ಜೈಪುರವೆಂಬ ಲೋಕಸಂಸ್ಕೃತಿಯ ನಾಡಿನಲ್ಲಿ ನಾಲ್ಕುದಿನ 

Date: 26-10-2023

Location: ಬೆಂಗಳೂರು


''ರಾಜಸ್ತಾನವೆಂದರೆ ಲೋಕಸಂಸ್ಕೃತಿಯ ನಾಡು. ಅಲಂಕಾರಿಕ ವೇಷಭೂಷಣ, ದೇಸೀಯ ನೃತ್ಯ, ಸಂಗೀತ, ಬಹುತಾರಿ ತಂತಿವಾದ್ಯಗಳ ಮಾಧುರ್ಯ. ಹೀಗೆ ಸಾಂಸ್ಕೃತಿಕವಾಗಿ ಇದೊಂದು ತೂಕದಪಾರಮ್ಯ. ಇನ್ನೊಂದು ಪಾರಮ್ಯವೆಂದರೆ "ಪಿಂಕ್ ಸಿಟಿ" ಹೆಸರಿನ ಜೈಪುರ ಅರಮನೆಗಳ ತವರೂರು ಈ ಊರು,'' ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿಬುತ್ತಿ' ಅಂಕಣದಲ್ಲಿ, “ಜೈಪುರವೆಂಬ ಲೋಕಸಂಸ್ಕೃತಿಯ ನಾಡಿನಲ್ಲಿ ನಾಲ್ಕುದಿನ” ಕುರಿತು ಲೇಖನವನ್ನು ಬರೆದಿದ್ದಾರೆ.

ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ನಾಲ್ಕೂ ದಿಕ್ಕಿನ ಭಾರತದ ಪ್ರತಿಭಾಶಾಲಿ‌ ಮತ್ತು ಪ್ರಬುದ್ಧ ಪತ್ರಕರ್ತರು ಅಲ್ಲಿ ಸೇರಿದ್ದರು. ಅದು ರಾಜಸ್ಥಾನದ ರಾಜಧಾನಿ ಜೈಪುರ. ಅಲ್ಲಿನ ''ಜೈಪುರ ಇಂಟರ್ ನ್ಯಾಶನಲ್ ಸೆಂಟರ್'' ಸಮಾವೇಶದ ಸ್ಥಳ. ಹೆಸರಿಗೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಮತ್ತು ಸುವಿಶಾಲವಾದ ನೂತನ ಸಾಂಸ್ಕೃತಿಕ ಭವನ. ಅದು ಅದೆಷ್ಟು ಚೆಂದವಿದೆ ಎಂದರೆ ಅದರ ಕುರಿತೇ ಪ್ರತ್ಯೇಕ ಲೇಖನ ಬರೆಯುವಷ್ಟು ಮತ್ತು ರಾಜಸ್ಥಾನದ ಸಾಂಸ್ಕೃತಿಕ ಪರಂಪರೆ ಮೆರೆಯುವಷ್ಟು. ಅಷ್ಟೇಯಾಕೆ ನಮ್ಮ ಕರ್ನಾಟಕ ಸರಕಾರವು ಅಂತಹದ್ದೊಂದು ಸುಂದರ ಸಾಂಸ್ಕೃತಿಕ ಭವನ ನಿರ್ಮಿಸ ಬೇಕೆನ್ನುವಷ್ಟು. ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ಇದು ನನ್ನ ವಿನಮ್ರ ವಿನಂತಿಯೂ ಹೌದು.

ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ ಸಂವೇದನಾಶೀಲ ಕಥನಗಳನ್ನು ಹುಡುಕಿ, ಆಯ್ಕೆಗೊಂಡ ಪತ್ರಕರ್ತರ ಮಾಧ್ಯಮ ಕಥನಗಳಿಗೆ ಸಲ್ಲುವ "ಜೆಂಡರ್ ಸೆನ್ಸಿಟಿವಿಟಿ ಪ್ರಶಸ್ತಿ" ಪ್ರದಾನ ಸಮಾರಂಭ. ಮುದ್ರಣ ಪತ್ರಿಕೋದ್ಯಮ ಮಾತ್ರವಲ್ಲದೇ ಆಕಾಶವಾಣಿ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣಗಳ ವಿವಿಧ ಬಗೆಯ ಮಾಧ್ಯಮಗಳಿಗೂ ಅಲ್ಲಿ ಅವಕಾಶ. ವಿಶೇಷವೆಂದರೆ ಲಿಂಗಸಂವೇದಿ ಸಂಕಥನಗಳ ಸಂಗತಿಗಳಿಗೆ ಸಲ್ಲುವ ರಾಷ್ಟ್ರಮಟ್ಟದ ಮಾಧ್ಯಮಗೌರವ ಕಾರ್ಯಕ್ರಮ ಅದಾಗಿತ್ತು.

Nothing is permanent except change ಅಂದರೆ ಬದಲಾವಣೆಯೊಂದನ್ನು ಹೊರತು ಪಡಿಪಸಿದರೆ ಯಾವುದೂ ಶಾಶ್ವತವಲ್ಲ. ಇದು ಲಾಡ್ಲಿ ಮೀಡಿಯಾ ಧ್ಯೇಯವಾಕ್ಯ. ಮುಂಬಯಿ ಮೂಲದ 'ಲಾಡ್ಲಿ' ಎಂಬ ಹೆಸರಲ್ಲೇ ಅದೇನೋ ಗುಣಸಂವೇದಿ ಆಮೋದ. ಮುದ್ದುಪ್ರೀತಿಯ ಸುಕೋಮಲ ಮೋದ. ಕೂಸು ಕಂದಮ್ಮನ ಕಳಕಳಿ ಮತ್ತು ಮಮಕಾರಗಳ ಅನುಭೂತಿ. ಅದನ್ನು ಮಹಿಳೆ, ಮಕ್ಕಳು, ಜನಾರೋಗ್ಯ ಮತ್ತು ಜೀವಸಂಕುಲದ ಸಂವೇದನೆಗಳ ಸಹಸ್ಪಂದನ ಎಂತಲೂ ಕರೆಯಬಹುದು.

ರಾಜಸ್ತಾನವೆಂದರೆ ಲೋಕಸಂಸ್ಕೃತಿಯ ನಾಡು. ಅಲಂಕಾರಿಕ ವೇಷಭೂಷಣ, ದೇಸೀಯ ನೃತ್ಯ, ಸಂಗೀತ, ಬಹುತಾರಿ ತಂತಿವಾದ್ಯಗಳ ಮಾಧುರ್ಯ. ಹೀಗೆ ಸಾಂಸ್ಕೃತಿಕವಾಗಿ ಇದೊಂದು ತೂಕದಪಾರಮ್ಯ. ಇನ್ನೊಂದು ಪಾರಮ್ಯವೆಂದರೆ "ಪಿಂಕ್ ಸಿಟಿ" ಹೆಸರಿನ ಜೈಪುರ ಅರಮನೆಗಳ ತವರೂರು ಈ ಊರು. ಲೋಕಪ್ರಸಿದ್ದ ರಾಜಾ ಮಾನಸಿಂಗ್ ಸೇರಿದಂತೆ ಅನೇಕ ಮಹಾರಾಜರುಗಳು ಆಳಿದ ನಾಡು. ಅವರುಗಳು ನಿರ್ಮಿಸಿದ ಅತಿಲೋಕ ಸುಂದರ ಅರಮನೆಗಳು, ಹವಾಯಿ, ಜಲ ಮಹಲುಗಳು, ಮ್ಯುಜಿಯಮ್, ಶಸ್ತ್ರಾಸ್ತ್ರ ಸಂಗ್ರಹಾಲಯಗಳೆಲ್ಲವೂ ಆಧುನಿಕೋತ್ತರ ಆಲೋಚನೆಗಳಿಗೂ ಸವಾಲು. ತಲೆಗೆ ವಸ್ತ್ರ - ಪಗಡಿಗಳಿಲ್ಲದವರನು ಈ ಊರಲ್ಲಿ ಹುಡುಕುವುದೇ ದುಸ್ತರ. ಮಹಿಳೆಯರಾದರೆ ಗಾಗರ್ ಚೋಲಿ ಕಡ್ಡಾಯವೇ ಆಗಿರುವಂತಿರುವ ವಸ್ತ್ರ ಪರಂಪರೆಯ ಮುಂದುವರಿಕೆ.

