Poem

ಸಾಧನ ಕೇರಿಯ ಹಾಡು

ಹಲ್ಲು ಬಿಡದೆ ನಕ್ಕಾಂವ
ಮನಸ ತುಂಬಿ ಹಾಡಾಂವ
ನಮ್ಮ ಕೇರಿಯ ಸರಳಜ್ಜ
ಸಾಧನಕೇರಿಯ ಹಿರಿಯಜ್ಜ

ಮಾತಿನಲ್ಲಿ ಮಾಯ್ಕಾರ
ಕೇಳುಗರು ಕಳೆದೋಗ್ತಾರ
ಸುರುಳಿ ಸುತ್ತಿದ ಸರಪಳಿ
ಮಾತು ಮಾತಲ್ಲೂ ಕಚಗುಳಿ

ಬಿದಿರಿನ ಹಾಗೆ ಒಣಕಲು ದೇಹ
ಬಾಯಿ ಬಿಟ್ಟರೆ ಪದಗಳ ಮೋಹ
ತಾಳಗಳಿಲ್ಲದೆ ಲಾಲಿ ಹಾಡ್ತಾನ
ತಲಿ ಕೆಟ್ಟರ ಬೈದು ನೋಡ್ತಾನ
ಬೈಯ್ಯೋದ್ರಾಗೂ ಭಾವ ತುಂಬ್ತಾನ

ನಿಲುವಂಗಿಗೊಂದು ಬಿಳಿ ಪಂಚೆ
ಹೆಗಲಿನ್ಯಾಗ ಪದ್ಯದ ಜೋಳಿಗೆ
ಕೈಯಲ್ಲಿ ಕೊಡೆ ಹಿಡಿದಾನ
ಕಣ್ಣಿಗೆ ದಾರ ಕಟ್ಟಿದ ಕನ್ನಡಕ
ಬೋಳು ತಲೆಯ ಮುದುಕ ಅಂವಾ!
ಎಲ್ಲರ ಮನಸ ಗೆದ್ದು ಬಂದಾವ

ಧಾರವಾಡದಿಂದ ದಿಲ್ಲಿವರೆಗೂ
ಗಂಟಲು ತೆರೆದು ಕೂಗಾಂವ
ಕಟ್ಟಿದ ಕರುಳು ಬಿಚ್ಚುವ ಹಾಗೆ
ಹಾಡಿ ಮೋಡಿ ಮಾಡಾಂವ

ಈ ದೇಹ ಈಗ ಎಲ್ಲೈತ್ತೋ ಅಣ್ಣಾ?
ಮನಮನದಾಗ ಕುಳಿತು
ಹೊಸ ರಾಗದಾಗ ಬೆರೆತು
ಕಾಲಕಾಲಕ್ಕ ಹಾಡ್ತೈತೋ ಅಣ್ಣಾ..
ಎಲ್ಲ ಕಾಲಕ್ಕ ಸಲ್ತೈತೋ ಬಣ್ಣಾ..
ಹಾಡಿನ ಋಣ ಜನ್ಮಜನ್ಮಕ್ಕೂ ತೀರದಣ್ಣಾ..

ಹುಟ್ಟಿದರೆ ಹುಟ್ಟಲಿ ಮತ್ತೊಬ್ಬ ಬೇಂದ್ರೆ
ಈ ಕನ್ನಡ ನೆಲದಾಗ ಮತ್ತೆ ಹುಟ್ಟಲಿ
ನಾಕುತಂತಿ ನುಡಿಸುವಂಗ
ಎಲ್ಲರ ಬಾಯಾಗ ಹಾಡಾಗಲಿ
ಕನ್ನಡ ಸಾರಸ್ವತ ಲೋಕದಾಗ
ಅಜ್ಜ ಅಜ್ಜನಾಗೇ ಉಳಿಯಲಿ
ಆ ನಗು ಮಾಸದೆ ಚಿಗುರುತಿರಲಿ

- ಅನಂತ ಕುಣಿಗಲ್

ಅನಂತ ಕುಣಿಗಲ್

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. 

ಪ್ರಕಟಿತ ಕೃತಿಗಳು : ಋಣಭಾರ (ಕಥಾಸಂಕಲನ), ಮೂರನೆಯವಳು (ಕವನಸಂಕಲನ), ರೌದ್ರಾವರಣಂ (ಕಾದಂಬರಿ). 
 

More About Author