ಕನ್ನಡ ಸಂದಿಗಳು

Date: 16-06-2023

Location: ಬೆಂಗಳೂರು


“ಕನ್ನಡದ ದಿನಜೀವನದ ಮಾತಿನಲ್ಲಿ ಎಂತೆಂತೆಲ್ಲ ಚಳಕಗಳು ನಡೆಯುತ್ತಿವೆ ಎಂಬುದನ್ನು ಗುರುತಿಸುವಶ್ಟು ವ್ಯಾಕರಣ ಕನ್ನಡದಲ್ಲಿ ಬಂದಿಲ್ಲ. ಬಾಶೆಯೊಂದು ಬಹು ಸೂಕ್ಶ್ಮಗಳು ಹಲವು ಕೋದುಕೊಂಡಿರುವ ನೇಯಿಗೆ. ಸಂದಿ ಎಂಬ ಒಂದು ಪ್ರಕ್ರಿಯೆ ಬಾಶೆಯಲ್ಲಿ ವಿಶೇಶವಾಗಿ ಗಟಿಸುವ ಅಂತದೊಂದು ಚಳಕ,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡ ಸಂದಿಗಳು’ ವಿಚಾರದ ಕುರಿತು ಬರೆದಿದ್ದಾರೆ.

ಇದರಲ್ಲಿ ಮತ್ತೆ ಹಲವು ತೆರನಾದ ಪ್ರಕ್ರಿಯೆಗಳು ಇರುತ್ತವೆ. ಅಂದರೆ, ಎರಡು ಗಟಕಗಳು ಪರಸ್ಪರ ಸೇರುವಾಗ ಬಿನ್ನ ಬಾಶೆಗಳಲ್ಲಿ ವಿಬಿನ್ನವಾದ ಪ್ರಕ್ರಿಯೆಗಳು ನಡೆಯಬಹುದು. ಕನ್ನಡದಲ್ಲಿ ನಡೆಯುವ ಕೆಲವು ವಿಶೇಶ ಪ್ರಕ್ರಿಯೆಗಳನ್ನು ಇಲ್ಲಿ ಗಮನಿಸೋಣ. ಮೊದಲಿಗೆ ಈ ಕೆಲವು ಬಳಕೆಗಳನ್ನು ಗಮನಿಸೋಣ, ಇದರಲ್ಲಿ ಪದ ಮತ್ತು ಪ್ರತ್ಯಯಗಳು ಪರಸ್ಪರ ಸೇರುವ ಉದಾಹರಣೆಗಳನ್ನು ಮೊದಲು ಮಾತಿಗೆ ತೆಗೆದುಕೊಂಡಿದೆ.

ನಾರನ್ನು, ನೀರನ್ನು
ಕರುವಿಗೆ, ಗುರುವಿಗೆ
ಕಾಡಿಗೆ, ಹಾಡಿಗೆ

ಇದರಲ್ಲಿ ಪ್ರತಿಯೊಂದು ಶಬ್ದದಲ್ಲಿಯೂ ಒಂದು ಶಬ್ದ ಮತ್ತು ಅದರ ಮೇಲೆ ಒಂದು ಪ್ರತ್ಯಯ ಬಂದು ಸೇರಿರುವುದು ಕಾಣಿಸುತ್ತದೆ. ಅವುಗಳನ್ನು ಮುಂದಿನ ಸಾಲಿನಲ್ಲಿ ಬಿಡಿಸಿ ತೋರಿಸಿದೆ.

ನಾರು+-ಅನ್ನು=ನಾರನ್ನು ನೀರು+-ಅನ್ನು=ನೀರನ್ನು
ಕರು+-ವ್+-ನ್ನು=ಕರುವನ್ನು ಗುರು+-ವ್+-ನ್ನು=ಗುರುವನ್ನು
ಕಾಡು+-ಗೆ=ಕಾಡಿಗೆ ಹಾಡು+-ಗೆ=ಹಾಡಿಗೆ