ಅವತ್ತಿ‌ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಮಾಜಿಕ ಹೋರಾಟದ ದೇಸೀನಾಯಕಿ ಭನ್ವರಿದೇವಿ ತಮ್ಮ ನಿತ್ಯ ಸಂಪ್ರದಾಯದ ಜವಾರಿ ಉಡುಪಿನಲ್ಲೇ ಬಂದಿದ್ದರು. ಅವರ ಆಗಮನ ಇಡೀ ಸಮಾರಂಭದ ಸಾಂಸ್ಕೃತಿಕ ಸರಳತೆ ಮತ್ತು ಸೌಂದರ್ಯವನ್ನು ಹೆಚ್ಚಿಸಿತ್ತು. ವೇದಿಕೆಯ ಮೇಲೆ ಯಾವುದೇ ಶಿಷ್ಟಾಚಾರದ ಕುರ್ಚಿ ಮತ್ತಿತರೆ ಉಪಕರಣ, ಶಾಲು, ಹಾರ, ತುರಾಯಿಗಳೇನೂ ಇರಲಿಲ್ಲ. ಮುಖ್ಯವಾಗಿ ಅಲ್ಲಿ ರಾಜಕಾರಣಿಗಳು ಇರಲಿಲ್ಲ. ಅದು ಸರಳತೆಗೆ ಮತ್ತೊಂದು ನಿದರ್ಶನ. ಪ್ರಶಸ್ತಿ ಪ್ರದಾನ ಮಾಡುತ್ತಿದ್ದ ಹೆಸರಾಂತ ಸೆಲೆಬ್ರಿಟಿ ಮತ್ತು ಲಾಡ್ಲೀ ನ್ಯಾಷನಲ್ ಕೋಆರ್ಡಿನೇಟರ್ ಆಗಿರುವ ಡಾಲಿ ಠಾಕೂರ್ ಭನ್ವರಿದೇವಿಯನ್ನು ಅಪ್ಪಿ ಸಂತಸಪಟ್ಟರು. ಸಾಲದ್ದಕ್ಕೆ ಭನ್ವರಿದೇವಿ ಕುರಿತು ನಾಲ್ಕು ಮೆಚ್ಚುಗೆಯ ಮಾತುಗಳನ್ನು ಸಡಗರದಿಂದ ನುಡಿದರು.

