Poem

ಸಬಲಳಾಗುವೆ ನಾನು

ಹೆಣ್ಣಾಗಿ ಹುಟ್ಟಿರುವೆ ದೈವಲೀಲೆಯಲಿ
ಸಣ್ಣ ದೋಷಕೂ ನಾ ಹೊಣೆ ಜಗದಲಿ
ಹುಣ್ಣಂತೆ ನೋಡುವರು ಜಿಗುಪ್ಸೆಯಲಿ
ಕಣ್ಣ ಹನಿಗಳು ಕರೆಗಟ್ಟಿವೆ ಕಪೋಲದಲಿ

ಮನೆಯ ಕೆಲಸಕೆ ಮೂಗೆತ್ತಿನಂತಾದೆ
ಧ್ವನಿಯ ಎತ್ತದೇ ದುಡಿದು ಹೈರಾಣಾದೆ
ತನಯೆಯ ರಮಿಸುವರೆಂದು ಬಹಳ ಕಾದೆ
ಮನ ನೊಂದಿರಲು ಪಂಜರದ ಪಕ್ಷಿಯಂತಾದೆ

ಕೊಂದಿರುವರೆಷ್ಟೋ ಹೆಣ್ಣು ಭ್ರೂಣವನು
ನೊಂದ ತಾಯಿಗೆ ಕೊಡುವರೇ ನ್ಯಾಯವನು
ಬೆಂದ ಹೃದಯ ಶಪಿಸದಿರುವುದೇ ಜಗವನು
ಸಂದೇಹಿಸಿದ ಮಂದಿಯ ಅಮಾನವೀಯತೆಯನು

ಕೊರಗದಲೆ ನಾನೀಗಲೇ ಸಬಲಳಾಗಬೇಕು
ಸರಿಯಾಗಿ ಸಮತಾವಾದ ಮಂಡಿಸಬೇಕು
ವರವಾಗಿ ಬಂದಿಹಳೆಂದು ಲೋಕ ಮೆಚ್ಚಬೇಕು
ಮರುಳಾಗಿ ವನಿತೆ ಧೀಮಂತೆ ಎನ್ನುತಿರಬೇಕು

ಅಪರ್ಣಾದೇವಿ

ಅಪರ್ಣಾದೇವಿ

ಕವಿ ಅಪರ್ಣಾದೇವಿ ಅವರು ಮೂಲತಃ ದಾವಣಗೆರೆಯವರು. ಕೇಂದ್ರಸರ್ಕಾರದ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡಿರುತ್ತಾರೆ. ಕಥೆ, ಕವನ, ಲೇಖನ ಓದುವುದು, ಬರೆಯುವುದು ಅವರ ಹವ್ಯಾಸ. ಅನೇಕ ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿರುವ ಅವರ ಚೊಚ್ಚಲ ಕವನ ಸಂಕಲನ "ಮನೋಲ್ಲಾಸಿನಿ"

More About Author