ಈ ಮೂರೂ ಜೋಡಿಪದಗಳಲ್ಲಿ ಸಂದಿ ಪ್ರಕ್ರಿಯೆ ನಡೆಯುವಾಗ ಬಿನ್ನವಾದ ಪ್ರಕ್ರಿಯೆಗಳು ನಡೆದಿರುವುದನ್ನು ಕಾಣಬಹುದು. ಮೊದಲ ಬಳಕೆಯಲ್ಲಿ ‘ನಾರು’ ಎಂಬ ಶಬ್ದದ ಮೇಲೆ ‘-ಅನ್ನು’ ಎನ್ನುವ ಪ್ರತ್ಯಯ ಸೇರಿದೆ. ಹೀಗೆ ಪ್ರತ್ಯಯವು ಸೇರುವಾಗ ಮೊದಲ ಪದದ ಕೊನೆಯಲ್ಲಿ ಇರುವ ಸ್ವರವು ಬಾದಿತವಾಗಿದೆ. ಮೊದಲ ಪದದ ದ್ವನಿರಚನೆ ಹೀಗಿದೆ. ‘ನ್+ಆ+ರ್+ಉ’ ಇದಕ್ಕೆ ಇನ್ನೊಂದು ಸ್ವರದಿಂದ ಆರಂಬವಾಗುವ ‘-ಅನ್ನು’ ಎಂಬ ಪ್ರತ್ಯಯವು ಸೇರಿದಾಗ ಮೊದಲ ಪದದ ಕೊನೆಯ ದ್ವನಿಯಾದ ‘ಅ’ ಇದು ಬಿದ್ದು ಹೋಗಿದೆ, ಲೋಪವಾಗಿದೆ. ಪದದ ದ್ವನಿಯೊಂದು ಬಿದ್ದು ಹೋಗುವ ಪ್ರಕ್ರಿಯೆಯು ಲೋಪ. ಈ ದ್ವನಿಯೊಂದು ಲೋಪವಾಗುವ ಪ್ರಕ್ರಿಯೆ ನಡೆಯುವ ಸಂದಿಯು ಲೋಪ ಸಂದಿ.

ಇನ್ನು ಎರಡನೆಯ ಜೋಡಿ ಶಬ್ದಗಳನ್ನು ಗಮನಿಸಬಹುದು. ಇದರಲ್ಲಿ ‘ಕರುವನ್ನು’ ಎಂಬ ಶಬ್ದದ ರಚನೆಯನ್ನು ಗಮನಿಸಿದಾಗ, ‘ಕರು+-ಅನ್ನು’ ಎಂಬುದು ಕಾಣಿಸುತ್ತದೆ. ಇದರಲ್ಲಿ ಮೊದಲ ಪದ ‘ಕರು’ ಇದರ ದ್ವನಿರಚನೆಯು

‘ಕ್+ಅ+ರ್+ಉ= ಎಂದಾಗಿದೆ. ಈ ಶಬ್ದದ ಮೇಲೆ ‘-ಅನ್ನು’ ಎಂಬ ಒಂದು ಪ್ರತ್ಯಯ ಬಂದು ಸೇರುವಾಗ ಪದ ಮತ್ತು ಪ್ರತ್ಯಯ ಈ ಎರಡರಲ್ಲೂ ಇಲ್ಲದ ಇನ್ನೊಂದು ದ್ವನಿಯು ಅವೆರಡು ಪರಸ್ಪರ ಕೂಡುವುದಕ್ಕೆ ಸಹಾಯ ಮಾಡುವ ರೀತಿಯಲ್ಲಿ ಬರುತ್ತಿದೆ. ಮೇಲೆ ತೋರಿಸಿರುವ ಈ ರಚನೆಯನ್ನು ಇಲ್ಲಿ ಮತ್ತೊಮ್ಮೆ ತೋರಿಸಿದೆ. ‘ಕರು+-ವ್-+-ಅನ್ನು’. ಈ ಮೇಲೆ ನೋಡಿದ ಸಂದಿ ಪ್ರಕ್ರಿಯೆಯಲ್ಲಿ ಪದದಲ್ಲಿ ಇರುವ ದ್ವನಿಯೊಂದು ಬಿದ್ದು ಹೋಗಿದೆ. ಆದರೆ, ಈಗ ಮಾತನಾಡುತ್ತಿರುವ ಸಂದಿ ಪ್ರಕ್ರಿಯೆಯಲ್ಲಿ ಎರಡೂ ಗಟಕಗಳಲ್ಲಿ ಇಲ್ಲದ ಒಂದು ದ್ವನಿ ಬಂದು ಸೇರುತ್ತಿದೆ. ಇದು, ಆ ಎರಡೂ ಗಟಕಗಳನ್ನು ಬೆಸೆಯುವುದಕ್ಕೆ ಸಹಾಯ ಮಾಡುತ್ತದೆ. ಇಲ್ಲಿ ದ್ವನಿಯೊಂದು ಆಗಮವಾಗಿ ಬರುತ್ತಿದೆ. ಆದ್ದರಿಂದ ಈ ಪ್ರಕ್ರಿಯೆಯಲ್ಲಿ ನಡೆಯುವ ಸಂದಿಯನ್ನು ಆಗಮ ಸಂದಿ ಎಂದು ಕರೆಯಲಾಗುತ್ತದೆ.

