ಮಾದಿಗತತ್ವ

Author : ಬಿ. ಸುಜ್ಞಾನಮೂರ್ತಿ

Pages 40

₹ 60.00




Year of Publication: 2019
Published by: ಪರಾಗ ಪುಸ್ತಕ
Address: #112/2, 22ನೇ ಕ್ರಾಸ್, ಕೃಷ್ಣಯ್ಯ ಲೇಔಟ್, ಇಟ್ಟಮಡು, ಬಿ.ಎಸ್.ಕೆ, 3ನೇ ಹಂತ, ಬೆಂಗಳೂರು- 560085

Synopsys

‘ಮಾದಿಗತತ್ವ’ ಸಾಮಾಜಿಕ, ಆರ್ಥಿಕ, ವಿಶ್ಲೇಷಣೆ ಮೂಲ ಕೃತಿ ತೆಲುಗಿನಲ್ಲಿ ಪ್ರೊ. ಕಂಚ ಐಲಯ್ಯ ಶೆಫರ್ಡ್ ಅವರು ರಚಿಸಿದ್ದು, ಬಿ. ಸುಜ್ಞಾನಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದಲ್ಲಿ ದಲಿತ ಹೋರಾಟದ ಭಾಗವಾಗಿ ದಲಿತ ಸಾಹಿತ್ಯ ರಚನೆಯಾಯಿತು. ಇದರಲ್ಲಿ ಕಾವ್ಯ ಮತ್ತು ಕಥೆ, ಕಾದಂಬರಿಗಳು ದೊಡ್ಡ ಪ್ರಮಾಣದಲ್ಲಿ ಬಂದವು. ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಸಾಹಿತ್ಯ ಬಂದಿದೆ. ಆದರೆ ಕನ್ನಡದ ದಲಿತ ಬರಹಗಾರರು ವೈಚಾರಿಕ ಸಾಹಿತ್ಯ ನಿರ್ಮಾಣಕ್ಕೆ ಪ್ರಧಾನ ಗಮನ ಕೊಟ್ಟಂತೆ ಕಾಣುವುದಿಲ್ಲ. ಆದರೆ ತೆಲುಗಿನಲ್ಲಿ ವೈಚಾರಿಕ ಸಾಹಿತ್ಯದ್ದೇ ಒಂದು ವಿಶಿಷ್ಟ ಪರಂಪರೆ ಇದೆ. ತೆಲುಗಿನಲ್ಲಿ ದಲಿತ ಸಮಸ್ಯೆಯನ್ನು ಸಾಮಾಜಿಕ ನೆಲೆಯ ವಿಶಿಷ್ಟತೆಗೆ ಅನುಗುಣವಾಗಿ ಬೇರ್ಪಡಿಸಿ ನೋಡುವ ಧೋರಣೆ ಇದೆ. ಅಂದರೆ ದಲಿತ ಸಮಸ್ಯೆಯನ್ನು ಇಡಿಯಾಗಿ ನೋಡುವ ಬದಲು, ಹೊಲೆಯರ ಸಮಸ್ಯೆ, ಮಾದಿಗರ ಸಮಸ್ಯೆ ಈ ರೀತಿಯಲ್ಲಿ ನಿರ್ದಿಷ್ಟವಾಗಿ ಮತ್ತು ವಿಶಿಷ್ಟವಾಗಿ ಗ್ರಹಿಸಿ ಚರ್ಚಿಸುವ ಪ್ರವೃತ್ತಿ ತೆಲುಗಿನ ವೈಚಾರಿಕ ಸಾಹಿತ್ಯದಲ್ಲಿ ನಡೆದಿದೆ. ಈ ಕೃತಿಯಲ್ಲಿ ಲೇಖಕರು ಮಾದಿಗರ ಶ್ರಮತತ್ವ, ಗ್ರಾಮಶುಭ್ರತೆ, ದನದ ಮಾಂಸ ತಿನ್ನುವುದು, ರುಚಿ ಸಿದ್ಧಾಂತ, ಚರ್ಮ ಕೈಗಾರಿಕೆ, ತಮಟೆ ಈ ವಿಷಯಗಳನ್ನು ಕುರಿತು ಆಳವಾಗಿ ಮತ್ತು ಸಮಗ್ರವಾಗಿ ಚರ್ಚಿಸಿದ್ದಾರೆ.

