Article

ಮೇಲುಸ್ತರದ ವೈವಿಧ್ಯಮಯ ಕಥೆಗಳ ’ಗೀರು’

ಮುನ್ನುಡಿ ಬರೆದ ಸೇತುರಾಮ ಸರ್ ಹೇಳಿದಂತೆ ಬದುಕಿನ ಅನುಭವದ ಪ್ರಜ್ಞೆ, ಸಾರ್ವಜನಿಕ ಲೋಕ ಮತ್ತು ಸಾರ್ವತ್ರಿಕ ಸಂಸ್ಕಾರದ ಮೂಸೆಯಲ್ಲಿ ಹದವಾಗಿ ಮೂಡಿಬಂದ ಒಳ್ಳೆಯ ಕಥೆಗಳು ಇಲ್ಲಿವೆ.
ಹದಿನಾಲ್ಕು ಕಥೆಗಳು ಇಲ್ಲಿ ಇರುವುದರಿಂದ ಕೆಲವನ್ನು ಮಾತ್ರ ಉಲ್ಲೇಖ ಮಾಡುತ್ತೇನೆ.

ಸ್ಫೋಟ - ಅರುಂಧತಿ ಮತ್ತು ಗೌತಮರ ನಡುವಿನ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗುತ್ತದೆ. ಅದಕ್ಕೆ ಕಾರಣ ಅರುಂಧತಿ ಅಲ್ಲ. ಆದರೆ ಆಕೆ ಮಗುವನ್ನು ಪಡೆಯುವ ಹಂತವಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಆಗ ಅವಳ ಮನಸ್ಸಿನಲ್ಲಿ ಚಿತ್ರಿತವಾದ ವಿಷಯವನ್ನು ಓದುಗರಿಗೆ ಅದ್ಭುತವಾಗಿ ದಾಟಿಸಲು ದೀಪ್ತಿ ಸಫಲರಾಗಿದ್ದಾರೆ. ' ಪ್ಲೀಸ್ , ಆ ಸೆಮೆನ್ ಬದಲು ನಂಗೆ ಬೇರೆ ಯಾರದ್ದಾದರೂ ಇನ್ ಸರ್ಟ್ ಮಾಡೋಕ್ಕಾಗುತ್ತಾ ?'... ಎಂಬಲ್ಲಿಗೆ ಅವಳ ಆಕ್ರೋಶ ಸ್ಫೋಟಗೊಳ್ಳುತ್ತದೆ.

ಭಾಗೀಚಿಕ್ಕಿ - ಪ್ರತೀ ಊರಲ್ಲಿ ಅಥವಾ ನಮ್ಮ ಬಂಧು- ಬಳಗದಲ್ಲಿ ಇರಬಹುದಾದ ಮಧ್ಯ ವಯಸ್ಸು ದಾಟುತ್ತಿರುವ ಹೆಂಗಸು ಇವಳು. ಒಂದು ನಿಮಿಷ ಖಾಲಿ ಕುಳಿತು ಕೊಳ್ಳುವವಳಲ್ಲ. ಆದರೆ ಬಾಯಿ ಬೊಂಬಾಯಿ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳ ಬಲ್ಲಳು. ಅವಳ ಹನ್ನೆರಡು ವರ್ಷದ ಮಗು ಸತ್ತು ಹೋದ ನೆನೆದು ಯಾರಿಗೂ ಗೊತ್ತಾಗದ ಹಾಗೆ ಅಳುವವಳು. ಗಂಡಸರೆಂದರೆ ಆಕ್ರೋಶವೋ, ಅನುಮಾನವೋ ಅಥವಾ ಅನುಭವವೋ ಎಂದು ನಿರೂಪಕಿಗೆ ಗೊಂದಲ. ಆಕೆಯಾದರೂ ತನಗೆ ಅನುಕೂಲ ಎಂದು ಅವಳನ್ನು ಮನೆಗೆ ತಂದು ಇಟ್ಟು ಕೊಂಡವಳು. ' ನನ್ನ ಮಗಳು ಸತ್ತದ್ದು ಹೆಂಗೆ ಗೊತ್ತಾ ? ಅವರಪ್ಪನಿಂದಲೇ' ‌.. ಎಂದು ಅವಳು ಹೇಳುವಾಗ ನಮ್ಮ ಎದೆ ಝಲ್ ಎನ್ನುತ್ತದೆ. ಅವಳ ನೋವು ನಮ್ಮದಾಗಿ, ಭಾಗೀಚಿಕ್ಕಿ ಪರ ಮನಸ್ಸು ನಿಲ್ಲುತ್ತದೆ ಮತ್ತು ಕತೆ ಗೆಲ್ಲುತ್ತದೆ.

