ವಾಕ್ಯವೆಂಬ ಮಾಯಾಜಾಲ

Date: 23-06-2023

Location: ಬೆಂಗಳೂರು


''ಸಾಮಾನ್ಯವಾಗಿ ಕತೆ, ಕಾದಂಬರಿ ಮೊದಲಾದ ಹೊಸಗನ್ನಡದ ಬರವಣಿಗೆಗಳಲ್ಲಿ ‘.’ (ಪೂರ‍್ಣವಿರಾಮ) ಬಳಸುವುದು ಸಾಮಾನ್ಯ. ಈ ಚಿನ್ನೆ ಬಳಕೆಯಾದ ಕಡೆ ಒಂದು ವಾಕ್ಯ ಮುಗಿಯಿತು ಎಂದು ಹೇಳಲಾಗುತ್ತದೆ. ಆದರೆ, ಕವನದಲ್ಲಿ ಸಾಮಾನ್ಯವಾಗಿ ಈ ಚಿನ್ನೆ ಬಳಕೆಯಾಗುವುದಿಲ್ಲ. ಹಳಗನ್ನಡದಲ್ಲಿ ಈ ಚಿನ್ನೆಗಳು ಬಳಕೆ ಆಗುವುದಿಲ್ಲ,'' ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ವಾಕ್ಯವೆಂಬ ಮಾಯಾಜಾಲ’ ವಿಚಾರದ ಕುರಿತು ಬರೆದಿದ್ದಾರೆ.

