ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’

Date: 17-04-2022

Location: ಬೆಂಗಳೂರು


‘ಹಸಿವುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಹೇಶ್ವರನಲ್ಲ’ವೆಂದು ಹೇಳಿರುವ ಅಲ್ಲಮಪ್ರಭುಗಳು, ಮಹೇಶ್ವರಸ್ಥಲದಲ್ಲಿ ಸೈದ್ಧಾಂತಿಕ ಬದ್ದತೆ ಬೆಳೆಯಬೇಕೆಂದು ತಿಳಿಸಿದ್ದಾರೆ. ವಿಷಯಂಗಳಿಗೆ ಆಸೆ-ಅಮಿಷಗಳಿಗೆ ಆಸೆ ಮಾಡಬಾರದು, ಹಸಿವು-ತೃಷೆಗಾಗಿ ಬದುಕಬಾರದೆಂದು ಹೇಳಿದ್ದಾರೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣಧರ್ಮ ಅಂಕಣದಲ್ಲಿ ಷಟ್ ಸ್ಥಲಗಳಲ್ಲಿ ಎರಡನೇ ಹಂತವಾದ ಮಾಹೇಶ್ವರಸ್ಥಲದ ಬಗ್ಗೆ ವಿವರಿಸಿದ್ದಾರೆ.

ಷಟ್‍ಸ್ಥಲಗಳಲ್ಲಿ ಮಾಹೇಶ್ವರಸ್ಥಲ ಎರಡನೇ ಹಂತವಾಗಿದೆ. ಭಕ್ತನ ಶ್ರದ್ಧಾಭಕ್ತಿ ಇಲ್ಲಿ ನಿಷ್ಠಾಭಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಬಸವಾದಿ ಶರಣರು ಬರುವುದಕ್ಕಿಂತ ಮೊದಲಿದ್ದ ಮಾಹೇಶ್ವರನ ಪರಿಕಲ್ಪನೆಗೂ, ಬಸವಾದಿಶರಣರು ಕಟ್ಟಿಕೊಂಡ ಮಾಹೇಶ್ವರನ ಪರಿಕಲ್ಪನೆಗೂ ವ್ಯತ್ಯಾಸವಿದೆ. ಸ್ವಾತಿ ಮಳೆಯ ನೀರು ಸಮುದ್ರದಲ್ಲಿರುವ ಚಿಪ್ಪಿನಲ್ಲಿ ಬಿದ್ದಾಗ ಅದು ಮುತ್ತಾಗುತ್ತದೆ, ಅದೇರೀತಿ ಶ್ರದ್ಧಾಭಕ್ತಿ ಗಟ್ಟಿಕೊಂಡು ನಿಷ್ಠಾಭಕ್ತಿಯಾಗಿ ಪರಿವರ್ತನೆಗೊಂಡಾಗ ಭಕ್ತನು, ಮಾಹೇಶ್ವರನಾಗುತ್ತಾನೆ. ಈ ಸ್ಥಲದ ನಿಷ್ಠೆ ಎಂತಹದೆಂದರೆ ಮರಣವೇ ಮಹಾನವಮಿಯೆಂದು ನಂಬುವಂತಹದ್ದಾಗಿದೆ. ಇಲ್ಲಿಯ ಭಕ್ತ ಛಲಗಾರನಾಗಿದ್ದಾನೆ. ಪರಸತಿ-ಪರಧನ-ಪರವಸ್ತು ಬೇಡವೆಂಬ ಛಲವದು, ತೀರ್ಥಯಾತ್ರೆಗಳಿಗೆ ಹೋಗಲಾರೆನೆಂಬ ಛಲವದು, ಅನ್ಯದೈವಗಳನ್ನು ಪೂಜಿಸುವುದಿಲ್ಲವೆಂಬ ಛಲವದು. ಇಂತಹ ಛಲವುಳ್ಳ ಮಾಹೇಶ್ವರನು ಜಾತಿಭೇದಮಾಡದೆ, ತಿಥಿ-ವಾರ-ನಕ್ಷತ್ರಗಳನ್ನು ನಂಬದೆ, ಜ್ಞಾನದ ದಾರಿಯಲಿ ಸಾಗುತ್ತಾನೆ.

