ಕನ್ನಡದಾಗ ಪ್ರಶ್ನಿಸುವುದು

Date: 06-03-2023

Location: ಬೆಂಗಳೂರು


''ಸಾಮಾನ್ಯವಾಗಿ ಒಂದು ವಾಕ್ಯದಲ್ಲಿ ಬಳಕೆಯಾಗಿರುವ ಯಾವುದಾದರೊಂದು ವಾಸ್ತವವನ್ನು, ವಸ್ತುವನ್ನು ಪ್ರಶ್ನಿಸುವುದು ಸಾದ್ಯ. ಅಂದರೆ, ಅವಳು ನಾಳೆ ಮನೆಗೆ ದುಡಿದು ಎಲ್ಲರಿಗೂ ಅನ್ನ ಕೊಡುತ್ತಾಳೆ ಎಂಬ ಒಂದು ವಾಕ್ಯವನ್ನು ತೆಗೆದುಕೊಳ್ಳೋಣ. ಇದರಲ್ಲಿ ಒಟ್ಟು ಎಂಟು ಬಿಡಿ ಗಟಕಗಳು ಇವೆ. ಈ ಎಂಟು ಗಟಕಗಳಲ್ಲಿ ಪ್ರತಿಯೊಂದು ಗಟಕವನ್ನೂ ಪ್ರಶ್ನಿಸಬಹುದು,'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದಾಗ ಪ್ರಶ್ನಿಸುವುದು’ ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.

ಕನ್ನಡದಾಗ ಪ್ರಶ್ನಿಸುವುದು ಹೇಗೆ? ಸಾಮಾನ್ಯವಾಗಿ ಕನ್ನಡದಾಗ ಏನನ್ನು, ಏನೇನನ್ನು ಪ್ರಶ್ನಿಸಲಾಗುತ್ತದೆ? ಎಂದು ಕೇಳಿದರೆ, ಈ ಕೇಳ್ವಿಗಳು ಮಹತ್ವದವು ಎನಿಸಲಿಕ್ಕಿಲ್ಲ, ಇಲ್ಲವೆ ಕೆಲವರು ಇವು ಪ್ರಶ್ನೆಗಳೆ, ಎಂತಾ ಪ್ರಶ್ನೆಗಳು ಎಂಬ ಗೊಂದಲಕ್ಕೂ ಒಳಗಾಗಬಹುದು.

ಬದುಕಿನಲ್ಲಿ ಪ್ರಶ್ನಿಸುವುದು ಬಹು ಮುಕ್ಯ ಅಲ್ಲವೆ? ಪ್ರಶ್ನಿಸುವುದಕ್ಕೆ ಸಂಬಂದಿಸಿ ಕೇನೋಪನಿಶತ್ ಎಂಬೊಂದು ಉಪನಿಶತ್ ಇದೆಯಂತೆ, ಬುದ್ದ ಪ್ರಶ್ನಿಸದೆ ಏನನ್ನೂ ಒಪ್ಪಿಕೊಳ್ಳಬೇಡ ಎಂದು ಹೇಳಿರುವನಂತೆ, ನಮ್ಮ ಜನಪದ ಪ್ರಶ್ನಿಸುವುದನ್ನು ಉದಕದೊಳಗಿನ ಪಾವಕದಂತೆ ಉಳಿಸಿಕೊಂಡು ಬಂದಿದೆ. ಇದನ್ನ ಕನ್ನಡ ಬಾಶೆಯ ರಚನೆಯ ಬಾಗವಾಗಿ ಸೇರಿಕೊಂಡಿರುವ ಪ್ರಶ್ನಿಸುವ ಪದಗಳನ್ನು ಗಮನಿಸಿದಾಗ ಕಂಡುಕೊಳ್ಳಬಹುದು. ಇವತ್ತಿನ ಬರಹದಲ್ಲಿ ಕನ್ನಡದಲ್ಲಿ ಹೇಗೆ ಪ್ರಶ್ನಿಸಬಹುದು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ.