ಪ್ರಜಾವಾಣಿ ಕನ್ನಡ ದೈನಿಕದ ಹಿರಿಯ ಉಪಸಂಪಾದಕಿ ಆಗಿರುವ ಮಗಳು ಮಂಜುಶ್ರೀ ಎಂ. ಕಡಕೋಳ ಈ ಹಿಂದೆಯೇ ಲಾಡ್ಲಿ ಸಮೂಹದಿಂದ ಫಲೋಶಿಪ್ ಗೌರವಕ್ಕೆ ಭಾಜನಳು. ಆಗ ಅವಳಿಗೆ ಅಧ್ಯಯನಕ್ಕೆಂದು ಅರ್ಧಲಕ್ಷದಷ್ಟು ಹಣಕಾಸು ಲಾಡ್ಲೀ ನೀಡಿತ್ತು. ಇದೀಗ ಅವಳು ಪ್ರಜಾವಾಣಿಯಲ್ಲಿ ರೂಮಿ ಹರೀಶ್ ಕುರಿತು ಬರೆದ "ಲಿಂಗದ ಹಂಗು ತೊರೆದು..." ಎಂಬ ಅಗ್ರಲೇಖನಕ್ಕೆ ಲಾಡ್ಲೀ ಮೀಡಿಯಾ ಅವಾರ್ಡ್ ದೊರಕಿದೆ. ಹಾಗೆಯೇ ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಆಂಗ್ಲ ದೈನಿಕದ ವೀಡಿಯೋ ಜರ್ನಲಿಸ್ಟ್ ರಜತ್ ಶರ್ಮಾ ರೂಪಿಸಿದ ಶಿವಮೊಗ್ಗೆಯ ಅಹರ್ನಿಶಿ ಪ್ರಕಾಶನ ಕುರಿತ ಕಥನಕ್ಕು ಲಾಡ್ಲೀ ಮೀಡಿಯಾ ಅವಾರ್ಡ್ ದೊರಕಿದೆ. ರಾಷ್ಟ್ರವ್ಯಾಪಿ ವಿವಿಧ ಭಾಷೆಗಳ ಎಂಬತ್ತೇಳಕ್ಕು ಹೆಚ್ಚುಮಂದಿ ಲಾಡ್ಲೀ ಮೀಡಿಯಾ ಪ್ರಶಸ್ತಿಗೆ ಭಾಜನರು. ಅದರಲ್ಲಿ ಬಹುಪಾಲು ತರುಣಿಯರದೇ ಮೇಲುಗೈ.

ಪ್ರಶಸ್ತಿ ಪ್ರದಾನ ಸಮಾರಂಭದ ಮತ್ತೊಂದು ವಿಶೇಷವೆಂದರೆ ಲೋಕಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಸಾಂಸ್ಕೃತಿಕ ಸಮಾಗಮ. ಸ್ಥಳೀಯ ಸಾಂಸ್ಕೃತಿಕ ಪ್ರತಿಷ್ಠಾನ, ಸಂಘಟನೆಗಳ ಸಹಭಾಗಿತ್ವ. ಬದ್ನವಾ ಎಂಬ ಹಳ್ಳಿಯ ಜನಪದಗಾಯಕ ಮೆಹರ್ದಿನ್ ಲಂಗ್ ಮತ್ತು ಸಿಕಂದರ್ ಸಂಗಡಿಗರು ಪ್ರಸ್ತುತ ಪಡಿಸಿದ '' ಜೀಣೋರೆ ಹಲರಿಯ ಸೋಣಿ..." ಲೋಕಗೀತೆಯ ಗುಂಗಿನಿಂದ ಹೊರಬರಲು‌ ನನಗಂತೂ ಸಾಧ್ಯವಾಗದು. ಢೋಲಕ್, ಖರ್ತಾಲ್, ಸಾರಂಗಿಗಳಂತಹ ಸಂಪ್ರದಾಯದ ವಾದ್ಯಬಳಕೆ ಅದರಲ್ಲೂ ಮೆಹರ್ದಿನ್ ಏಕಕಾಲಕ್ಕೆ ಜೋಡಿ ಕೊಳಲುಗಳನ್ನು ಏಕ ಉಸಿರಿಗೆ ನುಡಿಸುವುದು ಅಸಾಧಾರಣ. ತಂಡದ ಜಾನಪದದ ಹಾಡಿನ ಲಯಕ್ಕೆ ತಕ್ಕಂತೆ ಅಮೋಘ ಅಲಂಕಾರದ ತರುಣಿಯರ ಕಲ್ಬೇಲಿಯ ಶೃಂಗಾರ ನೃತ್ಯವಂತೂ ಬಣ್ಣಿಸಲಸದಳ. ಅಂತೆಯೇ ಮೆಹರ್ದಿನ್ ತಂಡ ರಾಷ್ಟ್ರೀಯ ಖ್ಯಾತಿ ಪಡೆದಿದೆ. ಸೂಫಿ ಸಂತರ ದೋಹೆ, ಅನುಭಾವದ ಪದಗಳ ಮಾಧುರ್ಯಕ್ಕೆ ಮತ್ತೊಂದು ಹೆಸರೇ ಮೆಹರ್ದಿನ್ ತಂಡ.

ಅಂದಹಾಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿದ ಮೇಲೆ ಸುಗ್ರಾಸ ಭೋಜನದ ಆದರಾತಿಥ್ಯ. ಯಾವುದೇ ಸ್ಟಾರ್ ಹೋಟೆಲ್ಲಿಗೂ ಕಮ್ಮಿ ಇಲ್ಲದ ಉತ್ಕೃಷ್ಟ ಮಟ್ಟದ ಭೋಜನಾಲಯ ವ್ಯವಸ್ಥೆ ಅಲ್ಲೇ ಇತ್ತು. ಊಟದ ನಂತರ ಗಾಯಕರ ತಂಡವನ್ನು ಕಂಡು ಮಾತಾಡಿಸಿದೆ. ಸಹಜವಾಗಿ ನಾನು ಆರಾಧಿಸುವ ರಾಜಸ್ತಾನಿ ಮೂಲದ ಸೂಫಿಗಾಯಕಿ ರೇಷ್ಮಾ ಕುರಿತು ಮತ್ತು ಪರ್ವೇಜ್ ಮೇಹ್ದಿ ಹಸನ್ ಕುರಿತು ನಾನು ಪ್ರಸ್ತಾಪಿಸುವುದೇ ತಡ., ಸಿಕಂದರ್ '' ಗೋರಿಯೇ ಜಾಣಾ ಪರ್ದೇಸ್... ಮಾಹೀರೇ..." ಆಲಾಪನೆ ಶುರುಮಾಡಿದ. ಹಾಗೆಯೇ ಒಂದೊಂದಾಗಿ ದಿಲ್ ಖುಷ್ ಚೀಜ್ ಗಳು. ನನಗೆ ಅಗ್ದೀ ಖಾಸ್ ಎನಿಸಿದ ಹಾಡುಗಳನ್ನೇ ಹಾಡ ತೊಡಗಿದ.

ಸೂಫಿ, ಗಝಲ್ ಇವುಗಳನ್ನೇ ಹಾಡುವ ವೈಶಿಷ್ಟ್ಯ ನನಗೆ ಖುಷಿ ಕೊಡುತ್ತಿರುವುದನ್ನು ಪ್ರಾಯಶಃ ಆತ ಮನಗಂಡಿದ್ದನೆಂದು ಕಾಣುತ್ತದೆ. ಅಂತೆಯೇ ರೇಷ್ಮಾ ಸಿರಿಕಂಠದ ವರ್ಲ್ಡ್ ಫೇಮಸ್ ಸಿನೆಮಾ ಹಾಡು 'ಲಂಬಿ ಜುದಾಯಿ...' ಎಂಬ ವಿದಾಯದ ಮಾಂತ್ರಿಕ ಗೀತೆ ಹಾಡತೊಡಗಿದ. ಮತ್ತೊಂದು ಟೇಬಲ್ ಬಳಿ ಕುಂತು ಲಘುವಾಗಿ ಅದನ್ನು ಆಲಿಸುತ್ತಿದ್ದ ಅಳಿಯ ಅನಂತ ಓಡೋಡಿ ಬಂದು ನಮ್ಮ ಟೇಬಲ್ಲಿಗೆ ಸೇರಿಕೊಂಡ. ಹೀಗೆ ನಮ್ಮ ಮೇಜು ಸಂಗೀತದ ಮೇಜವಾನಿ ಉಕ್ಕಿ ಹರಿಸುತ್ತಿರುವಾಗಲೇ ಸಿಕಂದರ್ ಮೊಬೈಲ್ ಸದ್ದುಮಾಡಿತು. ಹಾಡು ನಿಲ್ಲಿಸಿ ಸಿಕಂದರ್ ಅದನ್ನು ಅಟೆಂಡ್ ಮಾಡಿದ.

