ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

Date: 10-05-2024

Location: ಬೆಂಗಳೂರು


"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗೌಡ್ರ ಲೈಂಗಿಕ ವಿಡಿಯೋಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಟಾ ಬಯಲಾಗುವ ಮೂಲಕ ಜಗಜ್ಜಾಹೀರು. ನಾಕೈದು ವರುಷಗಳಷ್ಟು ಹಳತಾದರೂ ಪೆನ್ ಡ್ರೈವುಗಳ ಲೈಂಗಿಕ ವ್ಯಗ್ರತೆಯಂತೂ ನಿಮಿರು "ವಯಾಗ್ರ" ನುಂಗಿದಷ್ಟೇ ರೋಚಕ," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣಕ್ಕೆ ಬರೆದ ಲೇಖನವಿದು.

ಕರ್ನಾಟಕದ ಎರಡನೇ ಮತ್ತು ಅಂತಿಮ ಹಂತದ ಲೋಕಸಭಾ ಚುನಾವಣೆಗಳ‌ ಮಹಾಜಾತ್ರೆ ಮುಗಿದಿದೆ. ಮಹಾಮಳೆ ನಿಂತರೂ ಮರದ ಹನಿಗಳು ನಿಲ್ಲಲಿಲ್ಲ ಎಂಬಂತೆ ರಾಜಕೀಯ ಕೋಲಾಹಲದ ತೌಡು ಕುಟ್ಟುವ ಕೊಳಕು ಕೆಲಸಗಳು ಮಾತ್ರ ನಿಲ್ಲುವಂತಹವುಗಳಲ್ಲ. ಹಲವು ಅನಿರೀಕ್ಷಿತ ‌ಮತ್ತು ಅನಪೇಕ್ಷಿತ ಬೆಳವಣಿಗೆಗಳಂತೂ ದಿನಕ್ಕೊಂದು, ಕ್ಷಣಕ್ಕೊಂದು ಎಂಬಂತೆ ಹೊಸ ಹೊಸ ತಿರುವು ಪಡೆಯುತ್ತಿರುವುದಂತೂ ಮುಗಿದೇ ಇಲ್ಲ. ಬಹುಶಃ ಅದು ತಾರ್ಕಿಕ ಅಂತ್ಯ ಕಾಣುವ ಸೂಚನೆಗಳು ಸಧ್ಯಕ್ಕಂತೂ ಕಾಣುತ್ತಿಲ್ಲ.

ಹಾಂಗಂತ ಅದು ಕೇವಲ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳ ಲೈಂಗಿಕ ಹಗರಣದ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಅದಕ್ಕೆ ಪಕ್ಕಾ ಹೊಂದಿಕೆ ಆಗುವ ಇನ್ನೂ ಹಲವು ತರಹೇವಾರಿ ಹಾಗೂ ಸುದ್ದಿಯಾಗದ ದಿಗಿಲು ಹುಟ್ಟಿಸುವ ವಿದ್ಯಮಾನಗಳು. ಅವುಗಳ ಒಳ ಸುತ್ತಾಳದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ವ್ಯಕ್ತಿಗಳು ಅದಕ್ಕೆ ಹೊರತಲ್ಲ ಎಂಬ ಕಠೋರ ಸತ್ಯಗಳು. ಶಿವಮೊಗ್ಗ, ರಾಮನಗರದ ಅಧಿಕಾರಸ್ಥ ರಾಜಕಾರಣಿ ಮಹಾನುಭಾವರ ಸೆಕ್ಸ್ ಸ್ಕ್ಯಾಂಡಲ್ ಪ್ರಸ್ತಾಪಗಳನ್ನು ಕೆಲ ಮಾಧ್ಯಮಗಳು ಅಲ್ಲಲ್ಲಿ ಉಲ್ಲೇಖಿಸಿವೆ.