ಸಾಮಾನ್ಯವಾಗಿ ವಾಕ್ಯ ಎಂದರೆ ಹಲವು ಜಟಿಲ ನೇಯಿಗೆ ಇರುವ ರಚನೆ. ಇದನ್ನು ಪಾರಂಪರಿಕ ಬಾರತೀಯ ಶಬ್ದಶಾಸ್ತ್ರ ತನ್ನ ಅದ್ಯಯನದ ಪರಿದಿಯ ಆಚೆಗೆ ಇಟ್ಟಿದ್ದಿತು. ಮೂಲಬೂತವಾಗಿ ಬಾಶೆಯ ಅದ್ಯಯನ ದ್ವನಿಗಳ ಅದ್ಯಯನವಾಗಿ ಮತ್ತು ಶಬ್ದಗಳ ಅದ್ಯಯನವಾಗಿ ಬೆಳೆಯಿತು ಮತ್ತು ಆನಂತರ ವಾಕ್ಯವನ್ನು ಅದು ಒಳಗೊಳ್ಳಲಿಲ್ಲ. ಬದಲಿಗೆ ವಾಕ್ಯ ಎನ್ನುವುದು ಆಡುವವರ ಮನಸ್ತಿತಿಗೆ ಸಂಬಂದಿಸಿದ್ದು ಎಂಬಂತ ಸಾಮಾನ್ಯ ಮಾತುಗಳನ್ನು ವಾಕ್ಯದ ಬಗೆಗೆ ಆಡಿದ್ದನ್ನೂ ಕಾಣಬಹುದು. ಹಾಗಾದರೆ, ವಾಕ್ಯವನ್ನು ಅದ್ಯಯನ ಮಾಡುವ ಆಸಕ್ತಿಯನ್ನು ಪಾರಂಪರಿಕ ಬಾರತೀಯ ವಿದ್ವತ್ತು ತೋರಿಸಲಿಲ್ಲವೆ ಎಂಬ ಪ್ರಶ್ನೆ ಸಹಜವಾಗಿ ಬರಬಹುದು. ತತ್ವಗ್ನಾನವು ಅರ‍್ತದ ಅದ್ಯಯನವನ್ನು ತನ್ನ ಬಾಗವನ್ನಾಗಿ ಹೊಂದಿದ್ದಿತು. ಅದರಂತೆಯೆ ವಾಕ್ಯದ ರಚನೆಯನ್ನು ಅರ‍್ತದ ನೆಲೆಯಲ್ಲಿ ತತ್ವಗ್ನಾನ ಚಿಂತಿಸುತ್ತಿದ್ದಿತು. ಆದರೆ, ವಾಕ್ಯದ ವಿಶೇಶ ಅದ್ಯಯನ ಎನ್ನುವುದು ಎಲ್ಲಿಯೂ ಕಂಡುಬರುವುದಿಲ್ಲ. ಇದು, ಆದುನಿಕ ಕಾಲದಲ್ಲಿ ತೀರಾ ಇತ್ತೀಚೆಗೆ ಅಂದರೆ 1960ರ ಚಾಮಸ್ಕಿಯ ಚಿಂತನೆಗಳ ಜೊತೆಜೊತೆಗೆ ಬಾಶಾವಿಗ್ನಾನದ ಬಾಗವಾಗಿ ಬಂದಿತು. ಇಲ್ಲಿ ವಾಕ್ಯ ಎಂದರೇನು ಎಂಬುದರ ಕುರಿತು ತುಸು ಸ್ತೂಲವಾಗಿ ಒಂದೆರಡು ಮಾತುಗಳಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ವಾಕ್ಯ ಎಂದರೆ ಏನು?
ಸಾಮಾನ್ಯವಾಗಿ ಕತೆ, ಕಾದಂಬರಿ ಮೊದಲಾದ ಹೊಸಗನ್ನಡದ ಬರವಣಿಗೆಗಳಲ್ಲಿ ‘.’ (ಪೂರ‍್ಣವಿರಾಮ) ಬಳಸುವುದು ಸಾಮಾನ್ಯ. ಈ ಚಿನ್ನೆ ಬಳಕೆಯಾದ ಕಡೆ ಒಂದು ವಾಕ್ಯ ಮುಗಿಯಿತು ಎಂದು ಹೇಳಲಾಗುತ್ತದೆ. ಆದರೆ, ಕವನದಲ್ಲಿ ಸಾಮಾನ್ಯವಾಗಿ ಈ ಚಿನ್ನೆ ಬಳಕೆಯಾಗುವುದಿಲ್ಲ. ಹಳಗನ್ನಡದಲ್ಲಿ ಈ ಚಿನ್ನೆಗಳು ಬಳಕೆ ಆಗುವುದಿಲ್ಲ. ಹಾಗಾದರೆ, ಅಲ್ಲೆಲ್ಲ ವಾಕ್ಯವನ್ನು ಗುರುತಿಸುವುದು ಹೇಗೆ? ವಾಸ್ತವದಲ್ಲಿ ಈ ಚಿನ್ನೆಗಳು ಯುರೋಪಿನ ಪ್ರಬಾವದಿಂದ ಆದುನಿಕ ಕಾಲದಲ್ಲಿ ಕನ್ನಡ ಬರವಣಿಗೆಯೊಳಗೆ ಸೇರಿಕೊಂಡಿವೆ. ಪಾರಂಪರಿಕವಾಗಿ ಈ ಚಿನ್ನೆಗಳು ಕನ್ನಡದಲ್ಲಿ ಇರಲಿಲ್ಲ. ಇನ್ನು, ಆಡುಮಾತಿನಲ್ಲಿ ವಾಕ್ಯವನ್ನು ಗುರುತಿಸುವುದಾದರೂ ಹೇಗೆ? ಇದಂತೂ ಸಾದ್ಯವೆ ಇಲ್ಲದಂತಾ ವಿಚಾರ, ಎನಿಸಬಹುದಲ್ಲವೆ. ಹಾಗಾದರೆ, ಪೂರ‍್ಣವಿರಾಮ ಎನ್ನುವುದು ವಾಕ್ಯವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುವುದಿಲ್ಲ ಎಂದಾಯಿತು.

