Poem

ಕೆಡುಕಿನ ಕುಡಿತದ ಕಾವ್ಯ ಹನಿಗಳು

ತೂರಾಡುವವರೆಲ್ಲಾ ಕುಡಿದಿದ್ದಾರೆಂದು
ಭಾವಿಸಬೇಡಿ
ನಗುತ್ತಾ ಬಾಳುವವರನ್ನು ಬಲು ಸುಖಿ
ಅಂದುಕೊಳ್ಳಬೇಡಿ
ಜೀವನ ನಾಟಕವಲ್ಕ- ನಾಟಕವೇ ಜೀವನ; ನಿಮ್ಮೊಳಗೂ ದರ್ದಿದೆ
ಇಣುಕಿ ನೋಡಿಕೊಳ್ಳಲು ಮರೆಯಬೇಡಿ!

ಕುಡಿದಿದ್ದು ಈಟಾದ್ರೂ
ವಾಲಾಡದು ರಸ್ತೆ ತುಂಬಾ
ದಾರಿಯೇನೋ ಕಿಲೀನು
ಆದ್ರೆ ನೀನೇ ನೀನು ಕಣ್ತುಂಬ!

ಹೆಂಡ ಕುಡಿದ ಬಾಯಲ್ಲಿ
ನಿನ್ ಮಾತ್ ಬ್ಯಾಡ
ನಿನ್ ಮರೀಬೇಕಂತ್ಲೆ
ತಂದ್ಕಂಡಿರಾದು ಬ್ರಾಂಡಿ ಮತ್ತು ಸೋಡ!

ಬಾ ಕೂಡಿ ಕುಡಿಯೋಣ
ನಾಳೆಗಳ ಮರೆತು
ಸುಡುವ ದ್ರವಕ್ಕೆಲ್ಲಿದೆ ಕೊಲ್ವ ತಾಕತ್
ಅದೂ ನಿನ್ನ ಹೊರತು!

ಕುಡುಕರನ್ನೇಕೆ ತೆಗಳುವಿರಿ
ಅವರು ಬರೀ ಮದ್ಯಪಾನಿಗಳು
ಬೇಕಿದ್ದರೆ ಬೈಯಿರಿ ಕವಿಗಳಿಗೆ
ಅವರು ಕೊರೆಯೋ ಪದ್ಯಪಾನಿಗಳು!

ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್

ಗೆಳೆಯ ನಟರಾಜ್ ಅವರ ಅಕಾಲಿಕ ಮರಣ ಸೈಯದ್‌ ಫೈಜುಲ್ಲಾ ಅವರಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಮಿತ್ರ ತನ್ನೊಂದಿಗೆ ಸದಾ ಇರಬೇಕೆಂಬ ಹಂಬಲ. ಪರಿಣಾಮ ತನ್ನ ಹೆಸರಿಗೆ ಗೆಳೆಯನ ಹೆಸರನ್ನು ಸೇರಿಸಿಕೊಂಡರು. ಸಂತೆಬೆನ್ನೂರು ಫೈಜ್ನಟ್ರಾಜ್ ಎಂದು ಬದಲಾದರು. 

ಬಹುಶಃ ನಾಡಿನ ಪತ್ರಿಕೆಗಳನ್ನು ನಿಯತಕಾಲಿಕಗಳನ್ನು ನಿರಂತರ ಓದುವವರಿಗೆ ಫೈಜ್ನಟ್ರಾಜ್‌ ಹೆಸರು ಚಿರಪರಿಚಿತ. ಅವರ ಹೆಸರು ನಾಡಿನ ಯಾವುದಾದರೂ ಪತ್ರಿಕೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಹಾಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಲೇ ಇರುವ ನಿರಂತರತೆ ಯನ್ನು ಅವರು ಕಾಯ್ದುಕೊಂಡಿದ್ದಾರೆ. 

ದಾವಣಗೆರೆ ಜಿಲ್ಲೆ ಚನ್ನಗಿರಿಯ ಸಂತೆಬೆನ್ನೂರು ಗ್ರಾಮದಲ್ಲಿ ಜನನ. ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರು. ’ಎದೆಯೊಳಗಣ ತಲ್ಲಣ’, ’ಬುದ್ಧನಾಗ ಹೊರಟು’ ಕವನ ಸಂಕಲನಗಳಾದರೆ ’ಮಂತ್ರದಂಡ, ಸ್ನೇಹದ ಕಡಲಲ್ಲ’ ಮಕ್ಕಳ ಕೃತಿಗಳು. ರೇಷು ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಾಶಿಸುತ್ತಲೂ ಇದ್ದಾರೆ. 
 

More About Author