ಹೀಗಂತಲೇ ಕೆಲವರು ತಮ್ಮ ಅಶ್ಲೀಲತೆಯ ಹಲ್ಕಟ್ ದಂಧೆಗಳನ್ನು ಮಾಧ್ಯಮಗಳು ಪ್ರಚುರ ಪಡಿಸದಂತೆ ಕೋರ್ಟುಗಳಿಂದ ತಡೆಯಾಜ್ಞೆ ತಂದಿರುವುದುಂಟು. ಅಂಥದರಲ್ಲಿ ಕೆಲವಂತೂ ಗಾಬರಿ ಹುಟ್ಟಿಸುವ ದೃಶ್ಯಾವಳಿಗಳು ಇವೆ ಎಂಬಂತೆ ಮಾಧ್ಯಮಗಳು ಸಂದೇಹ ಪ್ರಕಟಿಸಿಯಾಗಿದೆ. ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗೌಡ್ರ ಲೈಂಗಿಕ ವಿಡಿಯೋಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಟಾ ಬಯಲಾಗುವ ಮೂಲಕ ಜಗಜ್ಜಾಹೀರು. ನಾಕೈದು ವರುಷಗಳಷ್ಟು ಹಳತಾದರೂ ಪೆನ್ ಡ್ರೈವುಗಳ ಲೈಂಗಿಕ ವ್ಯಗ್ರತೆಯಂತೂ ನಿಮಿರು "ವಯಾಗ್ರ" ನುಂಗಿದಷ್ಟೇ ರೋಚಕ. ಹುಚ್ಚು ಹರೆಯದ ಖಾದಿಯೊಳಗಿನ ಪ್ರಜ್ವಲ್ಯದ ಕಾಮುಕತೆಯು ಸಾಂಕ್ರಾಮಿಕವಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುವಂತಾಗಿದೆ. ಅಂತೆಯೇ ಪ್ರಧಾನಮಂತ್ರಿ ವಿಶ್ವಗುರು ಮೋದಿಯೇ ಅದಕ್ಕೆ ಪ್ರತಿಕ್ರಿಯೆ ತೋರಿರುವ ಹಂತ ತಲುಪಿದೆ ಎಂದರೆ ಪ್ರಕರಣದ ಪ್ರಖರತೆ ಊಹೆಗೂ ಮೀರಿದ್ದು.

ಯಾವುದೇ ಟಿ.ವಿ. ಛಾನಲ್ ಚಾಲೂ ಮಾಡಿದರೆ ಸಾಕು. ಅಪ್ಪ ಮಗನ ಕಾಮಕೇಳಿಯದ್ದೇ ಕಲರವ. ಬಗೆಬಗೆ ಕಾಮದ ಜ್ವಾಲಾಮುಖಿ ಸುರಿಸುವ ಸುದ್ದಿ ಸಮಾಚಾರಗಳು. ಕೊರೊನಾ ಕಾಲದಲ್ಲಿ ರೆಡ್ ಅಲರ್ಟ್ ಎಂಬ ಶಬುದ ಕೇಳುತ್ತಿದ್ದವರಿಗೆ ಇದೀಗ ತಲೆ ಮರೆಸಿಕೊಂಡ ಆರೋಪಿಯ ಹುಡುಕಾಟಕ್ಕೆ ಲುಕೌಟ್, ಬ್ಲ್ಯೂ ಕಾರ್ನರ್ ಬಣ್ಣ ಬಣ್ಣದ ನೋಟೀಸುಗಳೆಂಬ ಕ್ರೈಮ್ ಕಂ ಸೆಕ್ಸ್ ಸುದ್ದಿ ಪದಗಳ ಪರಿಚಯ. ನೊಂದ ಮಹಿಳೆಯರ ಆಕ್ರಂದನ ಕೇಳಲು ಟೀವಿಗಳೇ ಸದ್ಯದ ಪರಿಹಾರ ಕೇಂದ್ರಗಳಂತೆ ಅವು ವರ್ತಿಸುತ್ತಿರುವುದು ಕೆಟ್ಟ ವಿಪರ್ಯಾಸವೇ ಸರಿ.

