ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು

Date: 07-06-2024

Location: ಬೆಂಗಳೂರು


"ಗೌರವಾನ್ವಿತ ರಾಷ್ಟ್ರಪತಿ ಪಂಡಿತ ಎಸ್. ಡಿ. ಶರ್ಮಾ ಅವರು ಹಿಂದಿ ಮತ್ತು ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರು. ರಾಷ್ಟ್ರಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ಕ್ಷಣಗಳ ನಂತರ ಪ್ರಶಸ್ತಿ ಪುರಸ್ಕೃತರು ರಾಷ್ಟ್ರಪತಿಗಳೊಂದಿಗೆ ಇಪ್ಪತ್ತು ನಿಮಿಷಗಳ ಕಾಲ ಕಳೆಯುವ ಸಂತಸದ ಸಮಯ. ಅದು ಉಪಹಾರ ಸವಿಯುವ ಸಮಯವೂ ಆಗಿತ್ತು. ಆಗ ಇನ್ನಷ್ಟು ಮಾತುಕತೆಗಳಿಗೆ ಸದವಕಾಶ. ಹೀಗೆ ಅಂದಿನ ಇಡೀ ದಿವಸ ಪಂಡಿತ ಶಿವರಾಜ ಗವಾಯಿಗಳ ಜತೆಗಿರುವ ಅವಕಾಶ ನನ್ನದಾಗಿತ್ತು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣದಲ್ಲಿ `ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು’ ಕುರಿತು ಬರೆದಿದ್ದಾರೆ.

ಅವರ ಹೆಸರನ್ನು ಪ್ರಶಸ್ತಿ ದೊರಕಿಸಿ ಕೊಡುವ ಇಲ್ಲವೇ ಇತರೆ ಯಾವುದೇ ಹೆಸರಿನ ಹುಕಿಗಾಗಿ ಪ್ರಸ್ತಾಪಿಸುತ್ತಿಲ್ಲ. ಈಗ ಅಂತಹ ಕೀರ್ತಿ ಪತಾಕೆಯ ಅಗತ್ಯ ಯಾರಿಗೂ ಇಲ್ಲ. ಯಾಕೆಂದರೆ ಈಗ್ಗೆ ಅಜಮಾಸು ಮೂವತ್ತು ವರ್ಷಗಳ ಹಿಂದೆಯೇ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿದೆ. ಆಗ ಹೊಸದಿಲ್ಲಿಯ 'ಸಿರಿಫೋರ್ಟ್' ಆಡಿಟೋರಿಯಂನಲ್ಲಿ ಅಂದಿನ ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮಾ ಅವರು ರಾಷ್ಟ್ರಪ್ರಶಸ್ತಿ ನೀಡಿ ಅವರನ್ನು ಹೃತ್ಪೂರ್ವಕವಾಗಿ ಗೌರವಿಸಿದರು. ಅವತ್ತು ಸಿರಿಫೋರ್ಟ್ ಸಭಾಂಗಣ ಕಾರ್ಯಕ್ರಮದ ಸಾಂಸ್ಕೃತಿಕ ಸಿರಿಯನ್ನು ಕಣ್ತುಂಬಿಸಿಕೊಂಡ ನೆನಪು ನನಗಿನ್ನೂ ಹಾಗೇ ಹಚ್ಚ ಹಸಿರಾಗಿದೆ.

