
ಮೈಸೂರು ಹುಲಿ ಎಂದೇ ಐತಿಹಾಸಿಕವಾಗಿ ಖ್ಯಾತಿ ಪಡೆದಿದ್ದ ಟಿಪ್ಪು ಸುಲ್ತಾನ್ ಆಡಳಿತ ಕುರಿತು ವಿಶೇಷವಾಗಿ ಆತ ಹಿಂದೂ ವಿರೋಧಿ-ಪರ ಎಂಬ ವಿಷಯ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ತಮ್ಮ ವಾದಗಳಿಗೆ ಐತಿಹಾಸಿಕ ಸಮರ್ಥನೆಗಳನ್ನೂ ಪೂರೈಸಿದ್ದಾರೆ. ಈ ಮಧ್ಯೆ, ಟಿಪ್ಪು ಸುಲ್ತಾನ್ ಕೋಮು ಸೌಹಾರ್ದತೆಯನ್ನು ಕಾಯ್ದುಕೊಂಡಿದ್ದ ಎಂಬುದರ ಸಮರ್ಥನೆಯಾಗಿ ವಿವಿಧ ಲೇಖಕರು ಬರೆದ ಬರಹಗಳನ್ನು ಲೇಖಕ ಕುಮಾರ್ ಬುರಡಿಕಟ್ಟಿ ಅವರು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಹುಲಿಯ ಜಾಡು ಹಿಡಿದು. ಕೋಮು ಸಾಮರಸ್ಯವನ್ನು ಕದಡುವ ಒಂದೇ ಉದ್ದೇಶದಿಂದ ಕೆಲವು ಕೋಮುವಾದಿಗಳು ಟಿಪ್ಪು ಕುರಿತು ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವುಗಳಿಗೆ ಐತಿಹಾಸಿಕ ಪುರಾವೆಗಳಿಲ್ಲ ಎಂಬ ನಿಟ್ಟಿನಲ್ಲಿ ವಿಚಾರಗಳು ಮೈದಳೆದಿರುವ ಇಲ್ಲಿಯ ಲೇಖನಗಳು, ಐತಿಹಾಸಿಕವಾಗಿ ಸಾಕಷ್ಟು ಸಮರ್ಥನೆಗಳನ್ನು ಒದಗಿಸುತ್ತವೆ. ಟಿಪ್ಪು ಕುರಿತ ಸಂಶೋಧನೆಯ ಅಧ್ಯಯನಗಳಿಗೆ ಈ ಗ್ರಂಥವು ಉತ್ತಮ ಆಕರವಾಗಲಿದೆ.
©2025 Book Brahma Private Limited.