ಮಾದಿಗರು ತಮಟೆ ಬಾರಿಸುವುದನ್ನು ಲೇಖಕರು ಅಪಮಾನದ ಸಂಗತಿ ಎಂದು ಸರಳೀಕರಿಸಿಲ್ಲ. ಬದಲಿಗೆ ಅದನ್ನು ವಿನೋದ ತತ್ವ ಎಂದು ಕರೆಯುವುದರ ಮೂಲಕ ಅದಕ್ಕೆ ಒಂದು ವಿಶಿಷ್ಟವಾದ ಸಾಮಾಜಿಕ ಹಾಗೂ ಕಲಾತ್ಮಕ ಮಾನ್ಯತೆಯನ್ನು ನೀಡಿದ್ದಾರೆ. ಇದೊಂದು ವಿಶಿಷ್ಟವಾದ ಧೋರಣೆ ಈ ಕೃತಿಯನ್ನು ಮೂಲ ಕೃತಿಯಷ್ಟೇ ಸೂಕ್ಷ್ಮವಾಗಿ ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಬಿ. ಸುಜ್ಞಾನಮೂರ್ತಿ
(06 July 1960)

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...

READ MORE

Reviews

ಸುಜ್ಞಾನ ಮೂರ್ತಿ ಕೃತಿಗಳ ಪುಸ್ತಕ ವಿಮರ್ಶೆ- ಹೊಸ ಮನುಷ್ಯ

ತನ್ನ ಪ್ರಖರ ವೈಚಾರಿಕ ಚಿಂತನೆ ಮತ್ತು ಸ್ಪಷ್ಟ ನಿಲುವು ಹಾಗೂ ಅದರ ಸರಳ -ನೇರ ನಿರಪಣೆ ಗೆ ಹೆಸರಾದವರು ಚಿಂತಕ ಪ್ರೊ. ಕಂಚ ಐಲಯ್ಯ ಶೆಫರ್ಡ್ ಅವರು. 'ನಾನೇಕೆ ಹಿಂದೂ ಅಲ್ಲ' ಕೃತಿಯ ಮೂಲಕ ಗಮನ ಸೆಳೆದ ಕಂಚ ಐಲಯ್ಯ ಅವರು ತೆಲುಗಿನಲ್ಲಿ ರಚಿಸಿದ ಐದು ವೈಚಾರಿಕ ಕಿರು ಪುಸ್ತಿಕೆಗಳನ್ನು ಬಿ. ಸುಜ್ಞಾನಮೂರ್ತಿ ಅವರು ಕನ್ನಡೀಕರಿಸಿದ್ದಾರೆ. ತಮ್ಮ ಟೈಟಲ್‌ಗಳ ಮೂಲಕವೇ ಗಮನ ಸೆಳೆಯುತ ಈ ಐದು ಕೃತಿಗಳು ಒಂದು ಮತ್ತೊಂದಕ್ಕೆ ಪೂರಕವಾಗಿರುವ ಹಾಗೆಯೇ ಸ್ವತಂತ್ರವಾಗಿಯೂ ತನ್ನ ಅಸ್ತಿತ್ವ ಸಾಬೀತು ಪಡಿಸುತ್ತವೆ. 