ಸರಿ, ವಾಕ್ಯ ಎಂಬುದನ್ನು ಇನ್ನೊಂದು ನೆಲೆಯಲ್ಲಿ ನೋಡುವ ಪ್ರಯತ್ನ ಮಾಡೋಣ. ಸಾಮಾನ್ಯವಾಗಿ ವಾಕ್ಯ ಎಂದರೆ ಪರಿಪೂರ‍್ಣವಾದ ಅರ‍್ತವನ್ನು ಕೊಡುವಂತಾ ಗಟಕ ಎಂದು ಹೇಳಲಾಗುತ್ತದೆ. ಈ ಪರಿಪೂರ‍್ಣವಾದ ಅರ‍್ತ ಎಂದರೆ ಏನು? ವಾಕ್ಯವು ಒದಗಿಸುತ್ತಿರುವ ಮಾಹಿತಿಯು ಪೂರ‍್ಣವಾಗಿದೆ, ಅಂದರೆ ಇನ್ನಶ್ಟು ಮಾಹಿತಿ ಇನ್ನು ಮುಂದೆ ಇಲ್ಲ ಎನ್ನುವ ಸ್ತಿತಿ. ಇದನ್ನು ಪರಿಪೂರ‍್ಣ ವಾಕ್ಯ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೂ ಇದೊಂದು ಸಮಸ್ಯೆ. ಎಶ್ಟೊ ಬಾರಿ ಮಾಹಿತಿ ಇನ್ನೂ ಪರಿಪೂರ‍್ಣವಲ್ಲ ಎಂಬ ಸ್ತಿತಿ ಉಳಿದೆ ಉಳಿಯುತ್ತಿರುತ್ತದೆ. ಅಕ್ಕಮಹಾದೇವಿಯಂತ ಬರಹಗಾರರನ್ನು ಓದಿದಾಗ, ಊರೂರುಗಳಲ್ಲಿ ಕಾಣುವ ಹಲವು ಮಾತಿನ ಚತುರರನ್ನು ಕಂಡಾಗ ಈ ಪರಿಪೂರ‍್ಣವಾದ ವಾಕ್ಯ ಎಂಬುದು ಸಮಸ್ಯೆ ಎಂಬುದು ತಿಳಿಯದಿರದು.

ಹಾಗಾದರೆ, ವಾಕ್ಯ ಎಂಬುದನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಬೇರೆ ದಾರಿಗಳೇನಾದರೂ ಇವೆಯೆ ಎಂಬುದನ್ನು ನೋಡೋಣ. ಬಾಶಾವಿಗ್ನಾನದಲ್ಲಿ ಪೂರ‍್ಣ ಕ್ರಿಯಾಪದ ಎಂಬ ಪಾರಿಬಾಶಿಕವನ್ನು ಕಾಣುತ್ತೇವೆ. ಅಂದರೆ, ‘ಹೋಗು’ ಎಂಬುದು ಒಂದು ಕ್ರಿಯಾಪದ. ಈ ಕ್ರಿಯಾಪದಕ್ಕೆ ಕನ್ನಡದಲ್ಲಿ ಹಲವಾರು ಪ್ರತ್ಯಯಗಳು ಬಂದು ಸೇರುತ್ತವೆ ಮತ್ತು ಆ ಮೂಲಕ ಒಂದು ಕ್ರಿಯಾಪದದ ಹಲವು ರೂಪಗಳನ್ನು ಅದು ರೂಪಿಸುತ್ತದೆ. ಇವುಗಳಲ್ಲಿ ಮುಕ್ಯವಾದವುಗಳು ಪುರುಶ, ಕಾಲ, ಲಿಂಗ-ವಚನ ಎಂಬ ವ್ಯಾಕರಣ ವಿಚಾರಗಳನ್ನು ವ್ಯಕ್ತಪಡಿಸುವ ಪ್ರತ್ಯಯಗಳು. ಈ ಪ್ರತ್ಯಯಗಳು ‘ಹೋಗು’ ಎಂಬ ಕ್ರಿಯಾಪದದ ಮೇಲೆ ಸೇರಿದ ನಂತರ ಆಗಿರುವ ವಿವಿದ ರೂಪಗಳನ್ನು ಇಲ್ಲಿ ಕಾಣಬಹುದು.