‘ಹಸಿವುಳ್ಳವ ಭಕ್ತನಲ್ಲ, ವಿಷಯವುಳ್ಳವ ಮಹೇಶ್ವರನಲ್ಲ’ವೆಂದು ಹೇಳಿರುವ ಅಲ್ಲಮಪ್ರಭುಗಳು, ಮಹೇಶ್ವರಸ್ಥಲದಲ್ಲಿ ಸೈದ್ಧಾಂತಿಕ ಬದ್ದತೆ ಬೆಳೆಯಬೇಕೆಂದು ತಿಳಿಸಿದ್ದಾರೆ. ವಿಷಯಂಗಳಿಗೆ ಆಸೆ-ಅಮಿಷಗಳಿಗೆ ಆಸೆ ಮಾಡಬಾರದು, ಹಸಿವು-ತೃಷೆಗಾಗಿ ಬದುಕಬಾರದೆಂದು ಹೇಳಿದ್ದಾರೆ.

“ಪರವನರಿದ ಸತ್ಪುರುಷರ ಸಂಗದಿಂದ
ಶಿವಯೋಗದ ವಚನಾಮೃತವನು
ಸದ್ಭಕ್ತಿಯುಳ್ಳ ಮಹೇಶ್ವರನು ತನ್ನ ಶ್ರೋತ್ರ ಮುಖದಲ್ಲಿ ಕೇಳಿ
ಮನೋಮುಖದಲ್ಲಿ ಹಾರೈಸಿ, ತೃಪ್ತಿ ಮುಖದಲ್ಲಿ ಸಂತೋಷವನೆಯ್ದ ಬಲ್ಲಡೆ
ಆ ಸುಖವು ಪರಿಣಾಮವನೊಡಗೂಡುವುದು!
-ಅಲ್ಲಮಪ್ರಭು(ಸ.ವ..ಸಂ.2,ವ:1349)

ಆಧ್ಯಾತ್ಮವನ್ನು ತಿಳಿದುಕೊಂಡ ಸತ್ಪರುಷರಿಂದ ಶಿವಯೋಗದ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಹೇಳಿರುವ ಪ್ರಭುಗಳು, ಇಂತಹ ಸದ್ಭಕ್ತಿಯುಳ್ಳ ಮಹೇಶ್ವರನು ಸಾಧಕನಾಗಲು ಸಾಧ್ಯವಿದೆಯೆಂದು ಹೇಳಿದ್ದಾರೆ. ತನುಸೋಂಕಿ ತನುನಷ್ಟವಾಗಿ ಮತ್ತೊಂದ ಮೆಟ್ಟಲೇರಬಲ್ಲಡೆ ಅತನೇ ಮಹೇಶ್ವರನೆಂದು ತಿಳಿಸಿರುವ ಚೆನ್ನಬಸವನ್ಣನವರು ‘ಮಹೇಶ್ವರಂಗೆ ಅಪ್ಪುವೆ ಅಂಗ, ಆ ಅಂಗಕ್ಕೆ ಸುಬುದ್ಧಿಯೆ ಹಸ್ತ’ ವೆಂದು ವಿವರಿಸಿದ್ದಾರೆ.

“ಪರಧನ ಪರಸತಿ ಪರವಾರ್ತೆಯ ತೊರೆಯದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ?
ಲಿಂಗಪೂಜೆಯಲ್ಲಿ ಲೀಯವಾಗಿ ಅಂಗಗುಣ ವಿರೋಧಿಯಾಗದನ್ನಕ್ಕ
ಎಂತು ಮಹೇಶ್ವರನಪ್ಪನಯ್ಯಾ?
ಗುರುಪ್ರಸಾದದಲ್ಲಿ ನಿಹಿತಾವಧಾನಿಯಾಗದ್ದನ್ನಕ್ಕ
ಎಂತು ಮಾಹೇಶ್ವರನಪ್ಪನಯ್ಯಾ?
ಕೂಡಲ ಚೆನ್ನಸಂಗಯ್ಯನಲ್ಲಿ,
ಮಾಹೇಶ್ವರನೆನಿಸಿಕೊಂಬುದು ಸಾಮಾನ್ಯವೆ ಅಯ್ಯಾ?”
-ಚೆನ್ನಬಸವಣ್ಣ(ಸ.ವ.ಸಂ.3,ವ:1384)

ಈ ವಚನದಲ್ಲಿ ಚೆನ್ನಬಸವಣ್ಣನವರು ಮಾಹೇಶ್ವರನಾದವನು ಹೇಗಿರಬೇಕೆಂಬುದನ್ನು ತಿಳಿಸಿದ್ದಾರೆ. ಪರಧನ, ಪರಸತಿಯನ್ನು ನೋಡದವರು, ಪರವಾರ್ತೆಯ ಕೇಳದವರು ಮಾಹೇಶ್ವರರಾಗಲು ಸಾಧ್ಯವಿದೆಯೆಂದು ಹೇಳಿದ್ದಾರೆ.