 ಹಿಂದೂ ಧರ್ಮದಲ್ಲಿ ಬೌದ್ಧಿಕ ಗುತ್ತಿಗೆ ಪಡೆದಿರುವವರನ್ನು 'ಬ್ರಾಹ್ಮಣಿಜಂ' ಎಂಬ ಪದದ ಮೂಲಕ ಕಂಚ ಐಲಯ್ಯ ಅವರು ಗುರುತಿಸುತ್ತಾರೆ. ಕಂಚ ಐಲಯ್ಯ ಅವರಿಗೆ ಬ್ರಾಹ್ಮಣ್ಯ ಅನ್ನುವುದು ಕೇವಲ ಟೀಕಿಸುವುದಕ್ಕೆ -ತರಾಟೆಗೆ ತೆಗೆದುಕೊಳ್ಳುವುದಕ್ಕಾಗಿ ಮಾತ್ರ ಇರುವ ಸಂಗತಿಯಲ್ಲ. ಅದಕ್ಕೊಂದು ತಾತ್ವಿಕತೆಯಿದೆ. ಆ ತಾತ್ವಿಕತೆಯು ಮೆದುಳಿನಂತೆ ನಿರ್ದೇಶನ ಮಾಡುತ್ತ ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸುವುದರ ಜೊತೆಗೆ ಶೋಷಕ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂಬ ನಿಲುವು ಈ ಪುಸ್ತಕಗಳಲ್ಲಿದೆ. ಹೀಗಾಗಿ ಮೇಲ್ನೋಟಕ್ಕೆ ಬ್ರಾಹ್ಮಣ ವಿರೋಧಿ ಎಂಬಂತೆ ಭಾಸವಾಗುವ ಈ ಕೃತಿಗಳ ವಿಚಾರಗಳು ಆಳದಲ್ಲಿ ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಅಥವಾ ಟೀಕೆಗಾಗಿ ಟಿಪ್ಪಣಿ ಮಾಡುವ ಜಾಯಮಾನದ ಬರಹಗಳಲ್ಲ. ಐತಿಹಾಸಿಕ ವಿವರಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಆಳವಾದ ಚಿಂತನೆಯ ಜೊತೆಗೆ ವಿಶಿಷ್ಟ ತಾತ್ವಿಕತೆ ಕಟ್ಟಿಕೊಡುತ್ತವೆ. ಹಾಗೆಯೇ ತರ್ಕಬದ್ದ ಹಾಗೂ ವೈಜ್ಞಾನಿಕ ನೋಟಕ್ರಮ ಈ ಪುಸ್ತಕಗಳ ಒಂದು ವಿಶೇಷ ಅಂಶ. ಈ ಪುಸ್ತಕಗಳ ಬರಹಗಳು ಭಾವನಾತ್ಮಕ ಪ್ರತಿಕ್ರಿಯೆಗಳಲ್ಲ. ಹಾಗಾಗದಂತೆ ಲೇಖಕರು ವಹಿಸಿರುವ ಶ್ರಮ-ಪರಿಶ್ರಮ ಸಷ್ಟವಾಗಿ ಎದ್ದು ಕಾಣಿಸುತ್ತದೆ.

ಈ ಪುಸ್ತಕದಲ್ಲಿ ಚರ್ಚಿತವಾದ ವಿಷಯ-ವಿಚಾರಗಳು ಶುಷ್ಕ ಅಕಾಡೆಮಿಕ್ ಜ್ಞಾನದ ಬೌದ್ಧಿಕ ಕಸರತ್ತುಗಳಾಗದಂತೆಯೂ ಲೇಖಕರು ಎಚ್ಚರ ವಹಿಸಿದ್ದಾರೆ. ಬ್ರಾಹ್ಮಣ ಕ್ಷತ್ರಿಯ ವೈಶ್ಯ 'ದ್ವಿಜರು ಹಿಂದೂ ಧರ್ಮದ ಆಧ್ಯಾತ್ಮಿಕ ಸಮಾನತೆಯನ್ನು ಶೂದ್ರರಿಗೆ ನಿರಾಕರಿಸುವ ಮೂಲಕ ನಿಮಿತ್ತ ಮಾತ್ರ ಹಾಜರಿಯನ್ನು ದಾಖಲಿಸಲಾಯಿತು. ಅದರಿಂದ ಆತ್ಮಾಶ್ರಯ ವ್ಯಕ್ತಿತ್ವ ಇಲ್ಲದಂತಾದ ಶೂದ್ರ ಸಮುದಾಯವು ತಾತ್ವಿಕ ವ್ಯಕ್ತಿತ್ವ ಬೆಳೆಸಿಕೊಳ್ಳಲಾಗದಂತೆ ನೋಡಿಕೊಳ್ಳಲಾಯಿತು. 'ದೇವಾಲಯ ಎಂಬುದು ಕೇವಲ ಪ್ರಾರ್ಥನಾ ಸ್ಥಳ ಮಾತ್ರವೇ ಅಲ್ಲ. ಅದು ತಾತ್ತಿಕ ಚರ್ಚೆಗಳಿಗೆ ಕೇಂದ್ರ ಕೂಡ. ಸಾಮಾಜಿಕ, ಆರ್ಥಿಕ, ತಾತ್ವಿಕ ಚರ್ಚೆಗಳಲ್ಲಿ ಕೆಲವು ಸಾಮಾಜಿಕ ವರ್ಗಗಳನ್ನು ಪಾಲ್ಗೊಳ್ಳಲು ಬಿಡದಿದ್ದಾಗ ಆ ಸಮಾಜಗಳು ತಾತ್ವಿಕವಾಗಿ ಏಳು ಬೀಳು ಇಲ್ಲದೆ ಹಾಗೆಯೇ ಇದ್ದು ಬಿಡುತ್ತವೆ' ಎನ್ನುವ ಲೇಖಕರು ಇದು “ಅಸಹಜವಾದ ಜಾತಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಕ್ಕೆ ಅಸಮಾನತೆಯಿಂದ ಕೂಡಿದ ಪ್ರತಿಕೂಲ ತತ್ವ' ಎಂದು ವಿವರಿಸುತ್ತಾರೆ. 

