Poem

ಕವಿಯಾಗಿಸಿತು

ಅವನ ಪ್ರೀತಿ ಮುಂದೆ
ಎಲ್ಲ ಸೊನ್ನೆ ಸೊನ್ನೆ
ಬದುಕಿನ ಸುತ್ತ ಅವನದೆ ಹಾಡು
ಬಯಲು ಬೆರಗಾಯಿತು.
ಮೌನ ಮಾತಾಗಿ ಕಡಲಾಯಿತು
ಹನಿಧಾರೆಗಳೆಲ್ಲ ಮುತ್ತಾಗಿ ಮಾತಾದವು.

ತುಂಬಿದೆದೆಯೊಳಗೆ
ನಿತ್ಯ ಮೌನ ಹೊತ್ತು ಬಿತ್ತಿದ
ಮಾತಿನ ಕಲರವದ ನಿನಾದ.
ಅವನ ಇಣುಕು ನೋಟ
ಮುಗುಳುನಗೆ ಬೆಳದಿಂಗಳೂಟ
ಮಾತು ಎದೆ ತಣಿಸೋ ಲಲ್ಲೆ
ಬಾಳ ಸಾಗರಕೆ ನೆನಪುಗಳ
ಬುಗ್ಗೆ ಲಗ್ಗೆ ಇಟ್ಟಿದ್ದೆ ತಿಳಿಯಲಿಲ್ಲ.
ಹುಟ್ಟನು ಹಾಕಿ ಮೀಟುತ
ದಡವ ದಾಟಿ ಬಾಚಿ ತಬ್ಬಿತು
ಮೆಲ್ಲಗೆ ಮನಕೆ ಕಾವ್ಯತೋಟ.

ಕಲ್ಪನೆಯ ಕೂಸಿಗೆ ನಿತ್ಯ ಜಳಕ
ಮಾಡಿಸಿ ಶುದ್ಧ ಬಟ್ಟೆ ತೊಡಿಸಿ
ಒಂದಿಷ್ಟು ಗಂಧ ಹಚ್ಚಿ
ಕಪ್ಪು ಕಾಡಿಗೆಯ ಬೊಟ್ಟು
ಜೊತೆಗೊಂದು ದೃಷ್ಟಿ ಬೊಟ್ಟಿರಿಸಿ
ಕೆನ್ನೆ ಚಿವುಟಿ ಲಟಿಕೆ ಮುರಿದು
ಕಣ್ಣು ಕೆಂಪಾಗೆ ಮಾಡಿ ಅತ್ತಾಗಲೆಲ್ಲ
ಮುದ್ದುಗರೆದೇ ಬಿಟ್ಟ.
ಮನಭಾವದ ತುಂಬೆಲ್ಲ
ಕಾವ್ಯರಸದ‌ ಮಹಾಪೂರ
ಭೋರ್ಗೇರೆದು
ಕವಿಯಾಗಿಸಿತು ನನ್ನ.

✍️ವಾಣಿ ಭಂಡಾರಿ

ವಾಣಿ ಭಂಡಾರಿ

ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ,  ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.

 ಕೃತಿಗಳು : ಅಂತರ್ ದೃಷ್ಟಿ- ವಿಮರ್ಶಾ ಸಂಕಲನ, ತುಂಗೆ ತಪ್ಪಲಿನ ತಂಬೆಲರು ಭಾಗ:1+2 (ಸಂಶೋಧಾನ್ಮತಕ‌ ಕೃತಿ), ಸಂತನೊಳಗಿನ ಧ್ಯಾನ

More About Author