ಇದಿಷ್ಟು ಸಮಾರಂಭಕ್ಕೆ ಸಂಬಂಧಿಸಿದ ಸಂಕ್ಷೇಪ ಸಂಗತಿ. ಅದನ್ನು ಹೊರತು ಪಡಿಸಿ ಹೇಳುವುದಾದರೆ ಜೈಪುರದ ಅರಮನೆ, ಮಹಲುಗಳನು ಒಳಗೊಂಡ ಬಹುಪಾಲು ಸಾರ್ವಜನಿಕ ಆವರಣಗಳಲ್ಲಿ ಲೋಕಸಂಗೀತ ನೃತ್ಯಗಳಿಂದ ತುಂಬಿ ತುಳುಕುವ ಜನಸಂಸ್ಕೃತಿ ಈ ನಾಡಿನದಾಗಿದೆ. ಬಹುತೇಕ ಹಿಂದಿ ಸಿನೆಮಾಗಳಲ್ಲಿ ಹಳೆಯ ''ಮೊಗಲೇ ಆಝಮ್" ಸೇರಿದಂತೆ ಅದರಲ್ಲೂ ಇತ್ತೀಚಿನ "ಜೋದಾ ಅಕ್ಬರ್" ಸಿನೆಮಾದವರೆಗೂ ಅಲ್ಲಿನ ಅರಮನೆ, ಲೋಕಸಂಸ್ಕೃತಿಯ ಸಂಗೀತ ನೃತ್ಯಗಳ ಸದ್ಬಳಕೆಯಾಗಿದೆ. ಲಂಬೀ ಜುದಾಯಿಯಂತಹ ಹಾಡುಗಳು ಜಗತ್ ಪ್ರಸಿದ್ದಿ ಪಡೆದುದು ಇಲ್ಲಿಯ ಬಿಕಾನೇರ ಜಿಲ್ಲೆಯ ಲೋಹಾ ಎಂಬ ಹಳ್ಳಿಯ ಮೂಲದ ಮಹಾನ್ ಗಾಯಕಿ ರೇಷ್ಮಾ ಹಾಡುಗಾರಿಕೆಯಿಂದಾಗಿ. ಹಾಗೆಯೇ ಲೋಕಪ್ರಸಿದ್ಧ "ನಿಂಬುಡ ನಿಂಬುಡಾ" ಹಾಡು ರಾಜಸ್ತಾನ ಜನಪದರ ಲೋಕಗೀತೆಯೇ ಆಗಿದೆ. ಅದು ಇವತ್ತಿಗೂ ಮಾಂತ್ರಿಕ ಲೋಕಪ್ರಿಯತೆ ಕಳಕೊಂಡಿಲ್ಲ .