ಈ ಆಗಮ ಸಂದಿಯಲ್ಲಿ ತುಸು ವಿಬಿನ್ನವಾದ ಆಗಮಗಳು ಬರುತ್ತವೆ. ಅಂದರೆ ಬಿನ್ನವಾದ ದ್ವನಿಗಳು ಹೀಗೆ ಸಂದಿ ಪ್ರಕ್ರಿಯೆಯ ಬಾಗವಾಗಿ ಬರಬಹುದು. ಅವುಗಳನ್ನು ಇಲ್ಲಿ ಕೆಳಗೆ ಪಟ್ಟಿಸಿದೆ.

ದ್ ಆಗಮ: ಮರ+-ದ್-+-ಇಂದ
ನ್ ಆಗಮ: ಕನಸು+-ನ್+-ಇಂದ=ಕನಸಿನಿಂದ
ಯ್ ಆಗಮ: ಮನೆ+-ಯ್-+-ಇಂದ=ಮನೆಯಿಂದ
ವ್ ಆಗಮ: ಗುರು+-ವ್-+-ಇಂದ=ಗುರುವಿಂದ
ಹೀಗೆ ವಿವಿದ ದ್ವನಿಗಳು ಆಗಮವಾಗಿ ಬರುವುದನ್ನು ನೋಡಬಹುದು.

ಇನ್ನು ಮೂರನೆಯ ಪದಜೋಡಿಗಳನ್ನು ಗಮನಿಸಿದಾಗ ‘ಕಾಡು’ ಪದದ ರಚನೆಯು ‘ಕ್+ಆ+ಡ್+ಉ’ ಎಂಬುದಾಗಿದೆ. ಇದಕ್ಕೆ ಪ್ರತ್ಯಯವಾದ ‘-ಗೆ’ ಎಂಬುದು ಸೇರಿದಾಗ ಮೊದಲ ಶಬ್ದದ ಕೊನೆಯ ದ್ವನಿಯಾದ ‘ಉ’ ಇದು ‘ಇ’ ಎಂದು ಬದಲಾಗಿದೆ. ಅಂದರೆ, ಪದದ ಮೇಲೆ ಇನ್ನೊಂದು ಪ್ರತ್ಯಯ ಬಂದು ಸೇರುವಾಗ ಮೊದಲ ಪದದ ಕೊನೆಯ ಸ್ವರವು ಬದಲಾಗಿದೆ. ಇಲ್ಲಿ ಇನ್ನೊಂದು, ಅಂದರೆ ಪದದಲ್ಲಿ ಇಲ್ಲದ ಇನ್ನೊಂದು ದ್ವನಿಯು ಪದದಲ್ಲಿ ಇರುವ ಒಂದು ದ್ವನಿಯನ್ನು ಬದಲಿಸಿ ಬರುತ್ತಿದೆ, ಅಂದರೆ ಆದೇಶವಾಗುತ್ತಿದೆ. ಇರುವ ದ್ವನಿಯನ್ನು ಬದಲಿಸಿ ಬರುವುದು ಆದೇಶ. ಈ ಪ್ರಕ್ರಿಯೆ ನಡೆಯುವ ಸಂದಿಯು ಆದೇಶ ಸಂದಿ.

ಈ ಮೂರು ಬಗೆಯ ಪ್ರಕ್ರಿಯೆಗಳು ಸಾಮಾನ್ಯವಾಗಿ ಕನ್ನಡದಲ್ಲಿ ಸಂದಿ ಆಗುವಾಗ ಕಂಡುಬರುವ ಪ್ರಕ್ರಿಯೆಗಳು ಆಗಿವೆ.