ಮೂಲದ್ರಾವಿಡದಲ್ಲಿ ಬಹುಶಾ *ಎ/*ಯಾ ಎಂಬ ಒಂದು ರೂಪ ಪ್ರಶ್ನೆಪದವಾಗಿರುವಂತಿದೆ. ಅದಕ್ಕೆ ದ್ರಾವಿಡದ ಬಹುತೇಕ ಬಾಶೆಗಳಲ್ಲಿ ಪ್ರಶ್ನಿಸುವ ಪದಗಳು ಎ ಇಲ್ಲವೆ ಯ ಇಲ್ಲವೆ ಇವುಗಳಿಂದ ಬೆಳೆದ ದ್ವನಿಯಿಂದ ಮೊದಲಾಗುತ್ತವೆ. ಮೂಲ *ಎ/*ಯಾ ಈ ರೂಪವು ವಿಬಿನ್ನವಾಗಿ ಕನ್ನಡದಲ್ಲಿ ಬೆಳೆದು ಬಂದಿವೆ. ಮೊದಲು, ಪ್ರಶ್ನೆಪದಗಳನ್ನು ಪಟ್ಟಿ ಮಾಡೋಣ. ಈ ಪಟ್ಟಿ ನೋಡಿದರೆ, ನಾವು ಕನ್ನಡದಾಗ ಏನು ಪ್ರಶ್ನಿಸುತ್ತೇವೆ, ಹೇಗೆ ಪ್ರಶ್ನಿಸುತ್ತೇವೆ ಎಂಬುದರ ಬಗೆಗೆ ತುಸು ವಿಚಾರ ಗೊತ್ತಾಗುತ್ತೆ ಮತ್ತು ಮುಂದಿನ ನಮ್ಮ ಮಾತುಕತೆ ತುಸು ಹಗುರವಾಗುತ್ತದೆ.

ಏನು, ಏಕೆ/ಯಾಕೆ, ಎಲ್ಲಿ, ಎಂದು, ಎಶ್ಟು, ಎಂತಾ, ಯಾರು, ಯಾಕೆ, ಯಾವಾಗ, ಯಾವನು, ಯಾವಳು, ಯಾವುದು, ಯಾರು, ಯಾವು/ಯಾವುವು, ಹೇಗೆ ಮೊದಲಾದವು.

ಇಲ್ಲಿ ಪ್ರಶ್ನೆಪದಗಳನ್ನು ಬಳಸಿದ
ಎಶ್ಟು ಮಂದಿ ಬಂದಿದ್ದಾರೆ?
ಯಾವಾಗ ಮನೆಗೆ ಬಂದಿದ್ದಾರೆ?

ಸಾಮಾನ್ಯವಾಗಿ ಒಂದು ವಾಕ್ಯದಲ್ಲಿ ಬಳಕೆಯಾಗಿರುವ ಯಾವುದಾದರೊಂದು ವಾಸ್ತವವನ್ನು, ವಸ್ತುವನ್ನು ಪ್ರಶ್ನಿಸುವುದು ಸಾದ್ಯ. ಅಂದರೆ, ಅವಳು ನಾಳೆ ಮನೆಗೆ ದುಡಿದು ಎಲ್ಲರಿಗೂ ಅನ್ನ ಕೊಡುತ್ತಾಳೆ ಎಂಬ ಒಂದು ವಾಕ್ಯವನ್ನು ತೆಗೆದುಕೊಳ್ಳೋಣ. ಇದರಲ್ಲಿ ಒಟ್ಟು ಎಂಟು ಬಿಡಿ ಗಟಕಗಳು ಇವೆ. ಈ ಎಂಟು ಗಟಕಗಳಲ್ಲಿ ಪ್ರತಿಯೊಂದು ಗಟಕವನ್ನೂ ಪ್ರಶ್ನಿಸಬಹುದು. ಕೆಳಗೆ ವಿವಿದ ಗಟಕಗಳನ್ನು ಹೇಗೆ ಪ್ರಶ್ನಿಸಬಹುದು ಎಂಬುದನ್ನು ತೋರಿಸಿದೆ.

