Poem

ಅನುಕೂಲಕ್ಕೊಂದು ಸಿದ್ದಾಂತ

ಮನೆಯೇ ಬೇಡವೆಂದಿದ್ದೆ ಮನೆಯನ್ನು ಕಟ್ಟಿದೆ
ಆಲಯವನ್ನು ನಿರ್ಮಿಸಿ ಗರ್ಭಗುಡಿಯಲ್ಲಿ ಇಪ್ಪ ದೇವರಾಗಿದ್ದ;
ಕಟ್ಟಿಕೋ ಬೇಡವೆಂದಲ್ಲ
ಬಯಲೆ ಆಲಯವೆಂದು
ಬದುಕು ಸರಳವಾಗಲೆಂದು ತಪಸ್ಸು ಕೂತು
ವೈಭೋಗವನ್ನು ತ್ಯಾಗ ಮಾಡಬೇಕೆಂದು
ಪಾಡುತ್ತಲೇ ಇದ್ದವನಿಗೆ
ಈಗೇನಾಯಿತು?

ಮನೆಯೇ ಬೇಡವೆಂದವನು ಬಂಗಲೆಯನ್ನು ಕಟ್ಟಿದೆ
ಮನೆಯ ಪೀಠೋಪಕರಣಗಳು
ಮಧ್ಯೆ ನೀನು ವಿರಾಜಮಾನನಾಗಿರುವೆ

ಉಪದೇಶಿಸಿದ ನಿನ್ನ ಮಾತುಗಳೀಗ
ಮನೆಯ ವೈಭೋಗದಲ್ಲಿ ತತ್ತರಿಸಿ ಕೂತಿವೆ

ಛೇ ಬಿಡು! ಒಂದು ಉದಾಹರಣೆಯನ್ನಷ್ಟೇ
ಹೇಳಬೇಕೆಂದಿರುವೆ.

- ಎಂ.ಆರ್. ಭಗವತಿ

ಎಂ.ಆರ್. ಭಗವತಿ

ಲೇಖಕಿ ಎಂ.ಆರ್. ಭಗವತಿ ಅವರು ಮೂಲತಃ ಚಿಕ್ಕಮಗಳೂರುದವರು.  ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ. ಒಂದು ವರ್ಷ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ. ಈಗ ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ ಬಿದ್ದಿದ್ದು, ದಿನಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆಯಲ್ಲಿ ಹಕ್ಕಿಗಳ ಕುರಿತು ಲೇಖನ ಬರೆಯುತ್ತಿದ್ದಾರೆ.

“ಅತ್ತುಬಿಡೇ ಗೆಳತಿ” (ಸುಧಾಶರ್ಮ ಚವತ್ತಿ, ಮತ್ತು ಸಿ.ಎಸ್. ಸವಿತಾ ಅವರೊಂದಿಗೆ- ಜಂಟಿಯಾಗಿ (1991), ಇವರ ಮೊದಲ (1999)ಸಂಕಲನ “ಏಕಾಂತದ ಮಳೆ”ಗೆ “ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ” ಮತ್ತು ಎರಡನೆಯ (2005)ಸಂಕಲನ “ಚಂಚಲ ನಕ್ಷತ್ರಗಳು” “ಹರಿಹರ ಶ್ರೀ” ಪ್ರಶಸ್ತಿಗೆ ಪಾತ್ರವಾಗಿದೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಅಂಕಣ ಬರೆಹ, ಕವಿತೆ, ಕತೆ, ಪುಸ್ತಕ ಪರಿಚಯ, ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ಕೆಲವೊಂದು ಕಥಾಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆಗೆ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. “ಅಂತರ್ಜಲ”-ಚಿ.ಶ್ರೀನಿವಾಸರಾಜು ಅಭಿನಂದನಾ ಗ್ರಂಥದ ಸಂಪಾದಕರಲ್ಲಿ ಒಬ್ಬರಾಗಿದ್ದರು. ಚಿಲ್ಡ್ರನ್ಸ್ ಇಂಡಿಯಾದ ಆರನೆಯ ಅಂತಾರಾಷ್ಟ್ರೀಯ ಮಕ್ಕಳ ಸಿನೆಮಾ ಉತ್ಸವ 2010, ಕೆಟಲಾಗಿನ ಸಂಪಾದಕಿಯಾಗಿದ್ದಾರೆ. ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಕಾವ್ಯ, ಲೇಖನ ಸ್ಪರ್ದೆ, ಗುಡಿಬಂಡೆ ಪೂರ್ಣಿಮಾ ದತ್ತಿನಿದಿ ಬಹುಮಾನ, ಸಂಚಯ, ಸಂಕ್ರಮಣ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.  ಆಕಾಶವಾಣಿಯಲ್ಲಿ ಇವರ ಕವಿತೆ, ಲೇಖನ ಪ್ರಸಾರವಾಗಿವೆ. ಬೆಂಗಳೂರು ಮತ್ತು ಮೈಸೂರಿನಲ್ಲಿ  ಇವರ ಹಲವಾರು ಛಾಯಾಚಿತ್ರಗಳು ಪ್ರದರ್ಶಿತಗೊಂಡಿವೆ.

ಕವಿತ್ವದಿಂದ ಛಾಯಾಗ್ರಹಣದತ್ತ ಇಣುಕಿದ ಭಗವತಿ

More About Author