Poem

ಕಾದ ಕಾವಲಿಯ ಮೇಲಿನ ರೊಟ್ಟಿ

ಲದ್ದಿ ತುಂಬಿದ ತಲೆಯ ಬುದ್ದಿಗೆ
ಬಡಿದ ಲಟ್ಟಣಿಗೆ
ಖಟಕ್ ಎಂದು ಮುರಿದಂತೆ
ಬರೆಯಬೇಕು ಕವಿತೆ

ಬೆಂಕಿಯ ನಾಲಿಗೆಗೆ ಸಿಲುಕಿದ ಕಬ್ಬಿಣ
ಮೈಯೊಡ್ಡಿ ಮೃದುವಾಗಿ
ಮತ್ತಷ್ಟು ಗಟ್ಟಿಯಾದಂತೆ
ಮಾಗಬೇಕು ಬಾಳ ಸಂಹಿತೆ
ಬವಣೆಗಳ ಮೇಳದಲ್ಲಿ ನರಳಿ
ಕಷ್ಟ-ನಷ್ಟಗಳ ನಡುವಲ್ಲಿ ಬೆಂದು
ಸೃಷ್ಟಿಯಾಗಬೇಕು ಕವಿತೆ

ಅವ್ವನ ಗಾಜಿನ ಗೊಳಗಳ
ತೊಟ್ಟ ಖಾಲಿ ಕರಗಳು
ಹದವಾಗಿ ತಟ್ಟಿ ಹರವಿದ
ಕಾದ ಕಾವಲಿಯ ಮೇಲಿನ
ರೊಟ್ಟಿಯಂತಾಗಿ
ಬೇಯಬೇಕು ಕವಿತೆ

ಅಪ್ಪನ ಮೈಗಂಟಿದ
ಬೆವರಿನ ಘಮದ
ಕೈಗಳಿಗೆ ಮೆತ್ತಿದ
ಕೆಸರಿನ ನಂಟಿನ ಪ್ರೇಮದ
ಕಥೆಯಾದ ವ್ಯಥೆಯ
ಹೇಳಬೇಕು ಕವಿತೆ

ಸರಾಗವಿಲ್ಲ....
ಬದುಕಿನ ಬಂಡಿ ಹರಿವ ಹಾದಿ
ನಡೆದು ಬಿದ್ದು ಎದ್ದು
ದಿಗಂತದಿ ಸಂತಸದ
ಕುರುಹು ಕಂಡಂತಾಗಿ ಖುದ್ದು
ಕಷ್ಟದ ಸರಹದ್ದುಗಳ ದಾಟಿ
ಕ್ರಮಿಸಬೇಕು ಕವಿತೆ

ನೆರಳಿಲ್ಲದೆ ಹಾರುವ
ಮುಗಿಲ ಹಕ್ಕಿಯಂತೆ
ಮೂಕವಾದ ಭಾವಗಳ ಹೊಂದಿಸಿ
ಚಿಂತನೆಗಳ ಮಂಥಿಸಿ
ಮಗುವಿನ ತೊದಲು
ಹಾಡಾಗಬೇಕು ಕವಿತೆ

ಹೃದಯದ ಮಿಡಿತವನ್ನು ತುಡಿತವಾಗಿಸಿ
ಮನದ ಮೌನವನ್ನು ಮಾತಾಗಿಸಿ
ಬಿತ್ತಬೇಕಿದೆ ಬಿರಿದೆದೆಯ ನೆಲದಲಿ
ಅಡಗಿಸಿಟ್ಟ ನೋವು ನಿರಾಶೆಗಳನು
ಅಕ್ಷರಬೀಜವಾಗಿಸಿ
ಅಂತರಂಗದ ಅರಿವಿನ
ಬಿಂದುವಿನಲ್ಲಿ ಹುದುಗಿಸಿ
ಹುಟ್ಟಬೇಕಿದೆ ನಾಳೆಗೆ
ತಲೆಯೆತ್ತಿ ಮುಗಿಲೆತ್ತರಕ್ಕೆ
ಜ್ಞಾನವೃಕ್ಷವಾಗಿ ನಿಲ್ಲಬೇಕು ಕವಿತೆ

