Poem

ಮಧುರ ನೆಲ

ಮಧುರ ನೆಲ

ಗೋಣು ಎತ್ತರಿಸಿ ನೋಡಿದರೆ
ಮಹಾರಾಷ್ಟ್ರ ಗಡಿ
ಬಾರ್ಡರ್ ಚೆಕ್ ಪೋಸ್ಟ್
ಸುತ್ತುವರೆದ ಭೀಮೆಯ ತಂಗಾಳಿ
ಎನ್ ಎಚ್ ಹದಿಮೂರು
ಸದಾ ಹರಿಯುವ ಮಾಯಾವಿ ನದಿ
ಎರೆ ಹುಳುವಿನಂತೆ 
ನಿರಂತರವಾಗಿ
ತೆವಳುವ ಮೋಟಾರ್ ಗಳು
ಹೊಳೆಯುವ ಢಾಬಾಗಳು

ಮಧುರ ಬಟ್ಟಲು ಹೀರುತ್ತಾ 
ಉರ್ದು ಶಾಹಿರಿ ಕೇಳುತ್ತಾ
ಮಬ್ಬುಗತ್ತಲೆ ಆವರಿಸಲು
ಆತ್ಮ ಕಳವಳಗೊಳ್ಳುತ್ತದೆ
ಕಾಣದ ಹನಿಗಳು
ಜಾರಿ ಮರೆಯಾಗುತ್ತವೆ

ಗೆಳೆಯ,
ಅನೇಕ ಸಂಗತಿಗಳ ಸುದ್ದಿ
ಬಿತ್ತರಿಸುತ್ತಲೆ ಇರುತ್ತಾನೆ
ಮೌನ ನನ್ನ ತಬ್ಬಿ ಹೊರಳಾಡಿಸುತ್ತದೆ

ಆತ್ಮ ಹೊರಡುತ್ತದೆ
ತೊಳೆದಿಟ್ಟ ಪ್ರತಿಮೆಯಂತ
ಹೊಳೆಯುವ 
ಇಳಿಜಾರಿನ ನವಿಲೂರಿಗೆ
ಅವಗಾಹನಿಸುವ ನಲ್ಲನನ್ನು
ಸುಮ್ಮನೆ ಮುನ್ನುಗ್ಗಿ
ಅಪ್ಪಿಕೊಂಡು ಬಿಡುತ್ತೇನೆ

ದೂರದಲ್ಲಿ ಯಾರೋ
ಹಿತವರ‌ ದನಿ ಕೇಳುತ್ತದೆ
ಈ ನೆಲ ನಿನ್ನದಲ್ಲ
ಈ ಊರು ನಿನ್ನದಲ್ಲ
ಈ ಜನರು ನಿನ್ನವರಲ್ಲ!

ಒಂದೇ ಸವನೆ
ಕಣ್ಣಗಲಿಸಿ ನೋಡುತ್ತೇನೆ
ಇದೇ ಮಣ್ಣಲಿ ಮಣ್ಣಾಗಲು
ಅಂಗೈಯಲ್ಲಿ ಬರೆದ
ಮಲ್ಲನ ಹೆಸರು
ಬೆವರಿನಲ್ಲೂ ಹಸಿರಾಗಿದೆ
ಯಾರೋ ನಗುತ್ತಲೇ ಇದ್ದಾರೆ
ಸದಾ!

ಆಡಿಯೋ
ವಿಡಿಯೋ

ಸುಮಿತ್ ಮೇತ್ರಿ

ಸುಮಿತ್ ಮೇತ್ರಿ- ವಿಜಯಪುರ ಜಿಲ್ಲೆಯ ಹಲಸಂಗಿಯಲ್ಲಿ 1986ರಲ್ಲಿ ಜನಿಸಿದರು. ತಂದೆ ಗಣಪತಿ, ತಾಯಿ ಗಂಗಾಬಾಯಿ ವಿಜ್ಞಾನ ಶಿಕ್ಷಕರಾದ ಇವರು ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದ ಕಜ್ಜಿಬಂಡಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲಸಂಗಿ, ವಿಜಯಪುರ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ.

ಓದು-ಬರಹ, ಕಾವ್ಯ, ಕಾಡು, ಸುತ್ತಾಟ ಇವರ ಅಭಿರುಚಿ. ಮೌನ, ಧ್ಯಾನ ಅಂದರೆ ಬಲು ಇಷ್ಟ ಎನ್ನುವ ಇವರು ಏಕಾಂತ ಅವರ ಪಾಲಿನ ಸ್ವರ್ಗ ಎನ್ನುತ್ತಾರೆ. ಓದು, ಬರಹದ ಜೊತೆಗೆ ಪೋಟೋಗ್ರಫಿ ಸುಮಿತ್ ಅವರ ಮೆಚ್ಚಿನ ಹವ್ಯಾಸಗಳನ್ನೊಂದು. ರಾಜ್ಯ ಮಟ್ಟದ ವಿಜ್ಞಾನ ಆವಿಷ್ಕಾರಗಳಲ್ಲಿ ತೊಡಗಿಕೊಂಡಿದ್ದು, ಅನೇಕ ಇಲಾಖಾ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸರ್ಕಾರಿ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಬಳಗದೊಂದಿಗೆ ಕ್ರಿಯಾಶೀಲರಾಗಿರುವ ಇವರು " ಸುಗಮ " ಅಂತರ್ಜಾಲ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದೀರ್ಘ ಕಾಲ ಕಾವ್ಯದೊಂದಿಗೆ ಜೀವಿಸಿದ ತರುವಾಯು ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ ಎಂಬ ಚೊಚ್ಚಲ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಅತ್ಯುತ್ತಮ ಕೃತಿ ಪ್ರಶಸ್ತಿ ದೊರೆತಿದೆ. 

More About Author