ವಾಕ್ಯ
ಅವಳು ನಾಳೆ ಮನೆಗೆ ದುಡಿದು ಎಲ್ಲರಿಗೂ ಹೊಟ್ಟೆತುಂಬ ಅನ್ನ ಕೊಡುತ್ತಾಳೆ

ಪ್ರಶ್ನೆ ಉತ್ತರ
ಯಾರು ನಾಳೆ ಕಚೇರಿಯಲ್ಲಿ ದುಡಿದು ಎಲ್ಲರಿಗೂ ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ಅವನು
ಅವಳು ಯಾವಾಗ ಕಚೇರಿಯಲ್ಲಿ ದುಡಿದು ಎಲ್ಲರಿಗೂ ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ನಾಳೆ
ಅವಳು ನಾಳೆ ಎಲ್ಲಿ ದುಡಿದು ಎಲ್ಲರಿಗೂ ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ಮನೆಗೆ
ಅವಳು ನಾಳೆ ಕಚೇರಿಯಲ್ಲಿ ಹೇಗೆ ಎಲ್ಲರಿಗೂ ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ದುಡಿದು/ ಕಚೇರಿಯಲ್ಲಿ ದುಡಿದು
ಅವಳು ನಾಳೆ ಕಚೇರಿಯಲ್ಲಿ ದುಡಿದು ಯಾರಿಗೆ ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ಎಲ್ಲರಿಗೆ
ಅವಳು ನಾಳೆ ಮನೆಗೆ ದುಡಿದು ಎಲ್ಲರಿಗೂ ಎಶ್ಟು ಅನ್ನ ಕೊಡುತ್ತಾಳೆ? ಹೊಟ್ಟೆತುಂಬ
ಅವಳು ನಾಳೆ ಕಚೇರಿಯಲ್ಲಿ ದುಡಿದು ಎಲ್ಲರಿಗೂ ಹೊಟ್ಟೆತುಂಬ ಏನು ಕೊಡುತ್ತಾಳೆ? ಅನ್ನ

ಇಲ್ಲಿ ವಾಕ್ಯದಲ್ಲಿ ಎಂಟು ಗಟಕಗಳು ಇವೆ. ಈ ಎಂಟೂ ಗಟಕಗಳನ್ನು ಪ್ರಶ್ನಿಸುವ ಪ್ರಯತ್ನ ಮಾಡಿದೆ ಮತ್ತು ಇದು ಸಾದ್ಯವಾಗಿದೆ. ಅಂದರೆ, ಕನ್ನಡದಾಗ ವಾಕ್ಯದ ಯಾವುದೆ ಗಟಕವನ್ನು ಮತ್ತು ಎಲ್ಲ ಗಟಕಗಳನ್ನು ಪ್ರಶ್ನಿಸಲು ಸಾದ್ಯ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, ಯಾವ ಗಟಕವನ್ನು ಹೇಗೆ ಪ್ರಶ್ನಿಸಲಾಗುತ್ತದೆ ಎಂಬುದು. ಈ ಮೇಲಿನ ವಾಕ್ಯಗಳಲ್ಲಿ ಗಮನಿಸುವಂತೆ ಯಾವ ಗಟಕವನ್ನು ಪ್ರಶ್ನಿಸಲಾಗುತ್ತಿದೆಯೊ ಆ ಗಟಕದ ಜಾಗದಲ್ಲಿ ಪ್ರಶ್ನಪದವನ್ನು ತಂದಿದೆ. ಹಾಗಾದರೆ, ಈ ವಾಸ್ತವ ಮತ್ತೊಂದು ಪ್ರಶ್ನೆಗೆ ಸಮಾದಾನ ಕೊಡುವಂತಿದೆ. ಆ ಪ್ರಶ್ನೆಯೆಂದರೆ, ಕನ್ನಡದಾಗ ಪ್ರಶ್ನೆಪದಗಳನ್ನು ವಾಕ್ಯದಲ್ಲಿ ಯಾವ ಜಾಗದಲ್ಲಿ ಅಂದರೆ, ವಾಕ್ಯದ ಮೊದಲಲ್ಲಿ, ವಾಕ್ಯದ ನಡುವಲ್ಲಿ ಇಲ್ಲಾ ಕೊನೆಯಲ್ಲಿ ಹೀಗೆ ಎಲ್ಲಿ ಬಳಸಬಹುದು? ಈ ಪ್ರಶ್ನೆಗೆ ಮೇಲಿನ ವಾಕ್ಯಗಳನ್ನು ಗಮನಿಸಿದಾಗ ವಾಕ್ಯದಲ್ಲಿ ಎಲ್ಲಿ ಬೇಕಾದರೂ ಪ್ರಶ್ನೆಪದಗಳನ್ನು ಬಳಸಬಹುದು ಎಂಬುದು ತಿಳಿಯುತ್ತದೆ. ಹಾಗಾದರೆ, ಇಲ್ಲಿ ಇನ್ನೊಂದು ಪ್ರಶ್ನೆ ಏಳುತ್ತದೆ. ಈ ಮೇಲಿನ ವಾಕ್ಯಗಳನ್ನು ಗಮನಿಸಿದಾಗ, ಕೊಟ್ಟಿರುವ ವಾಕ್ಯವೊಂದರಲ್ಲಿ ಇರುವಂತದ್ದನ್ನು ಮಾತ್ರವೆ ಪ್ರಶ್ನಿಸಲಾಗಿದೆ. ಹಾಗಾದರೆ, ಆ ವಾಕ್ಯದಲ್ಲಿ ಇಲ್ಲದೆ ಇರುವಂತದ್ದನ್ನು ಪ್ರಶ್ನಿಸುವುದು ಹೇಗೆ ಎಂಬ ಪ್ರಶ್ನೆ ಬರಬಹುದು. ಕಂಡಿತ, ಕೊಟ್ಟಿರುವ ವಾಕ್ಯವೊಂದರಲ್ಲಿ ಇಲ್ಲದಿರುವುದನ್ನೂ ಪ್ರಶ್ನಿಸಲು ಸಾದ್ಯವಿದೆ. ಈ ಮೇಲಿನ ವಾಕ್ಯವನ್ನು ಬಳಸಿಕೊಂಡು ಇದನ್ನು ಗಮನಿಸಬಹುದು. ಈ ವಾಕ್ಯದಲ್ಲಿ ಅನ್ನವನ್ನು ಕೊಡುವುದರ ಬಗೆಗೆ ಮಾಹಿತಿ ಇದೆ, ಎಶ್ಟು ಅನ್ನ ಕೊಡುವುದರ ಬಗೆಗೆ ಮಾಹಿತಿ ಇದೆ, ಆದರೆ, ಎಂತಾ ಅನ್ನವನ್ನು ಕೊಡುವುದು ಎಂಬುದರ ಬಗೆಗೆ ಯಾವುದೆ ಮಾಹಿತಿ ಇಲ್ಲ. ಈ ಎಂತಾ ಎಂಬ ಪ್ರಶ್ನೆಪದವನ್ನು ಮೇಲಿನ ವಾಕ್ಯದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಗಮನಿಸೋಣ.

ಅವಳು ನಾಳೆ ಕಚೇರಿಯಲ್ಲಿ ದುಡಿದು ಎಲ್ಲರಿಗೂ ಹೊಟ್ಟೆತುಂಬ ಎಂತಾ ಅನ್ನ ಕೊಡುತ್ತಾಳೆ? ಬಿಳಿ ಅನ್ನ ಇಲ್ಲಿ, ವಾಕ್ಯದಲ್ಲಿ ಇಲ್ಲದಿರುವ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಕಾಣಬಹುದು. ಹೀಗೆ, ವಾಕ್ಯದಲ್ಲಿ ಇಲ್ಲದಿರುವ ಮಾಹಿತಿಯನ್ನು ಪ್ರಶ್ನಿಸುವಾಗ, ಪ್ರಶ್ನೆಪದವನ್ನು ಎಲ್ಲಿ ತರಲಾಗುತ್ತದೆ ಎಂಬುದನ್ನು ಅವಲೋಕಿಸಬೇಕು. ಪ್ರಶ್ನಿಸುತ್ತಿರುವ ಗಟಕಕ್ಕೆ ಅರ‍್ತದಂತ ನೆಲೆಯಲ್ಲಿ ವಾಕ್ಯದ ಯಾವ ಗಟಕ ಹತ್ತಿರದಲ್ಲಿ ಬರುತ್ತದೆಯೊ ಆ ಗಟಕದ ಹತ್ತಿರ ಪ್ರಶ್ನೆಪದದ ಬಳಕೆ ಆಗುತ್ತದೆ. ಈ ಮೇಲಿನ ವಾಕ್ಯದಲ್ಲಿ ಎಂತಾ ಎಂಬ ಪ್ರಶ್ನೆಯು ಮುಕ್ಯವಾಗಿ ಅನ್ನವನ್ನು, ಅಂದರೆ ಅನ್ನದ ಬಗೆಯನ್ನು ಪ್ರಶ್ನಿಸುತ್ತಿರುವುದರಿಂದ, ಅರ‍್ತಾತ್ಮಕವಾಗಿ ಈ ಶಬ್ದ ಎಂತಾ ಎಂಬ ಪ್ರಶ್ನೆಪದಕ್ಕೆ ಹತ್ತಿರದ ಗಟಕವಾಗುತ್ತದೆ. ಹಾಗಾಗಿ, ಮೇಲಿನ ವಾಕ್ಯದಲ್ಲಿ ಅನ್ನ ಗಟಕದ ಹತ್ತಿರದಲ್ಲಿ ಈ ಪ್ರಶ್ನೆಪದ ಬಳಕೆಯಾಗಿದೆ. ಕನ್ನಡವು ಸಡಿಲ ವಾಕ್ಯ ಅನುಕ್ರಮದ ಬಾಶೆಯಾಗಿರುವುದರಿಂದ ಪ್ರಶ್ನೆಪದದ ಬಳಕೆಯು ಕೂಡ ವಾಕ್ಯದಲ್ಲಿ ಸಡಿಲವಾಗಿ ಇರುತ್ತದೆ. ಅಂದರೆ, ಹಲವು ಬಾರಿ ಪ್ರಶ್ನೆಪದವನ್ನು ನಿರ‍್ದಿಶ್ಟ ಜಾಗದಿಂದ ಕದಲಿಸಿ ಬೇರೆ ಕಡೆಗೆ ತಂದು ಬಳಸಲು ಸಾದ್ಯವಿದೆ. ಕೆಳಗಿನ ವಾಕ್ಯಗಳನ್ನು ಗಮನಿಸಿ,