ಅಕಟಕಟಾ ಕಣ್ಣಿಗೆ ರಾಚುವ ಹಸಿ ಹಸಿ ಕಾಮಕಾಂಡದ ಹೀನಾಯ ದೃಶ್ಯಗಳನ್ನು ಚಿತ್ರೀಕರಿಸಿದ ಮತ್ತು ಅಂತಹ ಹೀನಕೃತ್ಯಕ್ಕೆ ಬಾಧ್ಯಸ್ಥರಾದವರು ಅಕ್ಷರಶಃ ಅಕ್ಷಮ್ಯ ಅಪರಾಧಿಗಳು. ಅಸಹ್ಯದ ಕಾಮಕೃತ್ಯಗಳು ಮರುಕಳಿಸದಂತೆ ಕಾನೂನು ಮತ್ತು ಕಟ್ಟೆಚ್ಚರದ ಕಾನೂನು ಸುವ್ಯವಸ್ಥೆ ಅದ್ಯಾವಾಗ ಅನುಷ್ಠಾನಕ್ಕೆ ಬಂದು ಚುರುಕಾಗುತ್ತದೋ ನನಗಂತು ತಿಳಿಯದು. ಇಂತಹ ಕೀಳು ಕಾಮಕೃತ್ಯ ಎಸಗುವವರಿಗೆ ಭಯವೇ ಇಲ್ಲದಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಪ್ರಭುತ್ವದ ನೇರ ಭಾಗಿಗಳೇ ವಿಕೃತ ಕಾಮಕೃತ್ಯದ ನೇರ ಭಾಗಿಗಳಾಗಿರುವುದು ಮಹಾದುರಂತ.

ಓರ್ವ ರಾಜಕಾರಣಿ‌ ಮಹಾ ನಾಯಕನಂತೂ ಇಂತಹ ಸೆಕ್ಸ್ ವಿಡಿಯೋಗಳನ್ನು ಸೆರೆ ಹಿಡಿಯುವ ನಿಪುಣರನ್ನೇ ನೇಮಿಸಿಕೊಂಡಿದ್ದಾನಂತೆ. ಅದಕ್ಕಾಗಿ ತಿಂಗಳಿಗೆ ಲಕ್ಷಗಟ್ಟಲೆ ಪಗಾರ ಕೊಡುತ್ತಾನಂತೆ. ಹಾಗಂತ ಓರ್ವ ಹೆಸರಾಂತ ಪತ್ರಕರ್ತ ಕಮ್ ಅಂಕಣಕಾರ ನನ್ನೊಂದಿಗೆ ಇಂತಹ ವಿಷಯಗಳ ಕುರಿತು ಲೋಕಾಭಿರಾಮವಾಗಿ ಮಾತಾಡುತ್ತಾ ವಿವರಿಸಿ ಹೇಳಿದರು. ನಮ್ಮ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣಿಗಳು ತಲುಪಿರುವ ಕೊಳಕಿನ ಪಾರಮ್ಯ ಮತ್ತು ಕ್ರೂರಸ್ಥಿತಿ ಕುರಿತು ನನಗಂತೂ ಹೇಳತೀರದ ಹೇವರಿಕೆ ಉಂಟಾಯಿತು.

ಮನೆಗೆಲಸದ ಮಹಿಳೆಯರು ಸೇರಿದಂತೆ ಕಿರುತೆರೆಯ ರಿಯಾಲಿಟಿ ಶೋ ನಿರೂಪಕಿಯರು, ಕಿರುತೆರೆ ನಟಿಯರು, ಸರಕಾರಿ ಅಧಿಕಾರಿಣಿ ಮತ್ತು ಜನಪ್ರತಿನಿಧಿ ಹೆಸರಿನ ಜಿಲ್ಲಾ ಪಂಚಾಯತ ಸದಸ್ಯೆ ಮತ್ತು ವಿವಿಧ ವಯೋಮಾನದ ಮಹಿಳೆಯರು. ಹೀಗೆ ಸಾಲು ಸಾಲು ಸಂತ್ರಸ್ಥೆಯರು. ಅವರ ವಿಕೃತವಾಂಛೆಗೆ ಸಲ್ಲಿಕೆಯಾಗುವ ರುಚಿರುಚಿಯ ಹೆಣ್ಣುಗಳು. ಗೌಡರ ಕಾಮಪಿಪಾಸೆಗೆ ಈಡಾಗಿರುವ ಸಂಗತಿಗಳನ್ನು ಕೇಳಿಯೇ ಗಾಬರಿಗೊಂಡಿದ್ದೇನೆ. ಯೌವನ, ಅಧಿಕಾರ, ಸಂಪತ್ತುಗಳ ಕಡು ಮದವೇರಿದಾಗ ವಿವೇಕ ಶೂನ್ಯಗೊಂಡರೆ ಆಗಬಹುದಾದ ಎಲ್ಲ ವಿಕೃತ ಅನಾಹುತಗಳು ಘಟಿಸಿರುವಂತಿದೆ. ಪ್ರಾಯಶಃ ಡ್ರಗ್ ಸೇವನೆಗೆ ಅಡಿಕ್ಟ್ ಆದವರಿಂದ ಇಂತಹ ಕೃತ್ಯಗಳು ಸಾಧ್ಯವೆಂದು ಓದಿ ಮತ್ತು ಕೇಳಿ ಪಟ್ಟಿದ್ದೇನೆ. ಅಷ್ಟಾಗಿ ಅದರಲ್ಲಿ ಆಗ ಅಗತ್ಯಾನಗತ್ಯ ಸುಖಪಟ್ಟವರು ಇಲ್ಲದಿಲ್ಲ. ಆದರೆ ಬುಹುತೇಕರ ಇಷ್ಟದ ವಿರುದ್ದದ ಸತ್ಯಸಂಗತಿಗಳೇ ಅಧಿಕವಂತೆ. ಅಂತೆಯೇ ಜನಸಾಮಾನ್ಯರ ಬಾಯಲ್ಲಿ "ಪಾಪದ ಕೊಡ ತುಂಬಿ ತುಳುಕಿದೆ" ಎಂಬುದಾಗಿದೆ. ನಾಡಿನ ತುಂಬೆಲ್ಲ ಪಡುವಲ ಹಿಪ್ಪೆಯ ಕೊಳಕು ಕಾಮದ ಗಬ್ಬುನಾತ ಭುಗಿಲೆದ್ದಿದೆ.

ದುರಂತದ ಸಂಗತಿಯೆಂದರೆ ರೇಪಿಷ್ಟ್ ಕ್ರೂರಿಯನ್ನು ಹಿನ್ನೆಲೆಗೆ ಸರಿಸುವಂತೆ ವಿದ್ಯುನ್ಮಾನ ಮಾಧ್ಯಮಗಳ ವಿಚಿತ್ರ ಚರ್ಚೆಗಳು. ವಿಡಿಯೋ ಬಿಡುಗಡೆ ಮಾಡಿದ್ದು ಯಾರೆಂಬ ಕುರಿತೇ ಮಾಧ್ಯಮಗಳಲ್ಲಿ ಮುನ್ನೆಲೆಯ ಚರ್ಚೆಗಳು ಆಗುತ್ತಿರುವುದು ಬಹುದೊಡ್ಡ ಸಾಮಾಜಿಕ ಮತ್ತು ರಾಜಕೀಯ ದುರಂತವೇ ಆಗಿದೆ. ರಾಜಕೀಯ 'ಶಕ್ತಿಕೇಂದ್ರ' ಬೆಂಗಳೂರು ಕೇಂದ್ರಿತ ರಾಜಕಾರಣದ ಕೆಸರೆರಚಾಟಗಳು ಹೆಚ್ಚು ಮಹತ್ವ ಪಡೆದು ಕೊಳ್ಳುತ್ತಲಿವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಟಿ.ಆರ್.ಪಿ. ದರ ಹೆಚ್ಚಿಸುವ ಅಂತಹ ಚರ್ಚೆಯ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಲಿವೆ. ಕೆಲವು ಮೇಧಾವಿಗಳಂತೂ ತಮ್ಮ ಕಾನೂನು ‌ಮತ್ತು ರಾಜಕೀಯ ವಿಶ್ಲೇಷಣೆಯ ಪಾಂಡಿತ್ಯವನ್ನೇ ಪ್ರದರ್ಶನ ಮಾಡುತ್ತಿರುವುದು ಮಾತ್ರ ಅಕ್ಷಮ್ಯ. ಏಕೆಂದರೆ ಅದೆಷ್ಟೋ ಅಮಾಯಕ ಮಹಿಳೆಯರ ಮಾನ ಹರಾಜು ಆಗುತ್ತಿರುವ ಸಂಗತಿಗಳನ್ನೇ (ಅ)ಪ್ರಜ್ಞಾಪೂರ್ವಕವಾಗಿ ಇವರುಗಳು ತಮ್ಮ ಹಿತಾಸಕ್ತಿಗಳಿಗೆ ಇದನ್ನೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂದೆನಿಸದಿರದು.

ಇಡೀ ಕಾಮಕಾಂಡ ಹಗರಣ ರಾಜಕೀಯ ಆಯಾಮದತ್ತ ಹೊರಳಿ ಬಿಟ್ಟಿದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಗೌಡರ ನಡುವಿನ ರಾಜಕಾರಣ ಸೆಣಸಾಟದ ದಾಳದಂತಾಗಿ ಬಿಟ್ಟಿದೆ. ಮಹಿಳೆಯರ ಮೇಲೆ ಜರುಗಿರುವ ಅತ್ಯಾಚಾರ ಇತರೆ ಲೈಂಗಿಕ ಹಗರಣವು ಆ ಮೂಲಕ ತನ್ನ ಸ್ವರೂಪವನ್ನೇ ಬದಲಿಸಿದಂತಿದೆ. ಹೀಗಿದ್ದಾಗ ನೊಂದ ಮಹಿಳೆಯರಿಗೆ ವಿಶೇಷ ತನಿಖಾ ತಂಡದಿಂದಾಗಲಿ ಇಲ್ಲವೇ ಸಿ. ಬಿ. ಐ. ಗೆ ವಹಿಸಿದರೂ ನ್ಯಾಯ ಸಿಗಬಲ್ಲದೇ ಎಂಬ ಘೋರ ಅನುಮಾನಗಳು ಎಂಥವರನ್ನು ಕಾಡದೇ ಇರಲಾರವು. ಇಂತಹ ಬೆಳವಣಿಗೆಗಳಿಂದ ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯರ ನೋವು ಮತ್ತಷ್ಟು ತಾರಕಕ್ಕೇರಿ ಅವರ ಮನೋಸ್ಥೈರ್ಯ ಕುಗ್ಗಿ ಹೋಗಿರುವ ಸಾಧ್ಯತೆಗಳೇ ಅಧಿಕವಾಗಿದ್ದರೆ ಅಚ್ಚರಿಯೇನಲ್ಲ.

ವಿಟಪೌರುಷದ ಆರೋಪಿ ಚುನಾವಣೆ ಫಲಿತಾಂಶದ ನಂತರವೇ ಪ್ರತ್ಯಕ್ಷ ಆಗ ಬಹುದಂತೆ !. ಹಾಗೊಂದು ವೇಳೆ ಅವನು ಚುನಾವಣೆಯಲ್ಲಿ ಗೆದ್ದು ಬಿಟ್ಟರೇ !? ಪ್ರಕರಣದ ತನಿಖೆಯ ಸ್ವರೂಪ, ಅದರ ಗತಿ ಪ್ರಗತಿ ಇತ್ಯಾದಿ ಬೆಳವಣಿಗೆಗಳ ಕುರಿತು ದಿಗ್ಭ್ರಮೆಗಳು. ಸಂತ್ರಸ್ತ ಮಹಿಳೆಯರು ಮತ್ತು ಸಾರ್ವಜನಿಕರನ್ನು‌ ಘೋರವಾಗಿ ಕಾಡುವ ಮತ್ತು ಉತ್ತರ ಸಿಗದ ಹತ್ತಾರು ಪ್ರಶ್ನೆಗಳು. ಆರೋಪಿ ಒಂದುವೇಳೆ ಹೆಣ್ಣು ಅಥವಾ ಮುಸ್ಲಿಂ ಪುರುಷನಾಗಿದ್ದರೇ? ಎಂದು ನಿನ್ನೆಯಷ್ಟೇ ಆತಂಕದ ಷರಾ ಬರೆದು ಕಳಿಸಿದ್ದು ಸನ್ಮಿತ್ರ ಅರುಣ ಜೋಳದ ಕೂಡ್ಲಿಗಿ.