ಹೃತ್ಪೂರ್ವಕವಾಗಿ ಗೌರವಿಸಿದರು ಅಂತ ಯಾಕೆ ಹೇಳುತ್ತಿದ್ದೇನೆಂದರೆ ರಾಷ್ಟ್ರಪತಿ ಡಾ. ಶರ್ಮಾ ಅವರಿಗೆ ಪ್ರಶಸ್ತಿ ಪುರಸ್ಕೃತ "ಪಂಡಿತ ಶಿವರಾಜ ಗವಾಯಿಗಳು ಸಾಗಿ ಬಂದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗುರುಪರಂಪರೆಯ" ಪರಿಚಯವಿತ್ತು. ಅದನ್ನವರು ಅವತ್ತು ಹೇಳಿಯೂ ಬಿಟ್ಟರು. ಅದೇನೆಂದರೆ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಶಾಸ್ತ್ರೀಯ ಸಂಗೀತದ ಮುಖ್ಯ ಸಮಾರಂಭವೊಂದನ್ನು ಪ್ರೀತಿಯಿಂದ ಉದ್ಘಾಟಿಸಿ, ಪಾಲ್ಗೊಂಡ ನೆನಪುಗಳನ್ನು ವಿವರವಾಗಿಯೇ ಹಂಚಿಕೊಂಡರು.

ಗೌರವಾನ್ವಿತ ರಾಷ್ಟ್ರಪತಿ ಪಂಡಿತ ಎಸ್. ಡಿ. ಶರ್ಮಾ ಅವರು ಹಿಂದಿ ಮತ್ತು ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರು. ರಾಷ್ಟ್ರಪ್ರಶಸ್ತಿ ಪ್ರದಾನ ಸಮಾರಂಭದ ಕೆಲವು ಕ್ಷಣಗಳ ನಂತರ ಪ್ರಶಸ್ತಿ ಪುರಸ್ಕೃತರು ರಾಷ್ಟ್ರಪತಿಗಳೊಂದಿಗೆ ಇಪ್ಪತ್ತು ನಿಮಿಷಗಳ ಕಾಲ ಕಳೆಯುವ ಸಂತಸದ ಸಮಯ. ಅದು ಉಪಹಾರ ಸವಿಯುವ ಸಮಯವೂ ಆಗಿತ್ತು. ಆಗ ಇನ್ನಷ್ಟು ಮಾತುಕತೆಗಳಿಗೆ ಸದವಕಾಶ. ಹೀಗೆ ಅಂದಿನ ಇಡೀ ದಿವಸ ಪಂಡಿತ ಶಿವರಾಜ ಗವಾಯಿಗಳ ಜತೆಗಿರುವ ಅವಕಾಶ ನನ್ನದಾಗಿತ್ತು. ನಿಜಕ್ಕೂ ಅದು ಅತ್ಯಪರೂಪದ ದಿವಸ. ಅದರಲ್ಲೂ ರಾಷ್ಟ್ರಪತಿಗಳ ಜತೆಗಿರುವ ಇಪ್ಪತ್ತು ನಿಮಿಷಗಳ ಕಾಲದ ಅವಧಿ ಮಾತ್ರ ನಮಗೆಲ್ಲ ಅಕ್ಷರಶಃ ಅತ್ಯಮೋಘದ ಕ್ಷಣಗಳು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಗದಗಿನ ಆಶ್ರಮದ ಸಂಗೀತ ಪರಂಪರೆ ಇತ್ಯಾದಿ ಕುರಿತು ಮಾನನೀಯ ಶರ್ಮಾ ಅವರು ಮೆಚ್ಚುಗೆ ತೋರಿದರು. ತಾವು ಗದುಗಿಗೆ ಬಂದಿದ್ದ ನೆನಪುಗಳನ್ನು ದ್ಯಾಸ ಮಾಡಿಕೊಂಡು ಶಿವರಾಜ ಗವಾಯಿಗಳಿಗೆ ಪ್ರಶಸ್ತಿ ದೊರಕಿರುವ ಪ್ರೀತಿ, ವಾತ್ಸಲ್ಯದ ಕ್ಷಣಗಳನ್ನು ಉಮೇದಿನಿಂದ ಕೊಂಡಾಡಿದರು. ಸ್ವರಮಾಂತ್ರಿಕ ಬಿರುದಾಂಕಿತ ಶಿವರಾಜ ಗವಾಯಿಗಳಿಗೆ ರಾಷ್ಟ್ರಪ್ರಶಸ್ತಿ ದೊರಕಿದ ನೆಪದಲ್ಲಿ ವಾರಕಾಲ ನವದೆಹಲಿಯ ಅಶೋಕ ಹೊಟೆಲಿನ ಆದರಾತಿಥ್ಯ ಮನಗಂಡ ಖುಷಿ ಕೊಟ್ಟಿತು. ಗವಾಯಿಗಳ ಪತ್ನಿ ಶಾಂತಕ್ಕ, ಮೂರು ವರ್ಷದ ಅವರ ಪುಟ್ಟ ಮಗಳು ವೇದಾ ಹೀಗೆ ನಮ್ಮ ನಾಲ್ವರಿಗೂ ವಿಶೇಷ ಆತಿಥ್ಯ.
* ‌ * *
ಆರೋಗ್ಯ ಇಲಾಖೆಯ ನೌಕರಿಗೆಂದು 1977 ರ ಫೆಬ್ರವರಿ 22 ರಂದೇ ಡಾವಣಗೇರಿಗೆ ಬಂದು ನೆಲೆಸಿದವನು ನಾನು. 1992, ಅಷ್ಟೊತ್ತಿಗಾಗಲೇ ದಾವಣಗೆರೆ ನೆಲಮೂಲ ಸಂಸ್ಕೃತಿಯ ಸಂಪ್ರೀತಿ, ಮಮಕಾರಗಳನ್ನು ಒಪ್ಪಿಕೊಂಡು ವಾತ್ಸಲ್ಯದ ಹದಿನೈದು ವರುಷಗಳೇ ಗತಿಸಿದ್ದವು. ಹೌದು ಡಾವಣಗೇರಿ ಶಹರದ ವಿನೋಬಾನಗರ ಎಂಬ ಗಲ್ಲಿಯ ಮೊದಲನೇ ಮುಖ್ಯರಸ್ತೆ ಏಳನೇ ತಿರುವಿನಲ್ಲಿ ಪಂಡಿತ ಶಿವರಾಜ ಗವಾಯಿಗಳ "ಸ್ವರಸಾಗರ ಸಂಗೀತ ವಿದ್ಯಾಲಯ" ಇತ್ತು. ಅದು ನನ್ನಲ್ಲಿ ಶಾಸ್ತ್ರೀಯ ಸಂಗೀತದ ಸಮೃದ್ಧ ಸದಭಿರುಚಿ ಹುಟ್ಟಿಸಿ ನಾದಲೋಕದ ಆಲೆಮನೆಯೇ ಆಗಿತ್ತು. ಆರಂಭಕ್ಕೆ ಹರಿಹರದಿಂದಲೇ ನನಗೆ ಶಿವರಾಜ ಗವಾಯಿಗಳ ಒಡನಾಟದ ಪ್ರೀತಿಯೊಲುಮೆಯ ಮಹಾಪೂರ.