ಮಹೇಶಂಗೆ ಜ್ಞಾನ-ವೈರಾಗ್ಯಗಳೇ ಲಿಂಗಾರ್ಚನೆಯಾಗಿರುತ್ತವೆಂದು, ಲಿಂಗಪೂಜೆಯ ಹೊಸ ಆಯಾಮ ತಿಳಿಸಿದ ಸಿದ್ಧರಾಮ ಅವರು ಕುಂಡಲಿ ಬಂದು ಕೀಡಿಯನು ಕುಂಡಲಿ ಮಾಡಿದಂತೆ, ಮಹೇಶ ಬಂದು ಭಕ್ತನನ್ನು ಮಾಹೇಶ್ವರನನ್ನಾಗಿ ಮಾಡಿದನೆಂದು ಹೇಳಿದ್ದಾರೆ.

“ಭಕ್ತರಿಪ್ಪರು ಮೂಲೋಕದಲ್ಲಿ
ಮಹೇಶರಿಲ್ಲ ಲೋಕಲೋಕದಲ್ಲಿ
ಮಹೇಶರಿಪ್ಪರು ಎಮ್ಮ ಪ್ರಮಥರಲ್ಲಿ
ಮಹಾಶಾಂತರಿಲ್ಲ ನೋಡಾ, ಕಲಿಕಿಲ್ಮಿಷದಲ್ಲಿ
ಕಪಿಲಸಿದ್ಧ ಮಲ್ಲಿಕಾರ್ಜುನಾ.
-ಸಿದ್ದರಾಮ(ಸ.ವ.ಸಂ.4,ವ:1229)

ಸಿದ್ದರಾಮ ಶಿವಯೋಗಿಗಳು ಈ ವಚನದಲ್ಲಿ ಮಹೇಶನಾಗುವದು ಅಷ್ಟೊಂದು ಸುಲಭವಲ್ಲವೆಂದು ತಿಳಿಸಿ ಮಹಾಶಾಂತರಿಲ್ಲವೇ ಇಲ್ಲವೆಂದು ಹೇಳಿದ್ದಾರೆ. ಅಂದರೆ ಭಕ್ತರಾಗಿದ್ದವರೆಷ್ಟೋ ಜನ ಮಹೇಶನ ಹಂತ ತಲುಪದೆ ಅಲ್ಲಿಯೇ ನಿಂತು ಬಿಡುತ್ತಾರೆ, ಹೀಗಾಗಿ ಷಟ್‍ಸ್ಥಲಗಳ ಒಂದೊಂದು ಹೆಜ್ಜೆಯೂ ಕಠಿಣವಾದುದೆಂದು ಅವರ ಆಭಿಪ್ರಾಯವಾಗಿದೆ.

ಸೊಡ್ಡಳಬಾಚರಸರು ಮಡಿವಾಳಮಾಚಯ್ಯನವರಿಗೆ ನಮೋನಮೋ ಎಂದೆನ್ನುತ್ತ ‘ಆಸೆ ಹಿಂಗಿದ ಮಹೇಶ್ವರನಂತೆ’ ಎಂಬ ನುಡಿಯನ್ನು ಬಳಸುತ್ತಾರೆ. ಅಂದರೆ ಮಹೇಶನಾದವನಿಗೆ ಆಸೆಯೆಂಬುದೇ ಇರಬಾರದೆಂದು ಅರ್ಥವಾಗುತ್ತದೆ. ಹಡಪದಪ್ಪಣ್ಣನವರು ತಮ್ಮ ವಚನದಲ್ಲಿ ಮಹೇಶಸ್ಥಲದ ಮಹತ್ವವನ್ನು ಕುರಿತು ಹೀಗೆ ಹೇಳಿದ್ದಾರೆ.

