About the Author

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್.

ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ಮೀಡಿಯಟ್‌ಗಳನ್ನು ಶಿವಮೊಗ್ಗದಲ್ಲಿ ಮುಗಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜ್‌ನಲ್ಲಿ ಬಿ. ಎ. (ಆನರ್ಸ್), ಮೈಸೂರಿನಲ್ಲಿ ಎಂ.ಎ. (ಇಂಗ್ಲಿಷ್) ಅಧ್ಯಯನ ನಡೆಸಿ ಅವರು ಶಿವಮೊಗ್ಗದಲ್ಲಿ ಅಧ್ಯಾಪಕ ವೃತ್ತಿ ಆರಂಭ (1959) ಮಾಡಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಎರಡು ದಶಕಗಳ ಕಾಲ ಅಧ್ಯಾಪಕರಾಗಿದ್ದ ಅವರು ಸ್ವಯಂ ನಿವೃತ್ತಿಯ ನಂತರ ಪತ್ರಿಕೋದ್ಯಮ ಪ್ರವೇಶಿಸಿದರು. 'ಲಂಕೇಶ್ ಪತ್ರಿಕೆ'ಯ ಹರಿತ ಬರಹಗಳ ಮೂಲಕ ಕನ್ನಡ ಜಾಣ-ಜಾಣೆಯರಿಗೆಲ್ಲ ಪರಿಚಿತರಾದರು.

ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದ ಲಂಕೇಶ್ ಅವರಿಗೆ ಸಮಾಜವಾದದತ್ತ ವಿಶೇಷ ಆಸಕ್ತಿ. ಲೋಹಿಯಾರ ಸಮಾಜವಾದ ಪ್ರಭಾವಿತರಾಗಿದ್ದ ಅವರು ರಾಜಕೀಯ ಪ್ರವೇಶಿಸುವ ಬಯಕೆಯಿಂದ 'ಪ್ರಗತಿ ರಂಗ' ಆರಂಭಿಸಿದ್ದರು.

’ಕೆರೆಯ ನೀರನು ಕೆರೆಗೆ ಚೆಲ್ಲಿ', 'ನಾನಲ್ಲ', 'ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ', 'ಕಲ್ಲು ಕರಗುವ ಸಮಯ', ’ಉಲ್ಲಂಘನೆ’, ’ಮಂಜು ಕವಿದ ಸಂಜೆ’ ಪ್ರಕಟಿತ ಕಥಾ ಸಂಕಲನಗಳು, ವಾಮನ' (1958) ಇವರ ಮೊದಲ ಕಥೆ. ವಿಮರ್ಶಕರ ಗಮನ ಸೆಳೆದ ಮತ್ತೊಂದು ಮಹತ್ವದ ಕಥೆ 'ರೊಟ್ಟಿ'.

'ಬಿಚ್ಚು', 'ತಲೆಮಾರು', ಲಂಕೇಶರ ಕವನ ಸಂಕಲನಗಳು, ಗದ್ಯದ ವಿಚಿತ್ರ ಸೊಗಸನ್ನು ಪದ್ಯಗಳಿಗೆ ತೊಡಿಸಿ ಕಾವ್ಯ ಬರೆದ ಲಂಕೇಶ್‌ರ 'ಅವ್ವ-1', 'ಅವ್ವ-2', 'ದೇಶಭಕ್ತ ಸೂಳೆಮಗನ ಗದ್ಯಗೀತೆ' ಅತ್ಯುತ್ತಮ ಕವನಗಳು. ನವ್ಯಕಾವ್ಯದ ಪ್ರಾತಿನಿಧಿಕ ಸಂಕಲನ 'ಅಕ್ಷರ ಹೊಸಕಾವ್ಯ' ಸಂಪಾದಿಸಿ ಪ್ರಕಟಿಸಿದ್ದರು. ಫ್ರೆಂಚ್ ಕವಿ ಬೋದಿಲೇರನ್ ಕವಿತೆ 'ಪಾಪದ ಹೂಗಳು' ಲಂಕೇಶ್ ಅನುವಾದಿಸಿರುವ ಮಹತ್ವದ ಸಂಕಲನ.