ಇದುವರೆಗೆ, ಮಾತುಕತೆಯಲ್ಲಿ ಬಳಸಿದ ಉದಾಹರಣೆಗಳು ಪದ ಮತ್ತು ಪ್ರತ್ಯಯಗಳು ಸೇರಿ ಸಂದಿ ಆಗಿರುವ ಒಳಸಂದಿಗೆ ಉದಾಹರಣೆ ಆಗಿವೆ. ಇನ್ನು, ಎರಡು ಪದಗಳ ನಡುವೆ ನಡೆಯುವ ಹೊರಸಂದಿಗೆ ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು.

ಚಿಕ್ಕಮ್ಮ, ಚಿಕ್ಕೂರು
ನೆಲದಾವರೆ, ಮರಗಾಲು
ಮನೆಯಾಳು, ಮರದೆಲೆ

ಈ ಮೇಲೆ ಮಾತನಾಡಿದ ಲೋಪ ಸಂದಿ, ಆಗಮ ಸಂದಿ ಮತ್ತು ಆದೇಶ ಸಂದಿ ಈ ಮೂರು ಪ್ರಕ್ರಿಯೆಗಳನ್ನು ಈ ಮೇಲೆ ಪಟ್ಟಿಸಿರುವ ಪದಜೋಡಿಗಳಲ್ಲಿ ಕ್ರಮವಾಗಿ ಕಾಣಬಹುದು. ‘ಚಿಕ್ಕ+ಅಮ್ಮ’ ಎಂಬ ಎರಡು ಪದಗಳು ಈ ಸಂದಿಯಲ್ಲಿ ಇವೆ. ಈ ಎರಡು ಪದಗಳ ರಚನೆಯನ್ನು ಇಲ್ಲಿ ತುಸು ಗಮನಿಸಬಹುದು. ‘ಚ್+ಇ+ಕ್+ಕ್+ಅ’ ಮತ್ತು ‘ಅ+ಮ್+ಮ್+ಅ’. ಈಗ, ಇವೆರಡು ಪದಗಳು ಪರಸ್ಪರ ಬೆರೆಯುವಾಗ ಮೊದಲ ಪದದ ಅಂದರೆ ಪೂರ್ವ ಪದದ ಕೊನೆಯ ದ್ವನಿ ಮತ್ತು ನಂತರದ ಪದದ ಅಂದರೆ ಉತ್ತರ ಪದದ ಮೊದಲ ದ್ವನಿ ಪರಸ್ಪರ ಬೆರೆಯುತ್ತವೆ. ಸಂದಿ ಪ್ರಕ್ರಿಯೆ ಈ ಎರಡು ದ್ವನಿಗಳ ನಡುವೆ ನಡೆಯುತ್ತದೆ. ಈ ಪದಗಳು ಬೆರೆಯುವಾಗ ಮೊದಲ ಪದದ ಕೊನೆ ದ್ವನಿಯಾದ ‘ಅ’ ಇದು ಬಿದ್ದು ಹೋಗಿದೆ, ಲೋಪವಾಗಿದೆ. ಇಲ್ಲಿ ಒಂದು ಪ್ರಶ್ನೆ ಎತ್ತಬಹುದು. ಮೊದಲ ಪದದ ಕೊನೆಯಲ್ಲಿ, ಹಾಗೆಯೆ ಎರಡನೆ ಪದದ ಮೊದಲಲ್ಲಿ ಕೂಡ ‘ಅ’ ದ್ವನಿ ಇರುವುದರಿಂದ ಯಾವ ‘ಅ’ ಬಿದ್ದು ಹೋಗಿದೆ ಎಂಬುದು ಹೇಳಲು ಸುಲಬವಾಗಲಿಕ್ಕಿಲ್ಲ. ಆದರೆ, ಸಾಮಾನ್ಯವಾಗಿ ಲೋಪ ಸಂದಿ ನಡೆಯುವಾಗ ಮೊದಲ ಪದದ ಕೊನೆ ದ್ವನಿ ಬಿದ್ದುಹೋಗುತ್ತದೆ. ಇದನ್ನು ತಿಳಿದುಕೊಳ್ಳುವುದಕ್ಕೆ ಮುಂದಿನ ಉದಾಹರಣೆಯನ್ನು ಗಮನಿಸಬಹುದು. ಎರಡನೆ ಉದಾಹರಣೆ, ‘ಚಿಕ್ಕೂರು’ ಆಗಿದೆ. ಇದರಲ್ಲಿ ಇರುವ ಪದಗಳು, ‘ಚಿಕ್ಕ+ಊರು’. ಈ ಪದಗಳ ರಚನೆ, ‘ಚ್+ಇ+ಕ್+ಕ್+ಅ’ ಮತ್ತು ‘ಊ+ರ್+ಉ’. ಈ ಎರಡೂ ಪದಗಳು ಪರಸ್ಪರ ಬೆರೆತಾಗ ಮೊದಲ ಪದದ ಕೊನೆಯ ದ್ವನಿಯಾದ ‘ಅ’ ಬಿದ್ದು ಹೋಗಿದೆ ಮತ್ತು ನಂತರದ ಪದದ ಮೊದಲ ದ್ವನಿಯಾದ ‘ಊ’ ಸಮಾಸ ಪದದಲ್ಲಿ ಉಳಿದುಕೊಂಡಿರುವುದನ್ನು ಕಾಣಬಹುದು.