ಶಿವರಾಜ ಗವಾಯಿಗಳಿಗೆ ರಾಷ್ಟ್ರಪ್ರಶಸ್ತಿ ದೊರಕಿದ ಬೆನ್ನಲ್ಲೇ 'ತರಂಗ' ಸಾಪ್ತಾಹಿಕಕ್ಕೆ ಆಗಿನ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿ ಅವರ ಮನವಿಯ ಮೇರೆಗೆ ಗವಾಯಿಗಳ ಕುರಿತು ಆರೇಳು ಪುಟಗಳ ಸಚಿತ್ರ ಲೇಖನ ಬರೆದಿದ್ದೆ. ಅದರ ಹಿಂದಿನ ವರುಷ ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಶಿವರಾಜ ಗವಾಯಿಗಳು 27.02.1993 ರಂದು ಆಯೋಜಿಸಿದ್ದ " ಹಿಂದುಸ್ತಾನಿ ಸಂಗೀತ ಸಮಾರೋಹ" ಅದ್ದೂರಿಯಾಗೇ ನೆರವೇರಿತ್ತು. ಪ್ರೊ. ಪಂಚಾಕ್ಷರಿ ಹಿರೇಮಠ, ಪ್ರೊ. ಬಿಂದುಮಾಧವ ಪಾಠಕ, ಸಂತೋಷಕುಮಾರ ಗುಲ್ವಾಡಿ, ಆಗ ಸಂಯುಕ್ತ ಕರ್ನಾಟಕದಲ್ಲಿದ್ದ ಆಪ್ತಮಿತ್ರ ರವಿ ಬೆಳಗೆರೆ, ಅಪರೂಪದ ರುದ್ರವೀಣೆ ಪ್ಲೇಯರ್ (ಕ್ಷಮಿಸಿ ಹೆಸರು ಮರೆತಿದ್ದೇನೆ), ಮುಖ್ಯ ಅತಿಥಿಗಳಾಗಿದ್ದರು. ಉತ್ತರಾದಿ ಶಾಸ್ತ್ರೀಯ ಸಂಗೀತದ ಯುವ ಗಾಯಕಿಯರಾದ ವೀಣಾ ಮರಡೂರ, ಸ್ನೇಹಾ ದೇಶಪಾಂಡೆ, ಆರತಿ ಆನಂದ, ಶಾಂತಾ ಮತ್ತು ವೇಣುಗೋಪಾಲ್, ಹುಮಾಯುನ್ ಹೀಗೆ ಇನ್ನೂ ಮೊದಲಾದ ಗವಾಯಿ ಶಿಷ್ಯವೃಂದ ಸಮಾವೇಶದ ಮುಖ್ಯಾಂಶವೇ ಆಗಿದ್ದರು.
* * ‌‌ *
ಅಂಧಕಾರ ಲೋಕದ ಸೂರ್ಯನಂತೆ ಪಂಚಾಕ್ಷರ ಗವಾಯಿಗಳು ಜನ್ಮಿಸಿ ಇವರೆಲ್ಲರಿಗಾಗಿ ಶ್ರಮಿಸದೇ ಹೋಗಿದ್ದರೆ ಇವತ್ತು ಅದೆಷ್ಟೋ ಅಂಧ ಪ್ರತಿಭೆಗಳು ಭಿಕ್ಷುಕರಾಗಿ ಅಂಧಕಾರ ಲೋಕದಲ್ಲಿ ಬದುಕು ನೂಕ ಬೇಕಿತ್ತು. ಅದಕ್ಕಿಂತಲೂ ಹೆಚ್ಚಾಗಿ ಸಂಗೀತ ಲೋಕ ಅಂತಹ ಅಂಧ ಪ್ರತಿಭೆಗಳಿಂದ ವಂಚಿತವಾಗುತ್ತಿತ್ತು. ಅವತ್ತಿನ ಹೈದರಾಬಾದ್ ಕರ್ನಾಟಕ ಮತ್ತು ಇವತ್ತಿನ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಗಿರಿ ಶಿವರಾಜ ಗವಾಯಿಗಳ ಹುಟ್ಟೂರು. ಗುರುಪಾದಯ್ಯ ಗಂಗಮ್ಮ ಇವರ ಅಪ್ಪ ಅಮ್ಮ. ಹುಟ್ಟಿದ (೦೫.೦೫.೧೯೪೮) ನಾಲ್ಕನೇ ವರುಷದಲ್ಲಿ ಸಿಡುಬು ರೋಗಕ್ಕೆ ಅವರ ಎರಡೂ ಕಣ್ಣುಗಳು ತುತ್ತಾಗುತ್ತವೆ. ಉಂಡುಡಲು ಮನೆಯಲ್ಲಿ ಯಥೇಚ್ಛ ಬಡತನ. ಊರ ಪ್ರಮುಖರು ಜಂಗಮರ ಅಂಧ ಬಾಲಕ ಶಿವಯ್ಯನನ್ನು ಗದಗಿನ ಪುಣ್ಯಾಶ್ರಮಕ್ಕೆ ಸೇರಿಸುತ್ತಾರೆ. ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳು ಗುರುವಾಗಿ, ತಂದೆಯಾಗಿ, ಬಂಧುವಾಗಿ ಸಂಗೀತದ ಸರ್ವಸ್ವವನ್ನೇ ಧಾರೆ ಎರೆಯುತ್ತಾರೆ. ಎರಡು ದಶಕಗಳ ಸುದೀರ್ಘ ಸಂಗೀತ ಸಾಧನೆ, ಬಾಲಕ ಶಿವಯ್ಯನನ್ನು ಪಂಡಿತ ಶಿವರಾಜ ಗವಾಯಿಯನ್ನಾಗಿ ರೂಪಿಸುತ್ತದೆ.

