
ತಿಪಟೂರು ಮೂಲದ ಸಂಘಮಿತ್ರೆ ನಾಗರಘಟ್ಟ ಅವರ 'ಕ್ಷಮಿಸಿ ನಮ್ಮದು ಒಂದೇ ಬೇಡಿಕೆ' ಕವಿತೆಯ ಸಾಲುಗಳು ಹೀಗಿವೆ...
ಕೇರಿಯೊಂದರ ನಡುವಿನ ಮರದಲ್ಲಿ
ಎಂದಿಗೂ ಸೂರ್ಯನ ಬೆಳಕು ಕಾಣದ
ಸಮಾನವಿಲ್ಲದ ಸಾವಿರಾರು ಎಲೆಗಳು,
ಕತ್ತಲಲ್ಲೇ ಅವಿತು ಕೂತ ಕೊಂಬೆಗಳು,
ಎಲ್ಲದರ ಅನುದಿನದ ಕೋರಿಕೆ ಒಂದೇ-
ಬೆಳಕಿನೊಳಗೊಂದು ಸಮ ಬೆಳಕು ಮಾತ್ರ!
ಬಾಡಿದ ಎಲೆಗಳಿಗೋ ನೆಲಕಚ್ಚುವ ಮುನ್ನ,
ಚಿಗುರಿ ಮರವನ್ನೊಮ್ಮೆ ತಬ್ಬಿ ನಿಲ್ಲುವಾಸೆ.
ಹಕ್ಕಿಯ ಹಾಡಿಗೆ ತಲೆದೂಗುವ ಮುನ್ನವೆ-
ಅದರ ಕೊಕ್ಕಿಗೆ ಸಿಕ್ಕಿ ನಲುಗಿದ ಎಲೆಗಳ
ಕಣ್ಣಿನಲ್ಲೂ, ಹಸುಳೆಯ ನಗುವ ಕಾಣುವಾಸೆ.
ಹಸಿದೆಲೆಗಳ ಕೂಳು ಟೊಂಗೆಯ ಕೈಸೇರುವ
ಮುನ್ನವೇ - ಮರ ಕಾಲವನ್ನು ಎಣಿಸದೆ
ತೂಕ ತೂಗುವುದ ಕಲಿಯಬೇಕಾಗಿದೆ !
ಇಲ್ಲಿ ಮೀಸಲಿಡುವಿಡುವುದೂ-
ಒಂದು ರೀತಿ ಹರಿದೆಲೆಗಳ ಗಾಯಗಳ
ಮುಂದೆ ಮುಲಾಮಿನ ಕನ್ನಡಿ ಹಿಡಿದಂತೆ.
ಸಂಘಮಿತ್ರೆ ನಾಗರಘಟ್ಟ
ಮೂಲತಃ ತಿಪಟೂರಿನವರು. ತಂದೆ ಎನ್.ಕೆ ಹನುಮಂತಯ್ಯ, ತಾಯಿ ಶೈಲಜ ನಾಗರಘಟ್ಟ. ಆಂಗ್ಲ ಭಾಷೆಯಲ್ಲಿ ಎಂ.ಎ ಪದವಿ ಪಡೆದಿರುವ ಇವರು ರೇಖಾಚಿತ್ರ, ಸಂಗೀತ, ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರೊಟ್ಟಿಗೆ ಹಿಮಪಕ್ಷಿ ಎಂಬ ಮುಖ ಸಂಪುಟ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ.
More About Author