Poem

ಸಂಕ್ರಾತಿ

ಎಳ್ಳು ಬೆಲ್ಲ ಎನ್ನುವ ಒಳಿತು
ಆಡುವ ಪ್ರತಿ ಮಾತಿಗೂ :
ಸಂಯಮ ಸಮರಸ ಸಂವಾದ
ಸಂಸ್ಕ್ರತಿ ಉತ್ಕ್ರಮಣ ಉತ್ಕ್ರಾಂತಿ

ಮಾತೆಂಬುದು ಬರಿಯೇ ಮಾತಲ್ಲ:
ಪ್ರಕೃತಿ ಸೊಗಯಿಸಿ ಸಗ್ಗದ ಸುಗ್ಗಿ
ನೆಲದುಂಬಿ ನಳನಳಿಸಿ ಪೈರು
ಪಚ್ಚೆಯ ಹಚ್ಚೆ ಮಣ್ಣ ಮೈಯಿಗೆ!

ನಾಡಿನೊಂದಿಗೆ ನುಡಿಯೂ ಸಡಗರಿಸಿ
ಸಂಭ್ರಮಿಸುವ ಸನ್ನಿವೇಶ - ಹಬ್ಬ -

ಗಬ್ಬ ಕಟ್ಟಿದ ಗೋ ಧೂಳಿಯ
ಅಭ್ಯಂಜನ, ಸ್ವರದ ಜೊತೆಗೇ ವ್ಯಂಜನ
ಮಾನವೀಯತೆ ಮಾತ್ರ ಕಾಣಿಸುವ ಕಣ್ಣ ಅಂಜನ

ಕೆಡುಕ ಕಡೆದು ಒಳಿತ ಮೆದ್ದು
ನಾಳೆಗಳ ನಾಲಿಗೆಗೆ ಬರಿಯೇ ಬೆಲ್ಲ

ಎಲರ ಕಂಪು ಭರವಸೆಯ ತಂಪು
ತೀಡುವ ಎಳ್ನೆಯ ಎಳಸು ಕಾಳು
ನೀಡಿ ಬಳಸು;

ಬಾಂಧವ್ಯದ ಉತ್ತರಾಯಣ
ಮನುಜ ಮತದ ಕಾರ್ಯ ಕಾರಣ -
ಈ ಸಂಕ್ರಮಣ.

-ಆನಂದ್ ಋಗ್ವೇದಿ

ಆನಂದ ಋಗ್ವೇದಿ

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. 

‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ( ಕಥಾ ಸಂಕಲನಗಳು), ‘ಉರ್ವಿ’ (ನಾಟಕ), ‘ನಿನ್ನ ನೆನಪಿಗೊಂದು ನವಿಲುಗರಿ’ ‘ತಥಾಗತನಿಗೊಂದು ಪದ್ಮ ಪತ್ರ’ ( ಕವನ ಸಂಕಲನಗಳು) 

‘ತಳಮಳದ ಹಾದಿ ಪೂರ್ವೋತ್ತರ’ ‘ಕುಣಿದು ಕಾಡುವ ಗಾಳಿ’ ( ವಿಮರ್ಶಾ ಸಂಕಲನಗಳು), ‘ಕಥಾ ಸ್ವರೂಪ’, ‘ಅನುಭವದ ಅಮೃತತ್ವ’ ( ಸಂಶೋಧನೆ) - ಈವರೆಗೆ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಮತ್ತು ಕಡೆಂಗೋಡ್ಲು ಕಾವ್ಯ ಪ್ರಶಸ್ತಿ,  ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಶೋಧನಾ ಫೆಲೋಶಿಪ್ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಜಿಲ್ಲಾ ತರಬೇತಿ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಪನ್ಮೂಲ ವ್ಯಕ್ತಿಯಾಗಿ  ಆಡಳಿತ ಕನ್ನಡ ಮತ್ತು ಸೇವಾ ನಿಯಮಗಳ ಕುರಿತು ನೂರಾರು ತರಬೇತಿ ಉಪನ್ಯಾಸಗಳನ್ನು ನೀಡಿದ್ದಾರೆ. 

More About Author