ಹೋಗು+-ದ್-+ಅನು
ಕ್ರಿಯಾಪದ+ಬೂತಕಾಲ ಪ್ರತ್ಯಯ+ ಪ್ರತಮ ಪರುಶ ಏಕವಚನ ಪುಲ್ಲಿಂಗ
ಹೋಗು+-ದ್-+ಅಳು
ಕ್ರಿಯಾಪದ+ಬೂತಕಾಲ ಪ್ರತ್ಯಯ+ ಪ್ರತಮ ಪರುಶ ಏಕವಚನ ಸ್ತ್ರೀಲಿಂಗ
ಹೋಗು+-ದ್-+ಇತು
ಕ್ರಿಯಾಪದ+ಬೂತಕಾಲ ಪ್ರತ್ಯಯ+ ಪ್ರತಮ ಪರುಶ ಏಕವಚನ ನಪುಲಿಂಗ
ಹೋಗು+-ದ್-+ಅರು
ಕ್ರಿಯಾಪದ+ಬೂತಕಾಲ ಪ್ರತ್ಯಯ+ ಪ್ರತಮ ಪರುಶ ಬಹುವಚನ ಮಾನವ ಲಿಂಗ (ಪುಲ್ಲಿಂಗ ಮತ್ತು ಸ್ತ್ರೀಲಿಂಗ)
ಹೋಗು+-ದ್-+ಅವು
ಕ್ರಿಯಾಪದ+ಬೂತಕಾಲ ಪ್ರತ್ಯಯ+ ಪ್ರತಮ ಪರುಶ ಬಹುವಚನ ನಪುಂಸಕ ಲಿಂಗ

ಈ ಮೇಲೆ ಕೊಟ್ಟಿರುವ ಅಯ್ದೂ ವಾಕ್ಯಗಳಲ್ಲಿ ‘ಹೋಗು’ ಎಂಬ ಕ್ರಿಯಾಪದದ ರೂಪವು ವಿಬಿನ್ನವಾಗಿ ಬಳಕೆಯಾಗಿದೆ. ಅಂದರೆ, ‘ಹೋಗು’ ಎಂಬ ರೂಪ ‘ಹೋದನು’, ‘ಹೋದಳು’, ‘ಹೋಯಿತು’, ‘ಹೋದರು’ ಮತ್ತು ‘ಹೋದವು’ ಎಂಬ ವಿಬಿನ್ನ ರೂಪಗಳನ್ನು ಪಡೆದುಕೊಂಡಿದೆ. ‘ಹೋಗು’ ಎಂಬುದು ಕ್ರಿಯಾಪದ ರೂಪ. ಉಳಿದುವೆಲ್ಲ ಆ ಕ್ರಿಯಾಪದದ ವಿವಿದ ರೂಪಗಳು, ರೂಪಾವಳಿಗಳು.

ಹೀಗೆಯೆ ಬವಿಶತ್ತು, ವರ‍್ತಮಾನ ಕಾಲಗಳಲ್ಲಿ ಮತ್ತೆ ಬಿನ್ನ ರೂಪಗಳು ಬಳಕೆಯಾಗುತ್ತವೆ.

ಹೀಗೆ ಕಾಲ, ಲಿಂಗ-ವಚನ ರೂಪಗಳನ್ನು ಪಡೆದುಕೊಂಡು ಬರುವ ರೂಪಗಳನ್ನು ಪೂರ‍್ಣ ಕ್ರಿಯಾಪದ ಎಂದು ಕರೆಯಲಾಗುತ್ತದೆ. ಈ ರೂಪಗಳು ವಾಕ್ಯದಲ್ಲಿ ಬಳಕೆಯಾದಾಗ ವಾಕ್ಯದಲ್ಲಿ ಕಾಲ, ಲಿಂಗ-ವಚನ ಇಂತಾ ಸಾಕಶ್ಟು ವ್ಯಾಕರಣ ವಿಚಾರಗಳು ಗೊತ್ತಾಗುತ್ತವೆ. ಹಾಗಾಗಿ ಇವುಗಳನ್ನು ಪೂರ‍್ಣ ಕ್ರಿಯಾಪದ ಎಂದು ಕರೆಯಲಾಗುತ್ತದೆ. ಇಂತಾ ಪೂರ‍್ಣ ಕ್ರಿಯಾಪದವು ಬಳಕೆಯಾದಲ್ಲಿ ಒಂದು ವಾಕ್ಯ ಎಂದು ಗುರುತಿಸಬಹುದು. ಕೆಳಗಿನ ಒಂದೆರಡು ವಾಕ್ಯಗಳನ್ನು ಗಮನಿಸಿ,