ಹಿಂದುಸ್ತಾನಿ ಸಂಗೀತದ ಗ್ವಾಲಿಯರ್ ಹಾಗೂ ಕಿರಾನಾ ಘರಾಣೆಗಳಲ್ಲಿ ಶಿವರಾಜ ಪ್ರಭುತ್ವ ಸಾಧಿಸಿದರು. ವಿಶೇಷವಾಗಿ ಖ್ಯಾಲ್, ತರಾನಾ, ಠುಮರಿ, ಟಪ್ಪಾ, ಭಜನ್ ಗಳನ್ನು ತಮ್ಮ‌ ಸುಮಧುರ ಕಂಠದಲ್ಲಿ ಹಾಡುವ ಅಗಾಧ ವೈಖರಿಯ ಸಿದ್ಧಿ ಪಡೆದರು. ಅವರ ಸಿರಿಕಂಠದಲ್ಲಿ ಮಧುರ ಪರಿಮಳವಿತ್ತು. ಅವರ ಕಂಠದಿಂದ ಹೊರ ಹೊಮ್ಮುವ ನಾದ ಮಾಧುರ್ಯವು ಹೊಕ್ಕುಳ ಬಳ್ಳಿಯ ನಾಭಿಯಿಂದ ಉಕ್ಕಿ ಹರಿಯುವ ನಾದ ನಿನಾದವೇ ಆಗಿರುತ್ತಿತ್ತು. ವಿಲಂಬಿತ್ ಮತ್ತು ಧ್ರುತ್ ಎರಡರಲ್ಲೂ ತೋರುವ ಸಮಾನ ಸಂವೇದನೆ, ಸೊಗಸು ಅತ್ಯಮೋಘ. ವಿದ್ವತ್ ವಲಯದಲ್ಲಿ ಅವರು ತಮ್ಮ ಇಂತಹ ವೈಶಿಷ್ಟ್ಯಗಳಿಂದಲೇ ಅಪಾರ ಮೆಚ್ಚುಗೆ ಗಳಿಸಿದರು.

