
ಸೃಜನಶೀಲ ಮತ್ತು ಸಂಶೋಧನಾ ಬರವಣಿಗೆಯೆರಡರಲ್ಲೂ ನುರಿತ ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಸಂಪಾದಕತ್ವದಲ್ಲಿ ಬಂದಿರುವ ಕೃತಿ ಇದು. ವಿಚಾರಸಂಕಿರಣದಲ್ಲಿ ಮಂಡಿತ ಪ್ರಬಂಧಗಳ ಈ ಸಂಪುಟ ಮಹತ್ವದ ಆಕರಗ್ರಂಥವಾಗಬಲ್ಲ ಸ್ವರೂಪದಲ್ಲಿದೆ. ಕನ್ನಡ ಸಾಹಿತ್ಯದಲ್ಲಿ ವಸಾಹತುಶಾಹಿ ಹೊತ್ತನ್ನು ಪ್ರತಿಭಟಿಸುವ ದನಿಗಳು ಹೇಗೆಲ್ಲಾ ವ್ಯಕ್ತವಾಗಿವೆ ಎಂಬುದಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಈ ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಇತಿಹಾಸಕಾರ ಪ್ರೊ. ಎಂ. ಕೊಟ್ರೇಶ್, ಕನ್ನಡ ಶಿಷ್ಟ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಪ್ರಕಾರಗಳಾದ ಕಥೆ, ಕಾದಂಬರಿ, ಕಾವ್ಯ, ನಾಟಕ, ಹಾಡು, ಲಾವಣಿ, ಗೀಗೀಪದ, ಕಥನಗೀತೆ ಮುಂತಾದವುಗಳನ್ನು ಕೇಂದ್ರವಾಗಿಸಿಕೊಂಡುಬರೆದಿರುವ ಹಲವಾರು ಲೇಖನಗಳು ಬಹಳ ಗಂಭೀರವಾದ ಮತ್ತು ಮಹತ್ವಪೂರ್ಣವಾದವುಗಳಾಗಿ ಕಂಡುಬರುತ್ತವೆ. ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಸ್ವಾಭಿಮಾನದ ಉಳಿವಿಗಾಗಿ ನಡೆದ ಹೋರಾಟದ ಅನನ್ಯತೆಯನ್ನು ಇಂದಿನ ಯುವಪೀಳಿಗೆ ಪರಿಭಾವಿಸುವ ಕ್ರಮವನ್ನು ಈ ಕೃತಿ ಮಂಡಿಸುತ್ತದೆ ಎಂದಿದ್ದಾರೆ.
©2025 Book Brahma Private Limited.