ಕ್ಯಾನ್ವಾಸ್ - ಮೂವರು ನಿವೃತ್ತ ಗೆಳೆಯರು,ಗಾರ್ಡನ್ ಮತ್ತು ಚಿತ್ರಕಾರನ ಜೊತೆ ಆರಂಭವಾದ ಕಥೆ, ಆ ಚಿತ್ರಕಾರ ಮಾಥುರನ ಹೆಂಡತಿಯ ಪಾದದ ಚಿತ್ರ ಬಿಡಿಸಿದಾಗ ಒಂದು ತಿರುವು ಪಡೆಯುತ್ತದೆ. ಮನಸ್ಸಿನಲ್ಲಿ ಮಂಡಿಗೆ ತಿನ್ನುವ ವೃದ್ಧರ ಕಥೆ ಕೂಡ ಹೌದು. ಅಂತ್ಯದಲ್ಲಿ ಒಂದು ಚಮಕ್ ನೀಡುವುದು ದೀಪ್ತಿ ಅವರಿಗೆ ಒಲಿದಿದೆ. ಆದರೆ ಇದೇ ತರಹದ ಕಥೆಯನ್ನು ನಾನು ಓದಿದ್ದು, ಅದು ನೆನಪಾಗುತ್ತಿಲ್ಲ.
ಹಾಗಾಗಿ ಈ ಕಥೆಯಲ್ಲಿ ಚಿತ್ರಕಾರ ಹೇಳುವಂತೆ ' ಯಾರು ಯಾರ ಸ್ವತ್ತಲ್ಲ ' ಎಂಬುದು ಸರಿ.

ಚೌಕಟ್ಟು - ಒಂದು ಸ್ತ್ರೀ ಸಂವೇದನೆಯ ಕಥೆ. ಚೆನ್ನಾಗಿದೆ.
ಮುಚ್ಚಿದ ಬಾಗಿಲು- ಪ್ರಬಂಧದ ಶೈಲಿಯಲ್ಲಿ ಇರುವ ಅನಾಥತೆಯ ಕಥೆ.

ನ್ಯೂಸ್ ಬೀ- ಬೆನ್ನುಡಿಯಲ್ಲಿ ಡಾ. ಸಬಿತಾ ಬನ್ನಾಡಿ ಹೇಳಿರುವಂತೆ ಬದುಕು ತನ್ನೆದುರು ಬಂದಂತೆ ಸ್ವೀಕರಿಸುವ ಮುಗ್ಧತೆಯಾಚೆಗೂ ನ್ಯೂಸ್ ಬೀ ಗೆ ಇರುವ ನೈತಿಕತೆ ಮತ್ತು ಧೃಡತೆಗೆ ಒಂದು ಸೆಳೆತದ ಗುಣವಿದೆ.

ಮೊಹರು, ಶೀರ್ಷಿಕೆ ಕಥೆ ಗೀರು, ನೆರಳಿನಾಚೆ, ಶಿಕ್ಷೆ, ಅಲಮೇಲಮ್ಮ ಮತ್ತು ಇಂಗ್ಲಿಷ್, ಕುದಿ, ರೊಕ್ಕ ದೋಷ ಎಲ್ಲವೂ ಮೇಲುಸ್ತರದ ವೈವಿಧ್ಯಮಯ ಕಥೆಗಳು.

ಈ ಟೆಂಡರ್ ಕಥೆಯಲ್ಲಿ ಕಟು ವಾಸ್ತವ ಸಂಗತಿಯನ್ನು ದೇವರ ಮುಖಾಂತರ ವಿಡಂಬನೆ ಮಾಡಿದ್ದು ದೀಪ್ತಿ ವಿಚಾರದ ವಿಸ್ತಾರವಾದ ಹರಿವಿನ ದ್ಯೋತಕವಾಗಿದೆ. ಹೀಗೆ ಒಂದೇ ಕಥಾಸಂಕಲನದಲ್ಲಿ ಹಲವು ಒಳ್ಳೆಯ ಕಥೆಗಳು ಇವೆ. ಆ ಕಾರಣದಿಂದ ಖಂಡಿತಾ ಕೊಂಡು ಓದಲೇ ಬೇಕಾದ ಪುಸ್ತಕವಿದು.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

https://www.bookbrahma.com/book/geeru

ಅಜಿತ ಹೆಗಡೆ