ಹಾರ್ಮೋನಿಯಂ ನುಡಿಸುವುದರಲ್ಲಿ ಅವರ ನೈಪುಣ್ಯತೆಯನ್ನು ಡಾ. ಪುಟ್ಟರಾಜ ಗವಾಯಿಗಳೇ ಮೆಚ್ಚಿ ಕೊಂಡಾಡುತ್ತಿದ್ದರು. ಮರೋಳ ಭೀಮಣ್ಣನ ತಬಲಾ ಸಾಥ್, ಹುಟ್ಟುಗುರುಡ ಕಾಮನಹಳ್ಳಿ ಹನುಮಂತಪ್ಪನ ವಯೊಲಿನ್ ಸಾಥ್, ಅವರ ಜೀವನ ಸಂಗಾತಿ ಶಾಂತಾ ನೀಡುವ ತಂಬೂರಿ ಸಾಥಿಯ ಶೃತಿಯೇ ಆಗಬೇಕಿತ್ತು. "ಕಂಗಳು ತುಂಬಿದ ಬಳಿಕ ಕಾಣಲಿಲ್ಲ. ಕಿವಿಗಳು ತುಂಬಿದ ಕೇಳಲಿಲ್ಲ" ವಚನ ಹಾಡುತ್ತಿದ್ದರೇ ಶ್ರೋತೃಗಳ ಮೈಯೆಲ್ಲ ಕಿವಿಯಾಗುತ್ತಿದ್ದವು. "ದೀಪವು ನಿನ್ನದೇ ಗಾಳಿಯೂ ನಿನ್ನದೇ" ಅವರ ಮಾಂತ್ರಿಕ ಸ್ವರದ ಈ ಹಾಡು, ಕಾಡು ಕಟುಕರ ಎದೆ ತೋಯಿಸಿ ಬಿಡುತ್ತಿತ್ತು.

