About the Author

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. 

ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ಭಕ್ತಿಗೀತೆಗಳ ಸಂಕಲನ- ಇವರು ಗೌರೀಶರ ಮೊದಲ ಕವನ ಸಂಕಲನವಾಗಿದೆ. 

ಪ್ರಮುಖ ಕೃತಿಗಳು: ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ 'ಶಾಂಡಿಲ್ಯ ಪ್ರೇಮಸುಧಾ' ಅವರ ಮೊದಲ ಕವನಸಂಕಲನ, ಗಂಡು ಹೆಣ್ಣು, ಪ್ರೀತಿ (ಕವನ ಸಂಕಲನಗಳು), ಒಲವಿನ ಒಗಟು (ನಾಟಕ), ಕ್ರೌಂಚಧ್ವನಿ (ಗೀತರೂಪಕ ನಾಟಕ), ಕರ್ಣಾಮೃತ, ಆಕಾಶ ನಾಟಕಗಳು (ರೇಡಿಯೋ ನಾಟಕಗಳು), ವಿಶ್ವದ ಆಖ್ಯಾಯಿಕೆಗಳು (ಕಥಾ ಸಂಕಲನ),  ದೇವತಾತ್ಮ (ಪ್ರವಾಸ ಸಾಹಿತ್ಯ), ಪಶ್ಚಿಮದ ಪ್ರತಿಭೆ ಎಂಬ ಎರಡು ಭಾಗಗಳೂ, ಸತ್ಯಾರ್ಥಿ, ಭಾರತೀಯ ವಿಜ್ಞಾನಿಗಳು, ಕೇಶವಸುತ, ನಾನಾಲಾಲ, ಶ್ಯಾಮರಾವ ವಿಠ್ಠಲ ಕಾಯ್ಕಿಣಿ, ಥಾಮಸ್ ಎಡಿಸನ್, ಪಾಂಡೇಶ್ವರ ಗಣಪತಿರಾವ್, ಗ್ರೀಕ್ ದಾರ್ಶನಿಕರು (ವ್ಯಕ್ತಿ ಚಿತ್ರಣ), ಗೋಕರ್ಣದ ಕಥೆ, ಕರ್ನಾಟಕದ ಸಿಂಡ್ರೆಲ್ಲಾ, (ಸಾಂಸ್ಕೃತಿಕ ಪರಿಚಯ), ವೈಚಾರಿಕ ಮನೋವಿಜ್ಞಾನದ ರೂಪರೇಷೆಗಳು, ಮಾರ್ಕ್ಸ್ ವಾದ, ಬಾಳಿನ ಗುಟ್ಟು, ವಿಚಾರವಾದ, ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ, ಸಂಪ್ರದಾಯ ಮತ್ತು ಸಣ್ಣ ಕುಟುಂಬ, ಕಟಾಕ್ಷ ಎಂಬ ವೈಚಾರಿಕ ಲೇಖನಗಳ ಸಂಕಲನ, ನವ ಮಾನವತಾವಾದ, ನಾಸ್ತಿಕ ಮತ್ತು ದೇವರು, ಆರ್ಕೆಸ್ಟ್ರಾ ಮತ್ತು ತಂಬೂರಿ, ಲೋಕಾಯತ ಎಂಬ ಚಾರ್ವಾಕ ದರ್ಶನ (ವಿಚಾರ ಸಾಹಿತ್ಯ), ಭಾರತೀಯ ತತ್ವಜ್ಞಾನದ ಇತಿಹಾಸ, ಪಂಜಾಬಿ ಕತೆಗಳು, ಬಿಳಿಯ ಕೊಕ್ಕರೆ, ಮಣ್ಣಿನ ಮನುಷ್ಯ, ಮಲೆನಾಡಿಗರು, ಬರ್ಲಿನ್ ಬಂದಿತು ಗಂಗೆಯ ತಡಿಗೆ, ವ್ಯಾಸಪರ್ವ (ಅನುವಾದ) ಮುಂತಾದವು. ಪ್ರಜ್ಞಾನೇತ್ರದ ಬೆಳಕಿನಲ್ಲಿ ಶಂ.ಬಾ.ಜೋಶಿ ಕೃತಿಗಳ ಸಮೀಕ್ಷೆಯಾಗಿದೆ. ಕಣವಿ ಕಾವ್ಯದೃಷ್ಟಿ ಚನ್ನವೀರ ಕಣವಿಯವರ ಕಾವ್ಯ ಸಮೀಕ್ಷೆಯಾದರೆ, ಕಂಪಿನ ಕರೆ ಎಂಬುದು ಬೇಂದ್ರೆ ಕಾವ್ಯಸಮೀಕ್ಷೆ. ಇವಲ್ಲದೆ ದಿನಕರ ದೇಸಾಯಿಯವರ ಕಾವ್ಯ, ವಾಲ್ಮೀಕಿ ತೂಕಡಿಸಿದಾಗ ಎಂಬ ವಿಚಾರ ವಿಮರ್ಶೆ, ನವ್ಯದ ನಾಲ್ಕು ನಾಯಕರು, ನವ್ಯ ಕವಿ ಬಿ.ಎ.ಸನದಿಯವರ ಕಾವ್ಯ ಸಮೀಕ್ಷೆ, ಉತ್ತರಣ ವಿಷ್ಣು ನಾಯ್ಕರ ಕಾವ್ಯ ಸಮೀಕ್ಷೆ.ಇಂಗ್ಲಿಷಿನಲ್ಲಿ ಶ್ಯಾಮರಾವ ವಿಠ್ಠಲ ಕಾಯ್ಕಿಣಿ, ಕೊಂಕಣಿಯಲ್ಲಿ ಮೀನಾಕ್ಷಿ ಎಂಬ ಕವನ ಸಂಕಲನ, ಮರಾಠಿಯಲ್ಲಿ ಕನ್ನಡ ಸಾಹಿತ್ಯ ಇತಿಹಾಸ, ಭಗವಾನ್ ನಿತ್ಯಾನಂದ, ಮಾಝೀ ರಸಯಾತ್ರಾ (ಕನ್ನಡ ಮೂಲ: ಮಲ್ಲಿಕಾರ್ಜುನ ಮನಸೂರರ ಆತ್ಮಚರಿತ್ರೆ), ಅಗ್ನಿವರ್ಣ ಮುಂತಾದವು.