“ನೋಡುವ ಕಣ್ಣು, ನುಡಿವ ನಾಲಿಗೆಯ ನುಂಗಿತ್ತು
ಕೇಳುವ ಕಿವಿ, ವಾಸಿಸುವ ನಾಸಿಕವ ನುಂಗಿತ್ತು
ಕೊಡುವ ಕೊಂಬುವ ಕೈ, ಅಡಿ ಇಡುವ ಕಾಲ ನುಂಗಿತ್ತು
ಇವನೊಡಬಿಡದೆ ಕೊಂಬ ತನುವ ನುಂಗಿತ್ತು
ತಲೆಯಷ್ಟೆಯುಳಿದು, ಆ ತಲೆಯ ನೆಲವಿಡಿದು
ಘನವ ನಂಬಿದವರ ಭಕ್ತ ಮಹೇಶ್ವರರೆಂಬೆ ಕಾಣಾ
ಬಸವಪ್ರಿಯ ಕೂಡಲ ಚೆನ್ನಬಸವಣ್ಣ”
-ಹಡಪದ ಅಪ್ಪಣ್ಣ(ಸ.ವ.ಸಂ.9,ವ:881)

ಈ ವಚನದಲ್ಲಿ ಹಡಪದಪ್ಪಣ್ಣನವರು ಪಂಚೇಂದ್ರಿಯಗಳ ಮೂಲಕ ಭಕ್ತ-ಮಹೇಶ್ವರರ ಪರಿಕಲ್ಪನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಪಂಚೇಂದ್ರಿಯಗಳಿಗೆ ನಿಲುಕದ ಅನೇಕ ಸತ್ಯಗಳಿವೆಯೆಂದು ತಿಳಿಸಿರುವ ಅವರು ಘನವ ನಂಬಿದವರೇ ಭಕ್ತ-ಮಹೇಶ್ವರರೆಂದು ವಿವರಿಸಿದ್ದಾರೆ.

“ಮಹೇಶ್ವರರ ಸಂಗವಳಿದು ಮಹಾಲಿಂಗವ ಕಂಡೆನಯ್ಯ
ಮಾಹೇಶ್ವರರ ಪ್ರತಿಮ ಪರಮಯೋಗಿಯರ
ಅನುವನರಿಯದೆ ಆನು ಮರದಿರ್ದ ಮರಹು
ವಿವೇಕ ಕಾಯವನಳಿದು ವಿವಿಧಾಚಾರವನರಿದು
ಆನು ಬದುಕಿದೆನಯ್ಯ ಸಂಗಯ್ಯ”
-ನೀಲಮ್ಮ(ಸ.ವ.ಸಂ.5,ವ:1042)

ಮಾಹೇಶ್ವರಸ್ಥಲವು ಅಪ್ರತಿಮವಾದುದೆಂದು ಹೇಳಿರುವ ನೀಲಮ್ಮನವರು, ಅವರ ದಾರಿಯನ್ನು ತಿಳಿದುಕೊಳ್ಳದೆ, ನಾನು ಮರವೆಗೊಳಗಾಗಿದ್ದೆ, ಮಾಹೇಶ್ವರ ಸ್ಥಲದರಿವಾದಾಗ ನಾನು ಬದುಕಿದೆನಯ್ಯ ಎಂದು ತಿಳಿಸಿದ್ದಾರೆ.

ಹೀಗೆ 12ನೇ ಶತಮಾನದ ಅನೇಕ ವಚನಕಾರರು ಮಹೇಶ್ವರಸ್ಥಲದ ಮಹತ್ವನವನ್ನು ತಮ್ಮ ಅನುಭವದ ನೆಲೆಯಲ್ಲಿ ಅಭಿವ್ಯಕ್ತಪಡಿಸಿದ್ದಾರೆ. 15ನೇ ಶತಮಾನದ ಬಸವೋತ್ತರ ಯುಗದ ವಚನಕಾರರೂ ಕೂಡ ಷಟ್‍ಸ್ಥಲಗಳನ್ನು ಕುರಿತು ಹೇಳಿದ್ದಾರೆ. ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು 12ನೇ ಶತಮಾನದ ಶರಣರಾಗಿರುವದರಿಂದ ಇಲ್ಲಿ ಅವರ ವಚನಗಳನ್ನು ಮಾತ್ರ ಅಧ್ಯಯನಕ್ಕಳವಡಿಸಿ ಷಟ್‍ಸ್ಥಲಗಳ ಬಗ್ಗೆ ಚರ್ಚಿಸಲಾಗಿದೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...