ಉಳಿದಂತೆ, ಆಗಮವಾಗುವ ಮತ್ತು ಆದೇಶವಾಗುವ ಪ್ರಕ್ರಿಯೆಗಳನ್ನು ನಂತರದ ಎರಡು ಪದಗಳ ಜೋಡಿಗಳಲ್ಲಿ ಕಾಣಬಹುದು.

ಕನ್ನಡದಲ್ಲಿ ಈ ಮೂರು ಸಂದಿಗಳನ್ನು ಯಾವಾಗಿನಿಂದಲೂ ಹೇಳಿಕೊಂಡು ಬರಲಾಗಿದೆ. ಆದರೆ, ಇವುಗಳ ಜೊತೆಜೊತೆಗೆ ಸಂಸ್ಕ್ರುತ ಬಾಶೆಯಲ್ಲಿ ಕಂಡುಬರುವ ಮತ್ತು ಸಂಸ್ಕ್ರುತ ವ್ಯಾಕರಣಗಳಲ್ಲಿ ವಿವರಿಸಲಾಗಿರುವ ಕೆಲವು ಸಂದಿಗಳನ್ನೂ ಕನ್ನಡ ಪಾರಂಪರಿಕ ವ್ಯಾಕರಣಗಳು ಅನವಶ್ಯಕವಾಗಿ ವಿವರಿಸಿಕೊಂಡು ಬಂದಿರುವುದನ್ನು ಕಾಣಬಹುದು. ಆದುನಿಕ ಕಾಲದ ಹಲವು ಸಾಂಪ್ರದಾಯಿಕ ಪದ್ದತಿಯನ್ನು ಅನುಸರಿಸಿಕೊಂಡು ಬಂದಿರುವಂತ ವ್ಯಾಕರಣಗಳು ಇದನ್ನು ಈಗಲೂ ಉಳಿಸಿಕೊಂಡು ಬಂದಿವೆ. ಇವುಗಳಲ್ಲಿ ಶಾಲಾ ವ್ಯಾಕರಣಗಳೂ ಹೆಚ್ಚಿರುವುದು ಹಾಸ್ಯದ ವಿಚಾರ.

ಪ್ರತಿಯೊಂದು ಬಾಶೆ ವಿಬಿನ್ನವಾದ ಸಂದಿ ಪ್ರಕ್ರಿಯೆಯನ್ನು ಹೊಂದಿರುತ್ತದೆ. ಸಂಸ್ಕ್ರುತದ ಸಂದಿ ಪ್ರಕ್ರಿಯೆಯನ್ನು ಕನ್ನಡದಲ್ಲಿ ಒತ್ತಾಯಪೂರ‍್ವಕ ಹುಡುಕುವ ಪ್ರಯತ್ನ ಮಾಡಬೇಕಿಲ್ಲ. ಪಾರಂಪರಿಕ ವ್ಯಾಕರಣಗಳು ಹೇಳುವ ಈ ಸಂದಿ ಪ್ರಕ್ರಿಯೆಗಳು ಕನ್ನಡದಲ್ಲಿ ವಾಸ್ತವದಲ್ಲಿ ಕಂಡುಬರುವುದಿಲ್ಲ. ಇಲ್ಲಿ ಒಂದು ಸಂದಿ ಪ್ರಕ್ರಿಯೆಯನ್ನು ಮಾತಿಗೆ ತೆಗೆದುಕೊಳ್ಳಬಹುದು. ಕನ್ನಡದಲ್ಲಿ ‘ವಿದ್ಯುಚ್ಚಕ್ತಿ’ ಎಂಬುದೊಂದು ಪದವಿದೆ. ಇದನ್ನು ವ್ಯಾಕರಣಗಳು ಸಮಾಸ ಎಂದು