ಅವರು ತಮ್ಮ ಗಾಯನದ ಆರಕ್ಕೂ ಹೆಚ್ಚು ಧ್ವನಿ‌ಮುದ್ರಿಕೆಗಳನ್ನು ಹೊರ ತಂದಿದ್ದಾರೆ. 1971 ರಷ್ಟು ಹಿಂದೆಯೇ ಶಿವಮೊಗ್ಗದಲ್ಲಿ ಗುರು ಪಂಚಾಕ್ಷರ ಶಾಸ್ತ್ರೀಯ ಸಂಗೀತ ವಿದ್ಯಾಲಯ ಸ್ಥಾಪಿಸಿದರು. ಎಸ್. ಬಂಗಾರಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕಾರ ಪಡೆದ ಶಿವಮೊಗ್ಗ ಸುಬ್ಬಣ್ಣ, ಎ. ಎಸ್. ವೇಣುಗೋಪಾಲ್, ಕೆ. ಯುವರಾಜ್, ಇವರೆಲ್ಲರೂ ಶಿವರಾಜ ಗವಾಯಿಗಳ ಶಿಷ್ಯರು. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶಿವರಾಜ ಗವಾಯಿಗಳವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಗುರುದಕ್ಷಿಣೆ ಸಲ್ಲಿಸಿದರು. ಪ್ರಶಸ್ತಿ ಪ್ರದಾನ ಮಾಡಿ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಗುರುಗಳ ಪಾದಮುಟ್ಟಿ ನಮಸ್ಕರಿಸಿದ್ದ ಅಪರೂಪದ ಸನ್ನಿವೇಶವನ್ನು ಇಂಡಿಯನ್ ಎಕ್ಸ್‌ಪ್ರೆಸ್ ಆಂಗ್ಲ ದೈನಿಕ ಸೇರಿದಂತೆ ಅನೇಕ ದೈನಿಕಗಳು ಮುಖಪುಟದಲ್ಲಿ ದೊಡ್ಡ ಫೋಟೋ ಪ್ರಕಟಿಸಿದ್ದವು. ರಾಜ್ಯೋತ್ಸವ ದೊರೆತ ಮರುವರ್ಷವೇ ಅವರಿಗೆ ರಾಷ್ಟ್ರಪ್ರಶಸ್ತಿ ದೊರಕಿತು. ಅವರು ಪ್ರವರ್ಧಮಾನಕ್ಕೆ ಬರುತ್ತಿರುವಾಗಲೇ ಮಿದುಳಿನ ಪಾರ್ಶ್ವವಾಯು ಪೀಡಿತರಾಗಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ತೀರಿಕೊಂಡರು.