ಅವತ್ತು ಮಧ್ಯಾಹ್ನ ರಾವನ್ ಅಥಾ ತಂತಿವಾದ್ಯ ಸಂಗೀತಕ್ಕೆ ಹತ್ತು ವರುಷದ ಬಾಲಕ ಕುಲದೀಪ ತಲೆಗೆ ಕೆಂಪು ಪಗಡಿ ಧರಿಸಿ ಸೊಗಸಾಗಿ ನೃತ್ಯ ಮಾಡುತ್ತಿದ್ದ. ಹಾಗೆ ಕುಲದೀಪ್ ನೃತ್ಯ ಮಾಡಿದ್ದು ಅವನ ಕಾಕಾ ಜಗದೀಪ್ ಸೊಗಸಾಗಿ ನುಡಿಸುತ್ತಿದ್ದ ರಾವನ್ ಅಥಾ ಎಂಬ ತಂತಿವಾದ್ಯ ಸಂಗೀತಕ್ಕೆ. ಬಹುತಂತಿ ನಾದಲೀಲೆಯ ಆ ಘಮಲು ಇನ್ನೂ ನನ್ನ ಮನದಲ್ಲಿ ಗುಂಯಿಗುಡುತ್ತಲಿದೆ. ಅಷ್ಟಕ್ಕೂ ಅದು ಆ ಊರಿನ ಒಂದು ದಿನದ ಸಂಗೀತ ನಾದ ನೃತ್ಯ ನಡವಳಿಕೆ ಆಗಿರಲಿಲ್ಲ. ಬಹಳಷ್ಟು ಕಡೆ ಅವು ನಿತ್ಯವೂ ಏರ್ಪಡುತ್ತವೆ.

ಮುಖ್ಯವಾಗಿ ರಾಯಲ್ ಪ್ಯಾಲೇಸ್ ಹೋಟೆಲ್ ಪ್ರತಿನಿತ್ಯವೂ ಸಹಜವಾಗಿ ಎಂಬಂತೆ ಇಂತಹ ಸಂಗೀತ ನೃತ್ಯ ಏರ್ಪಡಿಸುತ್ತದೆ. ನಾವು ಅಪರಾಹ್ನದ ಊಟದ ವೇಳೆ ಅದೇ ಹೋಟೆಲಿನಲ್ಲಿ ಕುಲದೀಪ್ ಮತ್ತು ಆತನ ಕಾಕಾನ ಜುಗಲ್ ಸಂಗೀತ ನೃತ್ಯ ಸವಿ ಸವಿದದ್ದು. ಒಟ್ಟಿನಲ್ಲಿ ದೂರದ ನಾಡು ಜೈಪುರದ ಸಾಂಸ್ಕೃತಿಕ ವೈಭವಗಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಆದರೆ ಬೆಂಗಳೂರಿನಿಂದ ಎರಡು ತಾಸಿನ ವಿಮಾನ ಪ್ರಯಾಣ ಮಾತ್ರ ತುಂಬಾ ದುಬಾರಿ. ರಾಯಲ್ ಪ್ಯಾಲೇಸ್ ಹೋಟೆಲಿಗೆ ಬಹುಪಾಲು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗಾಗಿ ಜೈಪುರದ ಈ ಹೋಟೆಲ್ ತನ್ನ ನೆಲಮೂಲ ಸಂಸ್ಕೃತಿ ಪರಂಪರೆಯನ್ನು ನಿತ್ಯವೂ ಮೆರೆಯುತ್ತಲಿದೆ. ಹೌದು ಲೋಕಸಂಗೀತ ಮತ್ತು ಲೋಕನೃತ್ಯಗಳು ರಾಜಸ್ತಾನಿಗರ ಬದುಕಿನ ಅವಿಭಾಜ್ಯ ಅಂಗದಂತಾಗಿವೆ. ಲೋಕಸಂಸ್ಕೃತಿ ಮತ್ತು ಪರಾತ್ಪರ ಸೂಫಿಶಕ್ತಿಯ ಕ್ಷಿತಿಜವನ್ನು ಆಧುನಿಕತೆಯೊಂದಿಗೆ ಸಮೀಕರಿಸುವ ಸಾಧ್ಯತೆಗಳನ್ನು ಅವರು ಆಗುಮಾಡಿಕೊಂಡಿರುವುದು ಅಕ್ಷರಶಃ ಅಚ್ಚರಿ ಮತ್ತು ಅನುಕರಣೀಯ.

- ಮಲ್ಲಿಕಾರ್ಜುನ ಕಡಕೋಳ
‌‌‌ 9341010712

ಈ ಅಂಕಣದ ಹಿಂದಿನ ಬರಹಗಳು:
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

 

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...