ಅವಳು ನಾಳೆ ಕಚೇರಿಯಲ್ಲಿ ದುಡಿದು ಯಾರಿಗೆ ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ಎಲ್ಲರಿಗೆ
ಯಾರಿಗೆ ಅವಳು ನಾಳೆ ಕಚೇರಿಯಲ್ಲಿ ದುಡಿದು ಹೊಟ್ಟೆತುಂಬ ಅನ್ನ ಕೊಡುತ್ತಾಳೆ? ಎಲ್ಲರಿಗೆ
ಅವಳು ನಾಳೆ ಕಚೇರಿಯಲ್ಲಿ ದುಡಿದು ಹೊಟ್ಟೆತುಂಬ ಯಾರಿಗೆ ಅನ್ನ ಕೊಡುತ್ತಾಳೆ? ಎಲ್ಲರಿಗೆ
ಅವಳು ನಾಳೆ ಕಚೇರಿಯಲ್ಲಿ ದುಡಿದು ಹೊಟ್ಟೆತುಂಬ ಅನ್ನ ಯಾರಿಗೆ ಕೊಡುತ್ತಾಳೆ? ಎಲ್ಲರಿಗೆ

ಈ ವಾಕ್ಯಗಳಲ್ಲಿ ಯಾರಿಗೆ ಎಂಬ ಪ್ರಶ್ನೆಪದ ತಾನು ಯಾವ ಗಟಕವನ್ನು ಪ್ರಶ್ನಿಸುತ್ತಿದೆಯೊ ಆ ಗಟಕದ ಜಾಗದಲ್ಲಿ ಬಂದಿರುವುದನ್ನು ಮೊದಲ ವಾಕ್ಯದಲ್ಲಿ ಗಮನಿಸಿದರೆ, ಉಳಿದ ವಾಕ್ಯದಲ್ಲಿ ಅದು ವಾಕ್ಯದ ತುಂಬ ಎಲ್ಲೆಡೆ ವಿಹರಿಸಿಕೊಂಡು ಎಲ್ಲ ಕಡೆ ಬಳಕೆಯಾಗಿರುವುದನ್ನು ಕಾಣಬಹುದು. ಇಲ್ಲಿ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಇದು ಹೇಗೆ ಮತ್ತು ಯಾಕೆ ಸಾದ್ಯ. ಕನ್ನಡದಲ್ಲಿ ವಾಕ್ಯದ ಗಟಕಗಳನ್ನು ಬದಲಿಸುವುದಕ್ಕೆ ಅವಕಾಶವಿದೆ. ಹಾಗೆ ಪ್ರಶ್ನೆಪದಗಳನ್ನು ಜಾಗ ಬದಲಿಸಿ ಬಳಸಲು ಕೂಡ ಅವಕಾಶ ಇದೆ. ಹೀಗೆ ಪ್ರಶ್ನೆಪದಗಳ ಜಾಗವನ್ನು ಬದಲಿಸುವಾಗ ವಾಕ್ಯದಲ್ಲಿ ಆಡುಗ ಯಾವ ವಸ್ತುವಿನ ಕಡೆ, ಯಾವ ಗಟಕದ ಕಡೆ ಒತ್ತು ಕೊಡುತ್ತಿದ್ದಾರೆ ಎಂಬುದು ಮುಕ್ಯವಾಗುತ್ತದೆ. ಒತ್ತು ಪಡೆದುಕೊಳ್ಳುತ್ತಿರುವ ಗಟಕದ ಹತ್ತಿರದಲ್ಲಿ ಪ್ರಶ್ನೆಪದ ಬರುತ್ತದೆ.

ವಾಕ್ಯದ ಬಿಡಿ ಬಿಡಿ ಗಟಕಗಳನ್ನು ಪ್ರಶ್ನಿಸುವುದು ಸರಿ. ಇಡಿಯ ವಾಕ್ಯವನ್ನು ಪ್ರಶ್ನಿಸಲು ಸಾದ್ಯವಿದೆಯೆ? ಸಾದ್ಯವಿದೆ. ಏನು ಎಂಬ ಪ್ರಶ್ನೆಪದ ಈ ಮೇಲೆ ಕೊಟ್ಟಿರುವ ವಾಕ್ಯದಲ್ಲಿ ಒಳಗಾಗುವ ವಸ್ತುವನ್ನು ಪ್ರಶ್ನಿಸುವುದಕ್ಕೆ ಬಳಕೆ ಆಗಿರುವುದನ್ನು ನೋಡಿದೆ. ಅದರೊಟ್ಟಿಗೆ, ಏನು ಎಂಬ ಪ್ರಶ್ನೆಪದ ಇನ್ನೊಂದು ವಿಸ್ತಾರವಾದ ಜವಾಬ್ದಾರಿಯನ್ನೂ ಮಾಡುತ್ತದೆ. ಇಡಿಯ ವಾಕ್ಯವನ್ನು ಇದು ಪ್ರಶ್ನಿಸಬಹುದು. ಈ ಮೇಲೆ ಕೊಟ್ಟ ವಾಕ್ಯವನ್ನು ಏನು ಎಂದು ಪ್ರಶ್ನಿಸುವ ಮೂಲಕ ಇಡಿಯ ವಾಕ್ಯವನ್ನು ಪ್ರಶ್ನಿಸಿದಂತಾಗುತ್ತದೆ.

ಏನು? ಅವಳು ನಾಳೆ ಮನೆಗೆ ದುಡಿದು ಎಲ್ಲರಿಗೂ ಅನ್ನ ಕೊಡುತ್ತಾಳೆ

ಒಂದು ಕುತೂಹಲದ ವಿಚಾರವೆಂದರೆ, ಕನ್ನಡದಲ್ಲಿ ಸಾಮಾನ್ಯವಾಗಿ ಇಡಿಯ ವಾಕ್ಯವನ್ನು ಪ್ರಶ್ನಿಸುವ ಕಸುವು ಸಹಜವಾಗಿ ಇರುವುದು ಏನು ಎಂಬ ಒಂದು ಪ್ರಶ್ನೆಪದಕ್ಕೆ. ಉಳಿದ ಪದಗಳು ಸಾಮಾನ್ಯ ಇಡಿಯ ವಾಕ್ಯವನ್ನು ಪ್ರಶ್ನಿಸುವುದಿಲ್ಲ. ಬದಲಿಗೆ, ಮೇಲೆ ನೋಡಿದಂತೆ ಒಂದು ಗಟಕವನ್ನು ಮಾತ್ರ ಪ್ರಶ್ನಿಸುತ್ತವೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...