ಹಲವು ಹೊಣೆಗಾರಿಕೆಗಳು:  ಗೌರೀಶ ಕಾಯ್ಕಿಣಿ ಅವರ ಸಮಗ್ರ ಗ್ರಂಥಗಳೇ ಎಂಟು ಬೃಹತ್ ಸಂಪುಟಗಳಾಗಿ ಬಂದಿವೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೊಣೆಗಾರಿಕೆಗಳನ್ನೂ ನಿರ್ವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರು ಹಾಗೂ ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು. ಉತ್ತರ ಕನ್ನಡ ಜಿಲ್ಲಾ ಲೇಖಕರು, ಪ್ರಕಾಶಕರು ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು. ಗೌರೀಶ ಕಾಯ್ಕಿಣಿಯವರು ನಾಗರಿಕ ಹಾಗು ಬೆಳಕು ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು

ಪ್ರಶಸ್ತಿ-ಗೌರವಗಳು: ಗೌರೀಶರಿಗೆ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ನವ ಮಾನವತಾವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಮೀನಾಕ್ಷಿ ಕೊಂಕಣಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ ಶಂಬಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ ಗಳು ಲಭಿಸಿವೆ. ಅವರು 2002ರ ನವೆಂಬರ 14 ರಂದು ನಿಧನರಾದರು. 

 

 

 

ಗೌರೀಶ ಕಾಯ್ಕಿಣಿ

(12 Sep 1912-14 Nov 2002)