About the Author

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ಕಾಲೇಜಿನಲ್ಲಿ ಹಿಂದೀ ಅಧ್ಯಾಪಕರಾಗಿ, ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಬಾಲ್ಯದಲ್ಲಿ ನೋಡಿದ ಸಣ್ಣಾಟ, ದೊಡ್ಡಾಟಗಳಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ನಂತರದಲ್ಲಿ ಇಂಗ್ಲಿಷ್, ಹಿಂದೀ, ಸಂಸ್ಕೃತ ಸಾಹಿತ್ಯಗಳ ನಿರಂತರ ಅಧ್ಯಯನ, ಅನುಸಂಧಾನಗಳು ಸಿಪ ಅವರ ಭಾವಲೋಕ, ವೈಚಾರಿಕತೆ ಮತ್ತು ಕವಿ ವ್ಯಕ್ತಿತ್ವಗಳನ್ನು ನಿರ್ಮಿಸಿದವು. ಸಮಕಾಲೀನ ಸಂದರ್ಭದ ಮಹತ್ವದ ಕವಿ, ಅಂಕಣಕಾರ, ಸೃಜನಶೀಲ ಅನುವಾದಕ ಎಂದು ಗುರುತಿಸಲಾಗುವ ಪಟ್ಟಣಶೆಟ್ಟರು ಹಿಂದಿಯಲ್ಲೂ ಕೃತಿಗಳನ್ನು ರಚಿಸಿದ್ದಾರೆ.

ನೀನಾ, ಮತ್ತೆ ಬಂದಿದ್ದಾಳ, ಅಪರಂಪಾರ, ಕುಲಾಯಿ ಇರಲಿ ನನ್ನಲ್ಲಿಯೇ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು. ಆಷಾಢದ ಒಂದು ದಿನ, ಸೂಯ್ಯಾಸ್ತದಿಂದ ಸೂಯ್ಯೋದಯದ ವರೆಗೆ, ಚೋರ ಚರಣದಾಸ, ಮುದ್ರಾರಾಕ್ಷಸ ಮುಖ್ಯ ಅನುವಾದಿತ ನಾಟಕಗಳು. ಆಧುನಿಕ ಕನ್ನಡ ಹಿಂದೀ ಕಾವ್ಯ ರಂಗಾಯಣ, ಪರಿಭಾವನ, ಅನಿಮಿತ್ತ ಮುಂ. ವೈಚಾರಿಕ ಪ್ರಬಂಧ ಸಂಕಲನಗಳು. ಪ್ರಜಾವಾಣಿಯ ಚಹಾದ ಜೋಡಿ ಚೂಡಾದ್ದಾಂಗ ಅಂಕಣದಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಸಮಸ್ತ ಕನ್ನಡಿಗರಿಗೆ ತಲುಪಿಸುವ ಮೂಲಕ ಇವರು ಜನಪ್ರಿಯರು.

ಕನ್ನಡ ಕಾವ್ಯಮಾರ್ಗದಲ್ಲಿ ಪಟ್ಟಣಶೆಟ್ಟರಷ್ಟು ಪ್ರತಿಮೆಗಳನ್ನು ಬಳಸಿದ ಕವಿ ಬಹುಷ: ಇನ್ನೊಬ್ಬರಿಲ್ಲ ಎಂಬ ಮಾತು ಅತಿಶಯವೇನಲ್ಲ, ಸಮುದ್ರದ ಅಲೆಗಳಂತೆ ಒಂದರ ಮೇಲೊಂದು ಬಂದು ಅಪ್ಪಳಿಸುವ ಪ್ರತಿಮೆಗಳು ನಮ್ಮನ್ನು ಸಮ್ಮೋಹಿಸಿ ಸಂಭ್ರಾತಗೊಳಿಸುತ್ತವೆ. ಅದೇ ಸಮಯದಲ್ಲಿ ಲಯದ ತೂಗುಯ್ಯಾಲೆಯ ಮೇಲೆ ಜೀಕುವ ಭಾವಗಳು ಸಂಭ್ರಮಿಸುತ್ತವೆ. ಕಣ್ಣುಗುಡ್ಡೆಗಳ ಹಿಲಾಲಿನ ಬೆಳಕಿನಲ್ಲಿ ಬರೆಯುವ ಈ ಕವಿಯ ಭಾವತೀವ್ರತೆ ಒಂದಿನಿತೂ ಮುಕ್ಕಾಗಿಲ್ಲ. ಬಹಿರಂಗದ ಬದುಕಿಗೆ ಒಳಲೋಕದ ಉದಕವನ್ನು ಸಾರಿಸಿ ಭಾಷೆಯ ಮೃತ್ತಿಕೆಯನ್ನು ಹದವಾಗಿ ಮಿಡಿಯುತ್ತ ಹೊಸ ಕಲಾಕೃತಿಗಳನ್ನು ನಿರ್ಮಿಸುವ ಶೆಟ್ಟರು ಕಾವ್ಯನಿರ್ಮಿತಿಯನ್ನು ಕಾಯಕನಿಷ್ಠೆಯಿಂದ ಸಾಧಿಸುತ್ತ ಬಂದವರು. ಒಳ ಹೊರಗಿನ ಸತ್ಯಗಳನ್ನು ಹುಡುಕುತ್ತ, ಪಡೆದುಕೊಳ್ಳುತ್ತ, ವಿಭ್ರಮಿಸುತ್ತ, ಸಂಭ್ರಮಿಸುತ್ತ, ಕುದಿಯುತ್ತ, ಆರುತ್ತ, ಶೋಕಿಸುತ್ತ, ಸಂತೈಸಿಕೊಳ್ಳುತ್ತ, ಕಾಣದುದಕ್ಕೆ ಹಂಬಲಿಸುತ್ತ ಸಾಗುವ ಈ ಕಾವ್ಯ ತನ್ನ ಭಾವತೀವ್ರತೆಯಿಂದ, ನಾಟಕೀಯ ತಿರುವುಗಳಿಂದ ಸಹೃದಯರನ್ನು ಆವರಿಸಿಕೊಂಡು ಬಿಡುತ್ತದೆ. ಹೀಗಾಗಿಯೇ ಪಟ್ಟಣಶೆಟ್ಟಿ ಕಾವ್ಯ ಮಾರ್ಗ ಕನ್ನಡಕ್ಕೆ ಒಂದು ವಿಭಿನ್ನ ಕಾಣಿಕೆಯಾಗಿದೆ.

1964 ರಿಂದ 11 ವರ್ಷ ಮಿತ್ರರೊಂದಿಗೆ ಸಂಕ್ರಮಣ ಪತ್ರಿಕೆ ಸಂಪಾದಿಸಿದ್ದ ಪಟ್ಟಣಶೆಟ್ಟಿ, ನಂತರ 2002ರಿಂದ 7 ವರ್ಷ ಸಂಕಲನ ಎಂಬ ಸಾಹಿತ್ಯ ಪತ್ರಿಕೆಯನ್ನು ಸಂಪಾದಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೊಶಿಪ್, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಇವರಿಗೆ ಸಂದಿವೆ.

ಸಿದ್ಧಲಿಂಗ ಪಟ್ಟಣಶೆಟ್ಟಿ

(03 Nov 1939)

Awards

Stories/Poems

BY THE AUTHOR

ABOUT THE AUTHOR