'ಟಿ. ಪ್ರಸನ್ನನ ಗೃಹಸ್ಥಾಶ್ರಮ' (1963) ಲಂಕೇಶರ ಪ್ರಥಮ ನಾಟಕ, 'ಏಳು ನಾಟಕ', 'ಸಂಕ್ರಾಂತಿ', 'ಗುಣಮುಖ' ಅವರ ನಾಟಕ ಕೃತಿಗಳು. 'ಈಡಿಪಸ್ ಮತ್ತು ಅಂತಿಗೊನೆ' ಸಫೋಕ್ಷಿಸ್ ಮಹಾಕವಿಯ ಗ್ರೀಕ್ ನಾಟಕದ ಕನ್ನಡ ಅನುವಾದ. ಅವರು ರಂಗ ಪ್ರದರ್ಶನಕ್ಕಾಗಿ 'ಪ್ರತಿಮಾ ನಾಟಕ ರಂಗ' ಎಂಬ ನಾಟಕ ತಂಡ ಕಟ್ಟಿದ್ದರು.

'ಬಿರುಕು', 'ಮುಸ್ಸಂಜೆಯ ಕಥಾ ಪ್ರಸಂಗ', ’ಅಕ್ಕ’ ಅವರ ಕಾದಂಬರಿಗಳು. 'ಪ್ರಸ್ತುತ (ವಿಮರ್ಶೆ) ಹಾಗೂ 'ಕಂಡದ್ದು ಕಂಡಹಾಗೆ' ಲೇಖನಗಳ ಸಂಗ್ರಹ. 'ಲಂಕೇಶ್ ಪತ್ರಿಕೆಯ ಸಂಪಾದಕೀಯ 'ಟೀಕೆ-ಟಿಪ್ಪಣಿ'ಯ ಮೂರು ಸಂಪುಟಗಳು, ಮರೆಯುವ ಮುನ್ನ’ದ ಐದು ಸಂಪುಟ, ’ಬಿಟ್ಟು ಹೋದ ಪುಟಗಳು’ ಮೂರು ಸಂಪುಟ ಪ್ರಕಟವಾಗಿವೆ. 'ಪತ್ರಿಕೆ ಪ್ರಕಾಶನದ ಮೂಲಕ ಕನ್ನಡದ ಮಹತ್ವದ ಕೃತಿಗಳನ್ನು ಲಂಕೇಶ್ ಪ್ರಕಟಿಸಿದ್ದಾರೆ. ಅದಕ್ಕೂ ಮುನ್ನ 'ತರುಣ ಲೇಖಕರ ಪ್ರಕಾಶನ'ದಲ್ಲಿ ಮಿತ್ರರ ಅನೇಕ ಕೃತಿಗಳನ್ನು ಪ್ರಕಟಿಸಿದ್ದರು.

ಚಲನಚಿತ್ರ ರಂಗದಲ್ಲೂ ಲಂಕೇಶರ ಸಾಧನೆ ಗಣನೀಯ. 'ಸಂಸ್ಕಾರ' ಚಿತ್ರದಲ್ಲಿ ನಾರಾಯಣಪ್ಪನ ಪಾತ್ರ ವಹಿಸಿದ್ದ ಅವರು 'ಪಲ್ಲವಿ' ಚಿತ್ರದ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ(1977) ಪಡೆದಿದ್ದರು. 'ಅನುರೂಪ', 'ಎಲ್ಲಿಂದಲೋ ಬಂದವರು', ’ಖಂಡವಿದೆಕೊ ಮಾಂಸವಿದೆಕೊ’ ಅವರು ನಿರ್ದೇಶಿಸಿದ ಚಿತ್ರಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿಯ ಪ್ರಶಸ್ತಿ ಗೌರವಗಳ ಜೊತೆಗೆ 'ಕಲ್ಲು ಕರಗುವ ಸಮಯ' ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ.

ಲಂಕೇಶ್ ಅವರು 2000ರ ಜನವರಿ 25ರಂದು ಅಸು ನೀಗಿದರು.

ಪಿ. ಲಂಕೇಶ್

(08 Mar 1935-25 Jan 2000)

Books by Author

BY THE AUTHOR

ABOUT THE AUTHOR