Poem

ನಾನೂ ಸಾಯುತ್ತೇನೆ!  

ನಾನೂ ಸಾಯುತ್ತೇನೆ
ಒಂದು ದಿನ;
ನನಗೆ ತಿಳಿಯುವುದಿಲ್ಲ!
ಅಲಾಪ, ಆಕ್ರಂದನ‌, ಅಳು
ಕೇಳಿಸುವುದಿಲ್ಲ ನನಗೆ;
ನೀನು-ನಾನು, ಅವರು-ಇವರು
ಕಾಣಿಸುವುದಿಲ್ಲ !
ಹತ್ತು ಜನ ಹೊರಬಹುದು
ಚಟ್ಟವ; ಹೆಗಲು ಬದಲಿಸಿ
ನಾನು ಮೆಚ್ಚುವುದಿಲ್ಲ !
ದೂರಬಹುದೇನೋ ಕೆಲವರು
ನಿರಾಶಾಭಾವದಿಂದ; ತಿರುಗಿ
ನಾನು ತೆಗಳುವುದಿಲ್ಲ!
ಬೆಂಕಿ ಹಚ್ಚಬಹುದು; ಚಿತೆಯ
ಮೇಲಿರಿಸಿ - ಸುಟ್ಟ ನೆನಪು
ನನಗಿರುವುದಿಲ್ಲ!
ಮಣ್ಣಲ್ಲಿ ಮಣ್ಣಾಗಿಸಬಹುದು;
ಉಸಿರುಗಟ್ಟಿದ ಅನುಭವ
ನನಗಾಗುವುದಿಲ್ಲ !
ಪ್ರೀತಿ ಹಣತೆ‌ಯ ಬೆಳಗಬಹುದು
ಸತ್ತ ದಿನ; ‌ಗೋರಿ ಕಟ್ಟಿ,
ಶಾಸನವೊಂದ‌ ಬರೆಸಲೂಬಹುದು;
ನನಗೆ ಅರಿವಾಗುವುದಿಲ್ಲ !
ಕವಿಯೆಂದೋ, ಗುರುವೆಂದೋ
ಮಗ, ಜಗ, ಸ್ನೇಹಿತನೆಂದೋ
ಕಣ್ಣೀರ ಕರೆದು, ಮತ್ತೆಂದೋ
ನೆನಪು‌ ಮಾಡಿಕೊಳ್ಳಬಹುದು
ನೀವು; ನಾನಿರುವುದಿಲ್ಲ !
ನಾನೂ ಸಾಯುತ್ತೇನೆ
ಕೊನೆಗೊಂದು ದಿನ;
ಯಾರಿಗೂ ತಿಳಿಯುವುದಿಲ್ಲ!
✍️ ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author