ವಿವರಿಸುತ್ತವೆ. ಹಾಗೆ ನೋಡಿದಾಗ ಇದರಲ್ಲಿ ‘ವಿದ್ಯುತ್’ ಮತ್ತು ‘ಶಕ್ತಿ’ ಎಂಬ ಎರಡು ಪದಗಳು ಕಾಣಿಸುತ್ತವೆ. ಈ ಎರಡು ಪದಗಳು ಪರಸ್ಪರ ಬೆರೆತಾಗ ‘ಶ್’ ದ್ವನಿಯ ಬದಲು ‘ಛ್ ದ್ವನಿಯು ಆದೇಶವಾಗಿ ಬರುತ್ತದೆ ಎಂದು ವಿವರಿಸಲಾಗುತ್ತದೆ. ಇದು ಕನ್ನಡದಲ್ಲಿ ನಡೆಯುವ ಒಂದು ಪ್ರಕ್ರಿಯೆಯಾಗಿದ್ದರೆ ಇತರ ಕನ್ನಡ ಪದಗಳು ಸಮಾಸವಾಗುವಾಗಲೂ ಇದು ಕಂಡುಬರಬೇಕು. ಬರಿಯ ಸಂಸ್ಕ್ರುತದಿಂದ ತೆಗೆದುಕೊಂಡ ಪದಗಳಲ್ಲಿ ಮಾತ್ರ ಆದರೆ, ಅದನ್ನು ಕನ್ನಡ ಬಾಶೆಯ ರಾಚನಿಕ ವಿಚಾರ ಎಂದು ಹೇಳಲು ಬರುವುದಿಲ್ಲ. ಹಾಗಾದರೆ, ಸಂಸ್ಕ್ರುತದಿಂದ ತೆಗೆದುಕೊಂಡಿರುವ ಇಂತಾ ಹಲವಾರು ಪದಗಳಿವೆ, ಅವುಗಳನ್ನು ಹೇಗೆ ವಿವರಿಸುವುದು ಎಂದುಬು ಪ್ರಶ್ನೆಯಾಗಬಹುದು. ಇದಕ್ಕೆ ತುಂಬಾ ಸರಳವಾದ ದಾರಿ ಇದೆ. ಕನ್ನಡವು ಸಂಸ್ಕ್ರುತದಿಂದ ‘ವಿದ್ಯುತ್’ ಎಂಬ ಪದವನ್ನು, ‘ಶಕ್ತಿ’ ಎಂಬ ಪದವನ್ನು ಬಿಡಿಯಾಗಿ ಪಡೆದುಕೊಂಡಿರುವುದು ನಿಜ. ಇವೆರಡೂ ಪದಗಳು ಸೇರಿ ಆಗಿರುವ ‘ವಿದ್ಯುಚ್ಚಕ್ತಿ’ ಎಂಬ ಪದವನ್ನೂ ಸಂಸ್ಕ್ರುತದಿಂದ ಪಡೆದುಕೊಂಡಿದೆ. ಬದಲಿಗೆ, ಎರಡು ಪದಗಳನ್ನು ಬಿಡಿಯಾಗಿ ತೆಗೆದುಕೊಂಡು ಅವುಗಳನ್ನು ಸಮಾಸ ಮಾಡಿಲ್ಲ. ಹಾಗಾಗಿ, ಈ ಬಗೆಯ ಎಲ್ಲ ಸಂದಿಗಳನ್ನು ಕನ್ನಡದಲ್ಲಿ ಕಾಣಲು ಆಗುವುದಿಲ್ಲ. ಕನ್ನಡ ವ್ಯಾಕರಣ ಬರೆಯುವಾಗ ಕನ್ನಡದ ರಚನೆಯನ್ನು ವಿವರಿಸಲಾರದ ಅಂಶಗಳನ್ನು ಹೇಳುವುದರಿಂದ ಅನವಶ್ಯಕ ಬಾರವನ್ನು ಹೊತ್ತುಕೊಂಡಂತೆ ಮಾತ್ರ. ಅವುಗಳನ್ನು ಬಿಡಬಹುದು ಮತ್ತು ಬಿಡಬೇಕು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...