ಸ್ವರಮಾಂತ್ರಿಕ ಶಿವರಾಜ ಗವಾಯಿಗಳು ನಿಧನರಾಗಿ (14.03.1996) ಮೂರು ದಶಕಗಳು ಸಮೀಪಿಸಿವೆ. ಮಹಾ ಸ್ವಾಭಿಮಾನಿಯಾಗಿದ್ದ ಶಿವರಾಜ ಗವಾಯಿ ಆಸ್ತಿ ಪಾಸ್ತಿ ಮಾಡಲಿಲ್ಲ. ಅವರ ಪತ್ನಿ ಶಾಂತಕ್ಕ ಏಕಾಂಗಿಯಾಗಿ ಸಂಗೀತದ ರಿಯಾಜ ಮಾಡುತ್ತಾ ವಿನೋಬ ನಗರದಲ್ಲಿ ಕಷ್ಟದ ದಿನಗಳನ್ನು ನೂಕುತ್ತಿದ್ದಾರೆ. ದೂರದ ಬೆಂಗಳೂರು, ದಿಲ್ಲಿಯ ಸಾಂಸ್ಕೃತಿಕ ಜಗತ್ತು ಪಂಡಿತ ಶಿವರಾಜ ಅವರನ್ನು ಗುರುತಿಸಿ ಗೌರವಿಸಿದವು. ಹಾಗೆ ರಾಜ್ಯ ಮತ್ತು ರಾಷ್ಟ್ರ ಗುರುತಿಸಿದ ಸಾಂಸ್ಕೃತಿಕ ವ್ಯಕ್ತಿತ್ವನ್ನು ದಾವಣಗೆರೆ ನಗರ ಮರೆತು ಹೋಯಿತು. ರಾಷ್ಟ್ರಪ್ರಶಸ್ತಿ ಬಂದಾಗ ಅವರಿಗೊಂದು ನಾಗರಿಕ ಸನ್ಮಾನ ಮಾಡಬೇಕಿತ್ತು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಶಿಖರವಾಗಿದ್ದ ಅವರ ಹೆಸರನ್ನು ತೀರಿಹೋದ ನಂತರ ಅವರು ವಾಸವಾಗಿದ್ದ ವಿನೋಬ ನಗರದ ರಸ್ತೆಗೆ ಇಡುವುದನ್ನು ಸಹಿತ ಮರೆತು ಹೋಗಬಾರದು. ಈಗಲೂ ಕಾಲ ಮಿಂಚಿಲ್ಲ, ಸ್ಮಾರ್ಟ್ ಸಿಟಿ ಹೆಸರಿನ ದಾವಣಗೆರೆ ಮಹಾ ನಗರಪಾಲಿಕೆ ಇಂತಹ ಮಹಾನ್ ಗಾಯಕರ ಹೆಸರು ಇಡುವ ಮೂಲಕ ನಿಜಕ್ಕೂ "ಸ್ಮಾರ್ಟ್" ಆಗುವ ಸಾಂಸ್ಕೃತಿಕ ಅಗತ್ಯವಿದೆ.

- ಮಲ್ಲಿಕಾರ್ಜುನ ಕಡಕೋಳ
9341010712

 

ಈ ಅಂಕಣದ ಹಿಂದಿನ ಬರಹಗಳು:
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ

26-07-2024 ಬೆಂಗಳೂರು

"ಸೋಜಿಗವೆಂದರೆ ಬಹುತೇಕ ಅನಕ್ಷರಸ್ಥ ಗ್ರಾಮೀಣ ಕಲಾವಿದರ ಈ ರಂಗಉಮೇದು, ಸಿನೆಮಾ ಮತ್ತು ಕಿರು ತೆರೆಗಳಿಗೆ ಅಡಸ್ಯಾಡುವ...

ತುಳುವಿನೊಡನೆ ಸಹಸಂಬಂದ

20-07-2024 ಬೆಂಗಳೂರು

"ತುಳುವಿನ ಕುರಿತು ಮಾತನಾಡಬೇಕಾದ ಕೆಲವು ಮಹತ್ವದ ಅಂಶಗಳಿವೆ. ದಕ್ಕನದಲ್ಲಿ ವ್ಯಾಪಿಸಿಕೊಂಡಿರುವ ಅರಬಿ ಸಮುದ್ರದ ಕರಾ...

ಮತ್ಸ್ಯಾಸನ ಮತ್ತು ಪರಿವೃತ್ತ ಪಾರ್ಶ್ವಕೋನಾಸನ

19-07-2024 ಬೆಂಗಳೂರು

"`ಮತ್ಸ್ಯಾಸನ' ಮಾಡುವುದರಿಂದ ಬೆನ್ನುಮೂಳೆಯ ಮೇಲ್ಭಾಗದ ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ಬೆನ್ನುಮೂಳೆಯನ...