ಕಳೆದೊಂದು ದಶಕದಿಂದ ಲಕ್ಕೂರು ಆನಂದ ತನ್ನ ಕಾವ್ಯ ಪ್ರಯೋಗದಲ್ಲಿ ನಡೆಸುತ್ತಾ ಬಂದಿರುವ ಅನುಸಂಧಾನವನ್ನು ಗಮನಿಸಿದಾಗ ಕಾವ್ಯವನ್ನು ಮನಸ್ಸಿಗೆ ಹಚ್ಚಿಕೊಂಡಿರುವ ರೀತಿ, ಅದರೊಳಗೆ ತನ್ನ ಒಳಗನ್ನು, ಆ ಒಳಗಿನ ತುಂಬಾ ತುಂಬಿಕೊಂಡಿರುವ ಹೊರಗನ್ನು ತೋಡಿಕೊಳ್ಳುವ ಕುಲಾತಿ, ಕಣ್ಣೆದುರು ಕಂಡರೂ ಕೈಗೆಟುಕದ ಪ್ರೀತಿ, ಮರೆಯಬೇಕೆಂದರೂ ಮರೆಯಾಗದೆ ಎದುರಾಗುವ ಜಾತಿ ಮುಂತಾದವುಗಳನ್ನು ’ಉರಿವ ಏಕಾಂತ ದೀಪ’ ಕವನ ಸಂಕಲನದಲ್ಲಿ ಕಾಣಬಹುದು.
ತರುಣ ತಲೆಮಾರಿನ ಕವಿಗಳ ಇರುವ ಸವಾಲುಗಳು ಸುಲಭವಲ್ಲ. 'ನಮಗೆ ಏಟು ಬಿದ್ದಿರುವುದು ಶತ್ರುಗಳಿಂದ ಮಾತ್ರವಲ್ಲ, ಪ್ರಾಣ ಮಿತ್ರರಿಂದ ಕೂಡ, ಹಾಗಾಗಿ ನನ್ನ ರೊಟ್ಟಿಯ ರುಚಿ ಮತ್ತಷ್ಟು ಕಹಿ' ಎಂದ ನೆರೂದನ ಎದುರು ಮೂರ್ತವಾದೊಂದು ದಮನಕಾರಿ ವ್ಯವಸ್ಥೆಯಿತ್ತು. ಇವೊತ್ತು ಹಾಗೆ ಕಣ್ಣಳತೆಯೊಳಗಿಲ್ಲದ ಬೇಟೆಗಾರ ಜಾಲ ಬಲೆಯನ್ನೂ ಒಡ್ಡಿದೆ, ಬಾಣಗಳಿಂದಲೂ ಬೆನ್ನತ್ತಿದೆ. ಮಾನವೀಯತೆಯೆಂಬುದು ನಿರಂತರವಾಗಿ ಗಾಯಗೊಳ್ಳುತ್ತಿದೆ. ಈ ಗಾಯಗಳಿಗೆ ಮದ್ದು ಅರೆಯುವವರಂತೆ ಅವಡುಗಚ್ಚಿರುವ ಲಕ್ಕೂರು ಆನಂದ ಅವರ ಕವಿತೆಗಳಲ್ಲಿ ಜೀವನಪ್ರೀತಿ ಮತ್ತು ಕವಿತಾ ಶಕ್ತಿ ಇಷ್ಟೊಟ್ಟಿಗೆ ಕಾವು ಕೂತಿರುವುದರಿಂದಲೇ ಈ ಮೆಚ್ಚುಗೆ ಮತ್ತು ಹಾರೈಕೆ ಕವಿಗೆ ಸಲ್ಲುತ್ತಿವೆ.
ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾದ ಅವರು ಸೃಜನಶೀಲ ಬರಹಗಾರ. ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಕೂರು ಆನಂದ ಅವರು ಇದುವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ. ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅತ್ಯುತ್ತಮ ಆತ್ಮ ...
READ MORE