
ಹಾಲುಮತ ಸಂಸ್ಕೃತಿಯ ಪಾತಳಿಯನ್ನು ಲೇಖಕ ಚನ್ನಪ್ಪ ಕಟ್ಟಿ ಅವರ ‘ಸಿತಾಳ ಬಿಂದಿಗೆ’ ಕೃತಿಯು ಕಟ್ಟಿಕೊಡುತ್ತದೆ. ಅಧ್ಯಯನಾತ್ಮಕ ಲೇಖನಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿನ ಒಟ್ಟು ಲೇಖನಗಳನ್ನು ಮೂರು ಪ್ರಕಾರಗಳಲ್ಲಿ ಗುರುತಿಸಬಹುದು. ಒಂದನೇಯದ್ದು ಹಾಲುಮತ ದೈವಗಳು. ಬೀರಪ್ಪ, ರೇವಣಸಿದ್ಧ, ಹುಲ್ಲಪ್ಪ ಚಂದಪ್ಪ, ಅಮೋಘಸಿದ್ಧ ಹೀಗೆ ಮುಂತಾದ ದೈವಗಳ ಹಾಗೂ ಅವುಗಳ ಇತಿ ವೃತ್ತಗಳ ಕುರಿತ ಲೇಖನಗಳು ಇವೆ. ಇನ್ನೊಂದು ಭಾಗದಲ್ಲಿ ಹಾಲುಮತ ಕ್ಷೇತ್ರಗಳ ಕುರಿತು ಲೇಖನಗಳಿವೆ. ಮೂರನೇಯದು ಹಾಲುಮತ ಆಚರಣೆಗಳು, ಸಂಪ್ರದಾಯಗಳು, ಪಾಲಕಿ ಉತ್ಸವಗಳು ಆಚರಣೆಗಳ ಕುರಿತ ವಿಸ್ತೃತ ಲೇಖನಗಳು ಇವೆ. ಹಾಗೇಯೆ ಇನ್ನೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡಿದರೆ ಒಟ್ಟು ಹದಿನಾಲ್ಕು ಲೇಖನಗಳ ಪೈಕಿ ಆರು ಲೇಖನಗಳು ಅಮೋಘ ಸಿದ್ದ ಪರಂಪರೆಗೆ ಸಂಬಂಧಿಸಿದ್ದಾಗಿವೆ. ಬಾಕಿ ಉಳಿದ ಲೇಖನಗಳು ಹಾಲುಮತ ಕ್ಕೆ ಸಂಬಂಧಿಸಿದ್ದಾಗಿವೆ. ಸುಮಾರು 20 ವರ್ಷಗಳ ಹಿಂದೆ ಬರೆದ ಲೇಖನಗಳು ಸೇರಿದಂತೆ ಈ ಕೃತಿಗಾಗಿಯೇ ರಚಿಸಿದ ಲೇಖನಗಳು ಸೇರಿ ಈ ಕೃತಿ ಅದ್ಬುತವಾಗಿ ಮೂಡಿ ಬಂದಿದೆ. ಬೀರಪ್ಪ ಚರಿತ್ರೆಯನ್ನು ಚಾರಿತ್ರಿಕ ನೆಲೆಯಲ್ಲಿ ಗ್ರಹಿಸುವುದು ಕಷ್ಟ ಹೀಗಾಗಿ ಸಾಂಸ್ಕೃತಿಕ ನೆಲೆಯಲ್ಲಿ ಗ್ರಹಿಸುವುದು ಉತ್ತಮ ಎಂಬ ಅಂಶ ಈ ಕೃತಿ ಚರ್ಚಿಸುತ್ತದೆ. ಹಾಲುಮತ ಸಮುದಾಯದ ಉಗಮದೊಂದಿಗೆ ಬೀರಪ್ಪದೇವರ ಉಗಮವಾಗಿದೆ ಆದರೆ ಅವರನ್ನು ಚಾರಿತ್ರಿಕ ವ್ಯಕ್ತಿಯನ್ನಾಗಿ ಚಿತ್ರಿಸುವಲ್ಲಿ ಎಡವಿ ದೈವೀಕರಿಸಿದ ಪ್ರಯುಕ್ತ ಇವತ್ತು ದೈವವಾಗಿ, ಸಾಂಸ್ಕೃತಿಕ ನಾಯಕರಾಗಿ ಬಿಂಬಿತವಾಗಿರುವ ಅಂಶವನ್ನು ಸಂಶೋಧಕರು ಬಹಳ ವಾಸ್ತವಿಕ ಹಾಗೂ ಸಂಶೋಧನಾ ನೆಲೆಗಟ್ಟಿನಲ್ಲಿ ಬೀರಪ್ಪನನ್ನು ಚಿತ್ರಿಸಿದ್ದು ಕಂಡುಬರುತ್ತದೆ.
©2025 Book Brahma Private Limited.