Poem

ಮುಟ್ಟು

ಮುಟ್ಟಿನ ಕುಂಡದಲ್ಲಿ ಹುಟ್ಟಿದ ಜೀವಗಳಲ್ಲಿ
ಒಂದು ಮಡಿ ಇನ್ನೊಂದು ಮೈಲಿಗೆ
ಕಿಬ್ಬೊಟ್ಟೆಯ ಸಡಗರಕ್ಕೆ ಸೂತಕದ ಸೆರಗೆಳೆದು
ಗಡಿಪಾರಿನ ಭಾಗ್ಯವ ಕರುಣಿಸುವುದೇಕೆ?

ಬೇರೂರಿದ ಟೊಳ್ಳು ಮರಕೆ
ಹಗ್ಗ ಒಸೆದು ಕೊರಳೊಡ್ಡುವ ಜಾಯಮಾನಕೆ
ತಲೆ ಬಗ್ಗುವ ಗೊಡ್ಡುತನವೇತಕೆ

ಒಳಗಿರುವ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ
ಎಂದಾದ ಮೇಲೂ
ಅಳಿವ ಪಳೆಯುಳಿಕೆಗಳಿಗೆ ಈ ಧೀಮಾಕು ಬೇಕೆ

ಮುಟ್ಟಿಲ್ಲದೇ ಜಗವಿಲ್ಲ, ಮುಟ್ಟಿಲ್ಲದೇ ಬದುಕೂ ಇಲ್ಲ
ಮುಟ್ಟಿಲ್ಲದೇ ತೊಟ್ಟಿಲುಗಳೂ ಇಲ್ಲ
ಮುಟ್ಟಿಗೆ ಕೀಳರಿಮೆ ಏಕೆ?

ಹತ್ತಿಕ್ಕದಿರಿ, ಬಂಧಿಸದಿರಿ, ಗಡುವ ನೀಡದಿರಿ
ಬಿಗಿದಿಟ್ಟುಕೊಂಡ ದುಃಖವೆಲ್ಲಾ ಹರಿಯಲಿ
ಭೋರ್ಗರೆಯಲಿ ಎದೆ ಭಾರ ಹಗುರವಾಗಲಿ

ಧರ್ಮ ಗ್ರಂಥಗಳಿಂದ ಬಿಡುಗಡೆ ಪಡೆಯಲಿ
ಬಲವಂತವಾಗಿ ಅಲ್ಲದೇ
ಮುಕ್ತವಾಗಿ ಜೀವಿಸಲಿ, ಮುಕ್ತವಾಗಿ ಜೀವಿಸಲಿ

- ರೇಣುಕಾ ಕೋಡಗುಂಟಿ

 

 

 

ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ.

ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ಲೇಖನಗಳ ಸಂಗ್ರಹ-2009), ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಶವಂಸ್ಕಾರ (2020- ಸಂಶೋಧನಾತ್ಮಕ ಲೇಖನಗಳ ಸಂಗ್ರಹ) ಪ್ರಸ್ತುತ ಜಾನಪದ ಒಗಟುಗಳನ್ನು ಮತ್ತು ಡೊಳ್ಳಿನ ಪದಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಸ್ಕಿ ಕನ್ನಡ ನಿಘಂಟು’ ರಚನೆಯತ್ತ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಸೊಗಡಿನ ಶೈಲಿಯಲ್ಲಿ ಹಲವಾರು ಕಥೆಗಳನ್ನು ಬರೆದಿದ್ದಾರೆ. ಬುಕ್ ಬ್ರಹ್ಮದಲ್ಲಿ ಹಲವಾರು ಅಂಕಣ ಬರಹಗಳನ್ನು ಬರೆಯುತ್ತಿದ್ದಾರೆ.


 

More About Author