ಅವಳು ಮನೆಗೆ ಹೋದಳು
ಅವನು ಮನೆಗೆ ಹೋದನು
ಅದು ಮನೆಗೆ ಹೋಯಿತು
ಅವರು ಮನೆಗೆ ಹೋದರು
ಅವು ಮನೆಗೆ ಹೋದವು

ಇವುಗಳನ್ನು ವಾಕ್ಯ ಎಂದು ಪರಿಗಣಿಸಲಾಗುವುದು. ಸಂಕತನವನ್ನು, ಮಾತುಕತೆಯನ್ನು ಗಮನಿಸುವಾಗ ಈ ರೀತಿಯಲ್ಲಿ ಸ್ಪಶ್ಟವಾಗಿ ವಾಕ್ಯ ಎಂದು ಹೇಳುವುದು ಕಶ್ಟವಾಗಬಹುದು. ಇದನ್ನು ಬೇರೆ ಕಡೆ ಮಾತಿಗೆತ್ತಿಕೊಳ್ಳಬಹುದು.

ಸರಿ, ಈಗ ಪೂರ‍್ಣ ಕ್ರಿಯಾಪದ ಎಂಬ ಪರಿಕಲ್ಪನೆಯನ್ನು ಮಾತಾಡುವುದಾದರೆ, ಅಪೂರ‍್ಣ ಕ್ರಿಯಾಪದ ಎಂಬ ಪರಿಕಲ್ಪನೆಯೂ ಇರಬಹುದೆ ಎಂಬ ಅನುಮಾನ ಬರಬಹುದು. ನಿಜ. ವಾಕ್ಯವೊಂದು ಮುಗಿದಿಲ್ಲ ಎನ್ನುವ ಅನುಮಾನವನ್ನು ಕೊಡುವಂತ ರಚನೆಗಳನ್ನು ನಾವು ಬಾಶೆಯಲ್ಲಿ ಕಾಣಬಹುದು. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ

ಅವಳು ಕಚೇರಿಗೆ ಹೋಗಿ
ಅವನು ಮನೆಗೆ ಹೋಗಿ

ಈ ವಾಕ್ಯಗಳನ್ನು ಗಮನಿಸಿದಾಗ ಸಹಜವಾಗಿ ಈ ವಾಕ್ಯ ಮುಗಿದಿಲ್ಲ ಮತ್ತು ಇನ್ನೂ ಏನೊ ಕೆಲಸ ಇದೆ ಎಂಬುದು ಗಮನಕ್ಕೆ ಬರುತ್ತದೆ. ಈ ಮೇಲಿನ ಎರಡೂ ವಾಕ್ಯಗಳಲ್ಲಿ ‘ಹೋಗು’ ಎಂಬ ಕ್ರಿಯಾಪದ ಬಂದಿದೆ. ಆದರೆ ಇಲ್ಲಿ ಈ ಮೇಲೆ ನೋಡಿದಂತ ವಿವಿದ ರೂಪಗಳಲ್ಲದೆ ಬಿನ್ನವಾದ ಇನ್ನೊಂದು ರೂಪದಲ್ಲಿ ಬಂದಿದೆ. ಈ ‘ಹೋಗಿ’ ಎಂಬ ರೂಪದಲ್ಲಿ ಯಾವ ಪ್ರತ್ಯಯ ಸೇರಿದೆ ಎಂಬುದನ್ನು ಗಮನಿಸೋಣ. ‘ಹೋಗಿ’ ಇದರ ರಚನೆಯು ಈ ಕೆಳಗಿನಂತಿದೆ, ಹೋಗು+-ಇ ‘-ಇ’ ಎಂಬ ನ್ಯೂನರೂಪವೊಂದು ‘ಹೋಗು’ ಎಂಬ ಕ್ರಿಯಾಪದದ ಮೇಲೆ ಬಂದು ಅಪೂರ‍್ಣ ಕ್ರಿಯಾಪದವನ್ನು ಮಾಡುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಮೇಲೆ ಪೂರ‍್ಣ ಕ್ರಿಯಾಪದಗಳ ರೂಪಗಳನ್ನು ಗಮನಿಸಿದಾಗ ಅಲ್ಲಿ ಕಾಲ, ಪುರುಶ-ಲಿಂಗ ಮತ್ತು ವಚನ ಮೊದಲಾದ ಗಟಕಗಳು ಆ ಕ್ರಿಯಾಪದದ ಮೇಲೆ ಬಂದು ಸೇರಿದ್ದವು. ಆದರೆ, ಈಗ ನೋಡುತ್ತಿರುವ ಅಪೂರ‍್ಣ ಕ್ರಿಯಾಪದದ ಮೇಲೆ ಇವಾವೂ ಬಂದು ಸೇರಿಲ್ಲ. ಹಾಗಾಗಿ ಇದು ಅಪೂರ‍್ಣ ಕ್ರಿಯಾಪದ. ಹೀಗೆ ಅಪೂರ‍್ಣ ಕ್ರಿಯಾಪದ ಬಂದಿರುವಲ್ಲಿ ಅದು ವಾಕ್ಯವೊಂದರ ಕೊನೆಯನ್ನು ಸೂಚಿಸುವುದಿಲ್ಲ, ಪೂರ‍್ಣ ಕ್ರಿಯಾಪದ ಬಂದಲ್ಲಿ ಅದು ವಾಕ್ಯವೊಂದರ ಕೊನೆಯನ್ನು ಸೂಚಿಸುತ್ತದೆ. ಹೀಗೆ ಒಂದು ವಾಕ್ಯವನ್ನು ಬಾಶೆಯಲ್ಲಿ ಅರಿತುಕೊಳ್ಳಬಹುದು. ಈ ತಂತ್ರವನ್ನು ತಿಳಿದುಕೊಂಡರೆ, ಆಡುಮಾತಿನಲ್ಲಿಯೂ ಪೂರ‍್ಣ ವಾಕ್ಯಗಳನ್ನು ಗುರುತಿಸುವುದು ತುಂಬಾ ಸರಳವಾಗುತ್ತದೆ.

ಇದು ವಾಕ್ಯವನ್ನು ತಿಳಿದುಕೊಳ್ಳುವುದಕ್ಕೆ ಇರುವ ಒಂದು ಸರಳ ದಾರಿ. ವಾಕ್ಯಕ್ಕೆ ಇನ್ನೂ ಹಲವು ಲಕ್ಶಣಗಳು ಇರುವುದನ್ನು ಮುಂದಿನ ಕೆಲವು ಬರಹಗಳಲ್ಲಿ ನೋಡುವೆವು. ವಾಕ್ಯವೆಂಬುದು ಈ ಮೇಲೆ ಹೇಳಿದಂತೆ ಹಲವು ಚಳಕಗಳನ್ನು ಒಳಗೊಂಡಿರುವ ರಚನೆ. ಇದರಲ್ಲಿ ವ್ಯಾಕರಣದ ಹಲವಾರು ಬಗೆಯ ರಚನೆಗಳು ಬರುತ್ತವೆ. ಇವೆಲ್ಲವನ್ನು ಗಮನಿಸಿದಾಗ ವಾಕ್ಯವೆಂಬುದೊಂದು ಮಾಯಾಜಾಲದ ಸಂಕಿರ‍್ಣ ರಚನೆ ಎಂಬುದು ಗೊತ್ತಾಗುತ್ತದೆ.

ಇದರ ಕೆಲವು ಅಂಶಗಳನ್ನು ಮುಂದಿನ ಕೆಲವು ಬರವಣಿಗೆಗಳಲ್ಲಿ ಪರಿಚಯ ಮಾಡಿಕೊಳ್ಳೋಣ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...