'ದೇಸಿ' ತಾತ್ವಿಕತೆಯನ್ನು ಕಟ್ಟಿಕೊಡುವ ದೃಷ್ಟಿಯಿಂದ ಮಹತ್ವದ್ದಾಗಿರುವ ಪುಸ್ತಕಗಳಿವು. ನೆಲಮೂಲದ ಸ್ಥಳೀಯ ಚಟುವಟಿಕೆ- ಆಚರಣೆ- ಪರಂಪರೆಗಳಿಗೆ ತಾತ್ವಿಕ ಚೌಕಟ್ಟು ಒದಗಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಇಲ್ಲಿ ಬಳಕೆಯಾಗುವ ಭಾಷೆಯು ಲೇಖಕರ ಖಚಿತ ನಿಲುವಿನ ಸೂಚನೆಯಾಗಿದೆ. “ಆಧ್ಯಾತ್ಮಿಕ ಸರ್ವಾಧಿಕಾರಿಗಳು, ಸಾಮಾಜಿಕ ಸ್ಮಗ್ಲರ್‌ಗಳು, ಇಂಟಲೆಕ್ಚುವಲ್‌ ಗೂಂಡಾಗಳು ಮಾತ್ರ ಶೂದ್ರರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯನ್ನು ಅನುಮತಿಸುವುದಿಲ್ಲ' ರೀತಿಯ ವಾಕ್ಯಗಳು ಸ್ಟೇಟ್‌ಮೆಂಟ್‌ಗಳ ತರಹ ಕಾಣಿಸುತ್ತವೆ ಕೇಳಿಸುತ್ತವೆ. ಹಾಗೆ ಅವು ಕಾಣುವುದು ಕತ್ತರಿಸಿ ಹೊರ ತೆಗೆದಾಗ ಮಾತ್ರ, ವೈಚಾರಿಕ ಸ್ಪಷ್ಟತೆಯು ಇಂತಹ ಪದಗಳನ್ನೂ ಅರಗಿಸಿಕೊಳ್ಳುತ್ತದೆ.

ಕಂಚ ಐಲಯ್ಯ ಅವರ ಈ ಪುಸ್ತಕಗಳು ಸಿದ್ಧಮಾದರಿಯ ಪಾಶ್ಚಾತ್ಯ-ಬ್ರಾಹ್ಮಣ ಚರಿತ್ರೆಯ ಮಾದರಿಯಿಂದ ಬಿಡಿಸಿಕೊಂಡು ಕಟ್ಟಿದ ಜಾತಿಕಥನಗಳು. ಕಂಚ ಐಲಯ್ಯ ಅವರ ಒಳನೋಟಗಳು ಗಮನ ಸೆಳೆಯದೇ ಇರಲಾರವು. 'ಶೂದ್ರರ ತಾತ್ವಿಕತೆ ಕೇವಲ ಸೃಜನಾತ್ಮಕವಾದುದೇ ಅಲ್ಲ; ಮಾನವೀಯವಾದದ್ದು, ಸಮಗ್ರವಾದದ್ದು ಕೂಡ', 'ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಗಳಿಸಿಕೊಳ್ಳದೇ ಹೋದದ್ದರಿಂದ ಶೂದ್ರರು ತಾತ್ವಿಕ ವ್ಯಕ್ತಿತ್ವವನ್ನು ಕೂಡ ನಿರ್ಮಿಸಿಕೊಳ್ಳದೇ ಹೋದರು' ಎಂಬ ಖಚಿತತೆ ಕಾಣಬಹುದು. ಈ ಬಗೆಯ ನಿಲುವು ತಳೆಯುವುದಕ್ಕೆ ಲೇಖಕರು ಒಳಗೊಳ್ಳುವ ಚಿಂತನ ಕ್ರಮ ರೂಢಿಸಿಕೊಂಡಿರುವುದು ಕಾರಣ. ಚರಿತ್ರೆ, ಧರ್ಮ, ಆಧ್ಯಾತ್ಮ, ತಾತ್ವಿಕತೆ, ಸಾಮಾಜಿಕ ಸಂಗತಿಗಳನ್ನು ತಮ್ಮ ವಿಚಾರ ಮಂಡಿಸುವುದಕ್ಕೆ ಬಳಸಿಕೊಳ್ಳುವ ಲೇಖಕರ ಕಾಳಜಿ ಸಮ ಸಮಾಜದ ನಿರ್ಮಾಣ ಹಾಗೂ ಶೋಷಕ ವ್ಯವಸ್ಥೆ ನಿರ್ಮೂಲನೆ.