ನೆನಪು ಹಾರುವ ಮೊದಲು

ಇನ್ನೇನು ಚುನಾವಣೆಯ ಮತದಾನಕ್ಕೆ ಎರಡು ದಿನಗಳ ಮೊದಲು ಕತಲ್ರಾತ್ರಿ ಕತೆಗಳು ರಾಜಾರೋಷವಾಗಿ ಎಲ್ಲ ಕಡೆಗೂ ಕೇಳಿ ಬರುತ್ತವೆ. ಸಮಾಧಾನದ ಸಂಗತಿ ಎಂದರೆ ಅಂತಹ ಅನೈತಿಕ ಹಾಗೂ ಕಾನೂನು ಬಾಹಿರ ಕತೆಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಹೊರತಾಗಿರುವುದಿಲ್ಲ. ಹಾಗೆ ನೋಡಿದರೆ ವಿಧಾನಸಭೆ ಚುನಾವಣೆಗಳಿಗಿಂತ ಲೋಕಸಭಾ ಚುನಾವಣೆಗಳ ಕಾಂಚಾಣದ ಝಣತ್ಕಾರ ಕೊಂಚ ಕಮ್ಮಿಯೇ. ಮುನ್ನೂರರಿಂದ ಮೂರು ಸಾವಿರದವರೆಗೆ ಮತವೊಂದರ ಚೌಕಾಸಿಯ ಕಾಸು. ಇದೇನು ಕದ್ದು ಮುಚ್ಚಿ ನಡೆಯದೇ ಜನ ಖುಲ್ಲಂ ಖುಲ್ಲಾ ಮಾತಾಡಿಕೊಳ್ಳುವಂತಾಗಿದೆ. ಅದು ಪ್ರಭುತ್ವದ ಕಣ್ತಪ್ಪಿಸಿ ಜರುಗುವ ಕ್ರಿಯೆಯಾಗಿ ಉಳಿದಿಲ್ಲ.

ಇದಕ್ಕೆಲ್ಲ ಕಾರಣ ಜನರೇ ಭ್ರಷ್ಟರಾಗಿ ಹೋಗಿದ್ದಾರೆಂಬ ಟೋಕ್ ಆಗಿ ನಿರ್ಣಯಕ್ಕೆ ಬಂದು ಬಿಡುತ್ತೇವೆ. ಆ ಮೂಲಕ ನಾವೆಲ್ಲ ಸಮಾಧಾನ ಪಡುವಂತಾಗಿದೆ. ರಾಜಕಾರಣಿಗಳು ಕೊಡುವ ನೂರು, ಸಾವಿರಗಳಿಗೆ ಮತ ವಿವೇಕವನ್ನೇ ಮಾರಿಕೊಳ್ಳುವ ಮನಸ್ಥಿತಿ. ಅಂತಹ ಸ್ಥಿತಿಯಿಂದ ಹೊರಬರಲು ಪ್ರತಿಯೊಬ್ಬ ಮತದಾರ ಗಟ್ಟಿ ನಿಲುವು ತಾಳುವತನಕ ಇದು ಹೀಗೇ ಮುಂದುವರೆಯಬಲ್ಲದು. ಮತ್ತೆ ಕೆಲವರು ವ್ಯವಹಾರದ ಕಾರ್ಡುಗಳನ್ನೇ ಮಾಡಿ ಅವುಗಳನ್ನು ಹಂಚುವ ಅತ್ಯಾಧುನಿಕ ವಿಧಾನ ಅನುಸರಿಸುತ್ತಿರುವುದು. ಇದಕ್ಕೆಲ್ಲ ಕಡಿವಾಣ ಬಿದ್ದು ಪ್ರಾಮಾಣಿಕ ಮತದಾನ ನಡೆದಾಗ ಮಾತ್ರ ನಿಜವಾದ ಜನತಂತ್ರ ಯಶಸ್ಸು ಕಾಣಬಲ್ಲದು. ಅಂತಹ ದಿನಗಳನ್ನು ಕಾಣಬಲ್ಲೆವೇ.?

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಪ್ರಸಾರಿತ ಪದೋತ್ತಸನ ಮತ್ತು ಅರ್ಧ ಚಂದ್ರಾಸನ

19-05-2024 ಬೆಂಗಳೂರು

"ಪ್ರಸಾರಿತ ಪದೋತ್ತಸನ ಆಸನ ಸದಾ ತಲೆನೋವಿನಿಂದ ಬಳಲುವವರಿಗೂ ಹಾಗೂ ಶೀರ್ಷಾಸನ ಮಾಡಲಾಗದವರು ಈ ಆಸನದ ಅಭ್ಯಾಸದಿಂದ ಶೀ...

ಕನ್ನಡಮುಂ ಸಕ್ಕದಮುಂ 

18-05-2024 ಬೆಂಗಳೂರು

"ಸಂಸ್ಕೃತವು ಪ್ರಾಕ್ರುತಗಳ ಸಂಸ್ಕರಿಸಿದ ರೂಪ, ಪ್ರಾಕ್ರುತವು ಸಂಸ್ಕೃತದ ಬಳಕೆಯ ರೂಪ ಎಂಬ ಎರಡೂ ವಿಚಾರಗಳಿರುವಂತೆ, ...

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...