Poem

ಸಿಕ್ಕಿದ್ದಂತೂ ಖರೆ

ಕನಸ್ಸೆಲ್ಲ ಈಗೀಗ ಬೀಳುವುದೆ ಇಲ್ಲ
ಐವತ್ತರ ಹೊಸ್ತಿಲಲಿ ಬಿದ್ದರೂ
ಅತ್ತಿತ್ತ ಹೋಗದ ಹೆಳವ

ಕುದುರೆಯ ರಾಜಕುಮಾರ ಬಂದಂತೆ
ಸಿಂಡ್ರೇಲಾ ಡ್ರೆಸಿನಲ್ಲಿ ಇದ್ದವಳ ಕೈ ಹಿಡಿದು
ಕುದುರೆ ಏರುವಾಗಲೇ....
ಮೊಣಕಾಲು ಜಗ್ಗಿ ಕಸು ಹಿಡಿದು
ನೋವು ಎಂದನಷ್ಟೇ...
ಎಚ್ಚರ ತಪ್ಪಿ ...ಎದ್ದಾಗ
ಮುಲಾಮು ಹಚ್ಚುತ್ತ ಕುಳಿತ ಮಗಳು
ಏನಮ್ಮ ಮಂಚದಿಂದ ಬಿದ್ದು ನರಳುವುದು ತಪ್ಪಲಿಲ್ಲ ನಿನಗೆ ಎನ್ನುವುದೆ...

ನೀವು ನಂಬುತ್ತಿರೋ ಇಲ್ಲವೊ
ಅವನು ಸಿಕ್ಕಿದ್ದಂತೂ ಖರೆ
ಗಡಬಡಿಸಬೇಡಿ..ಇರಿ
ಒಲೆ ಮೇಲಿಟ್ಟ ಹಾಲು ಇಳಿಸಿಯೆ ಬರುವೆ
ಎರಡು ದೋಣಿ ಮೇಲೆ ಕಾಲಿಟ್ಟರೆ
ಗೊತ್ತಲ್ಲ ನಿಮಗೆ...
ಉಕ್ಕಿದರೆ ಇನ್ನರ್ಧ ಗಂಟೆ
ತಿಕ್ಕಿ ಒರೆಸಿ ಮೊದಲಿನ ಹಾಗೆ
ಗ್ಯಾಸ್ ಸ್ಟೋ ಹೊಳೆಸಿ ಬರುವಲ್ಲಿಗೆ
ಉಕ್ಕಿದ ಸಂತೋಷ ..ಅವನು..
ಎಲ್ಲ ಮಾಯಾಕವನ

ಅಡುಗೆ ಕೋಣೆ ತೆರೆಯುತ್ತದೆ ಮುಸುರಿ
ಪಾತ್ರೆ ಹರಡಿಹೋದ ಬೆಳಕಲ್ಲಿ ನಗುತ್ತದೆ
ಹರಡಿದ ಕೂದಲ ಪೊಂತೆ ಮಾಡಿ
ಮೇಲೊಂದು ಕ್ಲಿಪ್ಪು ಜಡಿದು ಬಿದ್ದ ಕಸ
ಹೊರಗೆಸೆದು ಬಿಡುತ್ತೇನೆ
ಭಾರ ಕಳೆದಂತೆ

ಸುಸ್ತಾದ ಉಸಿರೊಂದು
ಉಸ್ಸಪ್ಪ ಎಂದಾಗ
ಕಾಲು ಚಾಚಿ ಆರಾಮು ಖುರ್ಚಿಯಲಿ
ಅರೆ ಚಣವಷ್ಟೆ ಕಣ್ಣರೆಪ್ಪೆ ಪಟಪಟನೆ
ಬಡಿದು ಮುಚ್ಚಿದಂತೆ
ಬೆಳಕು ಬಣ್ಣವಾಗುತ್ತದೆ
ಆ ಬಣ್ಣ ಈ ಬಣ್ಣ
ಬಣ್ಣದಲ್ಲೊಂದು ಅಕ್ಷರ
ಅಕ್ಷರದಲ್ಲಿ ಅವನು

ಮನೆ ಕಡೆ ಬರುವುದೆ ಕಮ್ಮಿ
ದೂರುವ ರೀತಿಯಲ್ಲಿ ಹೇಳಿದರೆ
ನಾಲ್ಕಾಣೆ ತಲೆ ಕೆಡೆಸಿಕೊಳ್ಳದೆ
ಅಂಗಳದ ಗುಲಾಬಿ ಕಿತ್ತು
ಮುಡಿಗೇರಿಸುತ್ತಾನೆ
ಯಾರಾದರೂ ನೋಡಿಯಾರು
ತಳ್ಳಲು ಹೋಗಿ ಕಣ್ರೆಪ್ಪೆ ಏಳುತ್ತದೆ

ಅಕ್ಷರದಲ್ಲಿದ್ದ ಅವನು ಎದುರಿಗೆ
ಸಾಮಾನು ಚೀಟಿ ಕೊಡೆ
ಅಂಗಡಿಗೆ ಹೋಗಿ ಬರ್ತೆ
ಹೂಂಗುಡುತ್ತ
ಟೆಂಗಿಸಿನ ಖಾಲಿ ಚೀಲ
ಅವನ ಕೈಗಿಡುತ್ತೇನೆ

ಅಕ್ಷತಾ ಕೃಷ್ಣಮೂರ್ತಿ

ವಿಡಿಯೋ

ಅಕ್ಷತಾ ಕೃಷ್ಣಮೂರ್ತಿ

ಅಕ್ಷತಾ ಕೃಷ್ಣಮೂರ್ತಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿಯಲ್ಲಿ 02 ನವೆಂಬರ್1981 ರಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕಿ ವೃತ್ತಿಯ ಜೊತೆಯಲ್ಲಿ ಕನ್ನಡದ ಹಲವಾರು, ದಿನ ಪತ್ರಿಕೆ ,ವಾರಪತ್ರಿಕೆ, ಪಾಕ್ಷಿಕಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ಹವ್ಯಾಸಿ ಬರಹಗಾರರಾಗಿದ್ದಾರೆ. ಹಲವಾರು ಕೃತಿ, ಕವನ ಸಂಕಲನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕ.ಸಾ.ಪದಿಂದ 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಅವರ ಪ್ರಕಟಿತ ಕೃತಿಗಳು ‘ಹನ್ನೆರಡು ದಡೆ ಬೆಲ್ಲ’(ಕವನ ಸಂಕಲನ-2013), ‘ಹಾಲಕ್ಕಿ ಒಕ್ಕಲಿಗರು(ಜನಾಂಗೀಯ ಬರಹ-2013), ‘ಮಧುರ ಚೆನ್ನ(ವ್ಯಕ್ತಿ ಪರಿಚಯ-2014), ‘ಕೋಳ್ಗಂಬ (ಕವನ ಸಂಕಲನ-2016)’

More About Author