎನ್ಕೆ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.
2022 ನೇ ಸಾಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಬಿ.ಎ. ಎರಡನೇ ಸೆಮಿಸ್ಟರ್ ಗೆ ಒಂದು ಕವಿತೆ ಪಠ್ಯವಾಗಿದೆ. ಇವರ ಕವಿತೆಗಳು ಸ್ಪ್ಯಾನಿಷ್, ಇಂಗ್ಲಿಷ್, ಹಿಂದಿ, ತಮಿಳು ಭಾಷೆಗಳಿಗೆ ಅನುವಾದವಾಗಿವೆ.