ಕತ್ತಲಾಲಯದ ಗೋಡೆಗಳ
ಉರುಳಿಸಿ ಬಯಲಾದಂತೆ
ಹೊತ್ತು ಮುಳುಗುವ ಹೊತ್ತಿಗೆ
ದೀಪ ಹಚ್ಚಿಟ್ಟಂತೆ
ಬೆಳಕಾಗಬೇಕು ಕವಿತೆ

ಇರುವುದೆಲ್ಲವ ಕಳೆದು
ತೃಪ್ತಿಯಾದಂತೆ
ಬೋಳು ಮರ ಮತ್ತೆ
ಚಿಗುರಿ ಹಸಿರಾದಂತೆ
ಅಳಿದು ಉಳಿಯಬೇಕು ಕವಿತೆ

◼️ ಜಬೀವುಲ್ಲಾ ಎಂ. ಅಸದ್
ಮೊಳಕಾಲ್ಮುರು

ವಿಡಿಯೋ
ವಿಡಿಯೋ

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

ಚೊಚ್ಚಲ ಕೃತಿ: ‘ಏಕಾಂಗಿಯ ಕನವರಿಕೆಗಳು’- ಕವನ ಸಂಕಲನ. ಈ ಸಂಕಲನಕ್ಕೆ 2020 ರಲ್ಲಿ ಪ್ರಸ್ತುತ ಕೃತಿಗೆ, ಕರುನಾಡ ಕವಿ ಹಣತೆ ಬಳಗ(ರಿ)ದ ವಾರ್ಷಿಕ ಸಮ್ಮೇಳನದಲ್ಲಿ ವಿಮರ್ಶಕರರಿಂದ ಆಯ್ಕೆಯಾಗಿ ಉತ್ತಮ ಕೃತಿಯೆಂದು ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.

ಇತರೆ ಪುರಸ್ಕಾರಗಳು:2020ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಆಯೋಜಿಸಲಾಗಿದ್ದ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗುರುಕುಲ ಕಲಾ ಕುಸುಮ ಪ್ರಶಸ್ತಿ, ಮೈಸೂರಿನ ಫಿನಿಕ್ಸ್ ಬುಕ್ ಹೌಸ್ ನ ವತಿಯಿಂದ ಏರ್ಪಡಿಸಲಾದ, ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯಲ್ಲಿ, ತಮ್ಮ ಖಾಲಿ ಜೋಳಿಗೆ ಎಂಬ ಕಥೆಗಾಗಿ, ಫಿನಿಕ್ಸ್ ಪುರಸ್ಕಾರ ಕ್ಕೆ ಭಾಜನರಾಗಿದ್ದಾರೆ. ತಮ್ಮ ಚೊಚ್ಚಲ ಕವನ ಸಂಕಲವಾದ ಏಕಾಂಗಿಯ ಕನವರಿಕೆಗಳು ಕೃತಿಗೆ 2021 ರ ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುಕುಲ ಕಲಾ ಪ್ರತಿಷ್ಠಾನದವತಿಯಿಂದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗುರುಕುಲ ಶಿರೋಮಣಿ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.2021 ರ ಕನ್ನಡ ಸಾಹಿತ್ಯ ಪರಿಚಾರಿಕೆ ಹಾಗೂ ಸೇವೆಯನ್ನು ಗಮನಿಸಿ, ಕನ್ನಡ ನಗರ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಕನ್ನಡ ಸೇವಾ ರತ್ನ ಪುರಸ್ಕಾರ ಪಡೆದಿದ್ದಾರೆ. ಈ ತನಕ ತತ್ವಜ್ಞಾನ ಎಂಬ ಅಪ್ರಕಟಿತ ತಾತ್ವಿಕ ಚಿಂತನೆಯ ಕವನ ಸಂಕಲನದ ಹಸ್ತಪ್ರತಿಗೆ 2021 ನೇ ಸಾಲಿನ, ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

More About Author