Poem

ನನ್ನ ಕವಿತೆ 

ನನ್ನ ಕವಿತೆ
ಯಾರಿಗೂ ಬೇಡದ ಕವಿತೆ
ಯಾರೂ ಓದದ ಕವಿತೆ
ನಾನೇ ಬರೆದ ಕವಿತೆ
ಇದು ನನ್ನದೇ ವ್ಯಥೆ

ದೊಡ್ಡ ಡೊಡ್ಡ ಪತ್ರಿಕೆಗಳು
ಸಾಮಾಜಿಕ ಜಾಲತಾಣಗಳು
ಕಲರ್ ಪುಲ್ ಮ್ಯಾಗಜಿನ್ ಗಳು
ವೆಬ್ ಪತ್ರಿಕೆಗಳು ತಿರಸ್ಕರಿಸಿದ ಕವಿತೆ
ನನ್ನ ಕವಿತೆ

ಬಾಯಿಂದ ಬಾಯಿಗೆ ಹರಡದೆ
ಕ್ಯಾಸೆಟ್ಟುಗಳಲ್ಲಿ ಸುತ್ತದೆ
ಕಾರ್ಯಕ್ರಮಗಳಲ್ಲಿ ಹಾಡಿಸಿಕೊಳ್ಳದೆ
ಹುಡುಕಿದರೂ ಸಿಗದೆ
ನನ್ನಲ್ಲೇ ಉಳಿದ ಕವಿತೆ
ನನ್ನ ಕವಿತೆ

ಯಾವ ಪುರಸ್ಕಾರಗಳಿಲ್ಲ
ಬಹುಮಾನಗಳಿಗಾಗಿ ಬೇಯಲಿಲ್ಲ
ಯಾರೂ ವಿಮರ್ಶಿಸಲಿಲ್ಲ
ಹೊಗಳುವುದಿರಲಿ..
ತೆಗಳಲೂ ಮನಸು ಮಾಡಲಿಲ್ಲ
ಯಾರನ್ನೂ ಮುಟ್ಟದ ಕವಿತೆ
ನನ್ನ ಕವಿತೆ

ಬಡತನದ ಬಸುರು ನ್ಯಾಯಕ್ಕೆ ಹೆಸರು
ಮಾನವೀಯತೆ ಸಾರುವ
ಪರಿಸರ ಕಾಳಜಿ ಮಾಡುವ
ಸಮಸಮಾಜದ ಕನಸ ಹೊತ್ತ
ಛಂದಸ್ಸಿನ ಶಿಸ್ತಿಲ್ಲದ ಕವಿತೆ
ನನ್ನ ಕವಿತೆ

ಇದ್ದದ್ದು ಇದ್ದಂಗೆ
ನೋಡಿದ್ದು ಮಾಡ್ದಂಗೆ
ಕೇಳಿದ್ದು ಹೇಳ್ದಂಗೆ
ಪ್ರಾಮಾಣಿಕತೆ ಮೆರೆಯುವ
ನೇರ ನುಡಿಯ ಕವಿತೆ
ನನ್ನ ಕವಿತೆ

ನಿರ್ಜೀವಕ್ಕೆ ಜೀವ ತುಂಬುವ
ಸೋಲಿಗೆ ಗೆಲವು ಕಾಣಿಸುವ
ನೋವಿಗೆ ನಲಿವು ಹಂಚುವ
ಚಿಂತೆಗಳ ಚಿತೆಗಳನ್ನು ಸಮಮಾಡುವ
ಬರೆಸಿಕೊಳ್ಳಲು ಹಿಂಜರಿಯುವ
ಬರೆದ ಮೇಲೆ ಕೈಗೆ ಸಿಗದ ಅದೃಶ್ಯ ಕವಿತೆ
ನನ್ನ ಕವಿತೆ

- ಅನಂತ ಕುಣಿಗಲ್

ಅನಂತ ಕುಣಿಗಲ್

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. 

ಪ್ರಕಟಿತ ಕೃತಿಗಳು : ಋಣಭಾರ (ಕಥಾಸಂಕಲನ), ಮೂರನೆಯವಳು (ಕವನಸಂಕಲನ), ರೌದ್ರಾವರಣಂ (ಕಾದಂಬರಿ). 
 

More About Author