ಹೊಲೆಯ ತತ್ವ ಮತ್ತು ಮಾದಿಗತತ್ವ ಎಂಬ ಎರಡು ಪುಸ್ತಕಗಳು ಸಾಮಾಜಿಕ, ಆರ್ಥಿಕ ವಿಶ್ಲೇಷಣೆಗಳಾಗಿವೆ. ಈ ಎರಡೂ ತತ್ವಗಳಲ್ಲಿದ್ದ ವೈಜ್ಞಾನಿಕ ಜ್ಞಾನದ ಹುಡುಕಾಟ ಮತ್ತು ಅದನ್ನು ಕಟ್ಟಿಕೊಡುವ ವಿಧಾನ ವಿಶಿಷ್ಟವೆನ್ನಿಸುತ್ತದೆ. ಹೊಲೆಯರ ಸಾಗುವಳಿ ನೀರಿನ ಜ್ಞಾನ, ಗೊಬ್ಬರ ತಯಾರಿ ಜ್ಞಾನ ಹಾಗೂ ಚರ್ಮ ಕೈಗಾರಿಕೆ ಕೃಷಿ ಕ್ರಾಂತಿ, ನೀರಾವರಿ- ಚರ್ಮ ಕೈಗಾರಿಕೆ ಹೀಗೆ ಶ್ರಮ ಸಂಸ್ಕೃತಿಗೆ ತಾತ್ವಿಕತೆಯ ಚೌಕಟ್ಟು ಒದಗಿಸುವ ಲೇಖಕರು ಅವನ್ನು 'ಜ್ಞಾನ' ಎಂದು ಗುರುತಿಸುವುದು ವಿಶೇಷ. ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾದ ಈ ಪುಸ್ತಕಗಳು ತಮ್ಮ 'ಗಾಢ' ಚಿಂತನೆಯ ಕಾರಣದಿಂದ ಮರುಓದುಗಳನ್ನು ನಿರೀಕ್ಷಿಸುತ್ತವೆ. ಬಿ. ಸುಜ್ಞಾನಮೂರ್ತಿ ಅವರ ಅನುವಾದವು ಸೊಗಸಾಗಿದೆ. ಓದುತ್ತಿರುವುದು ಕನ್ನಡೇತರ ಕೃತಿಯ ಅನುವಾದ ಎನ್ನಿಸದೇ ಇರುವಷ್ಟು ಸಹಜವಾಗಿದೆ. ಇಂತಹ ಅಪರೂಪದ-ಮಹತ್ವದ ವೈಚಾರಿಕ ಕೃತಿಗಳನ್ನು ಕನ್ನಡದಲ್ಲಿಯೇ ಓದುವುದಕ್ಕೆ ಅನುವು ಮಾಡಿಕೊಟ್ಟ ಸುಜ್ಞಾನಮೂರ್ತಿ ಅಭಿನಂದನಾರ್ಹರು.

( ಕೃಪೆ: ಪುಸ್ತಕಾವಲೋಕನ, ಬರಹ: ದೇವು ಪತ್ತಾರ)

Related Books